ಡಿವಿಜಿ ಸುದ್ದಿ, ದಾವಣಗೆರೆ: ಏಷ್ಯಾದಲ್ಲಿಯೇ 2ನೇ ಅತೀ ದೊಡ್ಡ ಕೆರೆ ಎಂದು ಹೆಸರುವಾಸಿಯಾಗಿರುವ ಸೂಳೆಕೆರೆಯ ಸರ್ವೆ ಕಾರ್ಯವನ್ನು ಫೆ.29 ರೊಳಗೆ ಮುಗಿಸಿಕೊಡಬೇಕು. ನಿಗದಿತ ಸಮಯಕ್ಕೆ ಸರ್ವೇ ಮುಗಿಯದಿದ್ದಲ್ಲಿ, ಟೆಂಡರ್ ದಾರ ಸಂಸ್ಥೆಗೆ ದಿನದ ಆಧಾರದ ಮೇಲೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೂಳೆಕೆರೆ(ಶಾಂತಿಸಾಗರ)ಯ ಸರ್ವೆ ಕಾರ್ಯ ವಿಳಂಬ ಧೋರಣೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೂಳೆಕೆರೆ ಸರ್ವೇಗೆ ಯಾರು ಅಡ್ಡಿ ಪಡಿಸಿಲ್ಲ. ಖಡ್ಗ ಸಮಿತಿಯ ಹೋರಾಟದ ಫಲವಾಗಿ ಸರ್ಕಾರದಿಂದ ರೂ.11 ಲಕ್ಷವನ್ನು ಬಿಡುಗಡೆಯಾಗಿದೆ. ಕೆರೆಯ ನೀರಿನ ಮಟ್ಟ ಇಳಿಮುಖವಾಗುತ್ತಿದ್ದಂತೆ ಸರ್ವೇ ಕಾರ್ಯ ಆರಂಭಿಸಿ, ಫೆ. 29 ರೊಳಗೆ ಸರ್ವೇಯ ನೀಲ ನಕಾಶೆಯನ್ನು ಜಿಲ್ಲಾ ಯೋಜನಾ ಇಲಾಖೆ ಮುಂಖಾತರ ವರದಿ ಮಂಡಿಸುವಂತೆ ಸೂಚಿಸಿದರು.
ಪಾಂಡೋಮಟ್ಟಿ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಕೆರೆಯ ವಿಸ್ತೀರ್ಣ ಎಷ್ಟಿದೆ ಎಂಬುದರ ಬಗ್ಗೆ ಎಲ್ಲಿಯೂ ಮಾಹಿತಿ ಸಿಗುತ್ತಿಲ್ಲ. ಹಾಗೂ ಕೆರೆಯ ಸುತ್ತಮುತ್ತ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಂಪೂರ್ಣವಾದ ವಿವರಣೆ ಇಲ್ಲ. ಪುರಾತನ ದಾಖಲೆಗಳಿಂದ ತಿಳಿದಿರುವಂತೆ ಸುಮಾರು 6460 ಎಕರೆ ವಿಸ್ತೀರ್ಣವನ್ನು ಈ ಕೆರೆ ಹೊಂದಿದ್ದು, ಇದರಲ್ಲಿ ಸುಮಾರು 950 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿದೆ. ಇದನ್ನು ಬಿಟ್ಟರೆ ಯಾವುದೇ ನಿಖರ ಮತ್ತು ಸ್ಪಷ್ಟವಾದ ಮಾಹಿತಿ ಇಲ್ಲ ಎಂದರು.

ಕರ್ನಾಟಕ ನೀರಾವರಿ ನಿಗಮದಿಂದ ರೂ.11 ಲಕ್ಷ ಬಿಡುಗಡೆಯಾಗಿದೆ. ಆದರೆ ಸರ್ವೇ ಕಾರ್ಯ ನಡೆಸದೇ ನೀರಾವರಿ ಇಲಾಖೆಯವರು ಸಬೂಬುಗಳನ್ನು ಹೇಳುತ್ತಾ ಕೆಲಸ ಮಾಡದೇ ಮುಂದೂಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಡ್ಗ ಸಮಿತಿಯ ಹರೀಶ್ ಮಾತನಾಡಿ, ಸೂಳೆಕೆರೆ ಸರ್ವೇ ಕಾರ್ಯಕ್ಕಾಗಿ ಕಳೆದ 2 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಕೆರೆಯ ಸರ್ವೇವನ್ನು ಕಾರ್ಯ ಬೇಗ ಆರಂಭಿಸಬೇಕು. ಕೆರೆಯು ಪ್ರವಾಸಿ ದಿನನಿತ್ಯ ನುರಾರು ಜನ ಕೆರ ವೀಕ್ಷಣೆಗೆ ಬರುತ್ತಾರೆ. ಇಲ್ಲಿರುವ ರಂಗ ಮಂಟಪವು ದುರಸ್ಥಿಯಾಗಿದ್ದು, ಬೀಳುವ ಹಂತದಲ್ಲಿದೆ. ಅದನ್ನು ಸೂಕ್ತವಾಗಿ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ನೀರಾವರಿ ನಿಗಮದ ಸಹಾಯಕ ಅಭಿಯಂತರ ಜಿ.ಡಿ ಗುಡ್ಡಪ್ಪ ಮಾತನಾಡಿ, ಸರ್ವೇ ಕಾರ್ಯಕ್ಕಾಗಿ ಈಗಾಗಲೇ ಟೆಂಡರ್ ನೀಡಲಾಗಿದೆ. 2019 ರಲ್ಲಿ ಅತೀ ಹೆಚ್ಚು ಮಳೆಯಾಗಿರುವುದರಿಂದ ಕೆರೆಯಲ್ಲಿ 27 ಅಡಿ ನೀರು ನಿಂತಿದೆ. ಮತ್ತು ಕೆರೆಯ ಸುತ್ತಮುತ್ತ ಬೆಳೆಗಳನ್ನು ಬೆಳೆದಿರುವುದರಿಂದ ಸರ್ವೇ ಮಾಡಲು ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ 3 ಅಡಿ ಕಡಿಮೆಯಾದ, ತಕ್ಷಣ ಸರ್ವೇ ಕಾರ್ಯ ಆರಂಭಿಸಲಾಗುವುದು. ಮತ್ತು ಸರ್ಕಾರದಿಂದ ಕೆರೆಯ ಅಭಿವೃದ್ಧಿಗಾಗಿ ರೂ. 10 ಅನುದಾನ ಬಿಡುಗಡೆಯಾಗಿದ್ದು, ಸ್ಟೀಲ್ ಹ್ಯಾಂಡ್ವಾಲ್ ಸ್ಟ್ಯಾಂಡ್ಗಳನ್ನು ನಿರ್ಮಿಸಲಾಗುವುದು ಹಾಗೂ 3.5 ಲಕ್ಷದಲ್ಲಿ ರಂಗಮಂಟಪದ ದುರಸ್ಥಿ ಕಾರ್ಯ ನಡೆಸಲಾಗುವುದು ಎಂದರು.
ಜಿ.ಪಂ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಈ ಬಾರಿಯ ಅಧಿಕ ಮಳೆಯಿಂದಾಗಿ ಕೆರೆ ತುಂಬಿದೆ. ಕೆರೆಯ ನೀರು ತುಂಬಿಕೊಂಡಿರುವ ಜಾಗವನ್ನು ಕೆರೆಯ ಗಡಿ ಎಂದು ನಿರ್ಧರಿಸಿದರೆ ಸರ್ವೇ ಕಾರ್ಯ ಮಾಡಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಕೆರೆಯ ಸರ್ವೆ ಕಾರ್ಯಕ್ಕಾಗಿ ಉಪವಿಭಾಗಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿಕೊಂಡು ವಿಶೇಷ ಅನುದಾನದಲ್ಲಿ ಡ್ರೋಣ್ ಕ್ಯಾಮರ ಬಳಸಿಕೊಂಡು ಕೆರೆಯ ವಿಡಿಯೋ ಮಾಡಿ ಈಗಿರುವ ನೀರು ಯಾವ ಹರಿಯುತ್ತದೆ ಎಂದು ದಾಖಲೆಗಳನ್ನು ಸಂಗ್ರಹಿಸಬೇಕು ಎಂದರು.
ಸಭೆಯಲ್ಲಿ ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರ ಮಲ್ಲಪ್ಪ, ಚನ್ನಗಿರಿ ತಹಶೀಲ್ದಾರರು ನಾಗರಾಜ್, ಖಡ್ಗ ಸಮಿತಿ ಸದಸ್ಯರಗಳು ಉಪಸ್ಥಿತರಿದ್ದರು.