ಡಿವಿಜಿ ಸುದ್ದಿ, ಮೈಸೂರು: ವಿರೋಧ ಪಕ್ಷದವರು ಬೀದಿಯಲ್ಲಿ ನಿಂತು ಲೆಕ್ಕ ಕೇಳುವುದಲ್ಲ, ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಲಿ. ಲೆಕ್ಕ ಎಲ್ಲಿಗೂ ಹೋಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ಲೂಟಿ ಹೊಡೆದಿದೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಸಿದ ನೂತನ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ , ಗ್ರಾಮ ಪಂಚಾಯಿತಿ ಸದಸ್ಯ ಕೂಡ ಬೀದಿಯಲ್ಲಿ ನಿಂತು ಈ ರೀತಿ ಲೆಕ್ಕ ಕೇಳುವುದಿಲ್ಲ. ಆದರೆ, ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದವರು ಈ ರೀತಿ ಪ್ರಶ್ನೆ ಮಾಡಿದರೆ ಹೇಗೆ? ಎಂದರು.
ಸಾಹಿತ್ಯ ಕ್ಷೇತ್ರದಿಂದ ನಾನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಂಡಿದ್ದೇನೆ. ಕೆಲವರು ನಾನು ಬರೆದಿದ್ದು ಕಾದಂಬರಿ ಅಲ್ಲ; ಬದಲಾಗಿ ರಾಜಕೀಯ ಸಾಹಿತ್ಯ. ಅದನ್ನು ಗುರುತಿಸಿ ಗೌರವ ನೀಡಿರುವುದು ಸಂತೋಷ ತಂದಿದೆ. ನನ್ನ ಆಯ್ಕೆಗೆ ಯಾವುದೇ ತಾಂತ್ರಿಕ ಅಡೆತಡೆ ಇಲ್ಲ ಎಂದರು.
ಮೈತ್ರಿ ಸರ್ಕಾರದ ಪತನಕ್ಕೆ ತಮ್ಮ ಜೊತೆ ಇದ್ದವರೇ ಕಾರಣ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವಾಗಲೂ ಅರ್ಧ ಸತ್ಯ ಮಾತ್ರ ಹೇಳಿದ್ದಾರೆ. ಇನ್ನುಳಿದ ಅರ್ಧ ಸತ್ಯ ಅವರೇ ಹೇಳಬೇಕು ಎಂದರು.
ಸಿದ್ದರಾಮಯ್ಯ ಅವರ ಮನೆಯ ಡೈನಿಂಗ್ ಟೇಬಲ್ ಕೂಡ ನಾನು ನೋಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಒಂದು ಲೋಟ ಕಾಫಿ ಕೂಡ ನೀಡಿರಲಿಲ್ಲ. ಸಿಎಂ ಯಡಿಯೂರಪ್ಪ ಅವರ ಮನೆ ಸದಾ ತೆರೆದಿರುತ್ತದೆ ಎಂದರು.



