ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸಂಭವಿಸುತ್ತಿರುವ ಸಾವಿನ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿದ್ದು, ಈ ಪ್ರಮಾಣವನ್ನು ಕಡಿಮೆಗೊಳಿಸಲು ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಜಿಲ್ಲಾಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞ ವೈದ್ಯರುಗಳನ್ನು ಉದ್ದೇಶಿಸಿ ಮಾತಾನಾಡಿದ ಅವರು, ನಮ್ಮ ಜಿಲ್ಲೆಯ ವೈದ್ಯರ ತಂಡ ಹಾಗೂ ಕೋವಿಡ್ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಾವಿನ ಪ್ರಮಾಣ ಕಡಿಮೆ ಆಗುತ್ತಿಲ್ಲ ಎಂದರು.
ನಮ್ಮಲ್ಲಿ ಸಾಕಷ್ಟು ತಜ್ಞ ವೈದ್ಯರುಗಳು ಇದ್ದಾಗಿಯೂ ನಾವು ಎಲ್ಲಿ ಎಡವುತ್ತಿದ್ದೇವೆ. ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ ತಗ್ಗಿಸಲು ಅನುಸರಿಸಬೇಕಾದ ಮಾಗೋಪಾಯದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಎಷ್ಟೇ ಕೇಸ್ ಬರಲಿ ನಿರ್ವಹಿಸಲು ಜಿಲ್ಲಾಡಳಿತ ತಂಡ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ವೇಕ್ಷಣ ತಂಡ ಲ್ಯಾಬ್ ಪರೀಕ್ಷಾ ಪ್ರಮಾಣ ಹೆಚ್ಚಿಸಬೇಕು. ತಾಲ್ಲೂಕುವಾರು ನೀಡಿರುವ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನಗಳನ್ನು ತೀವ್ರ ಅನಾರೋಗ್ಯ ವ್ಯಕ್ತಿಗಳು ಇರುವ ಮನೆಯ ಬಳಿಯೇ ಸಾಗಿ ಪರೀಕ್ಷಗೆ ಒಳಪಡಿಸಬೇಕು. ಈ ಮೂಲಕ ಅದಷ್ಟು ಬೇಗ ಸೋಂಕಿಗೆ ಸಿಲುಕಿರುವರನ್ನು ಹಾಗೂ ಸೋಂಕಿಗೆ ಒಳಗಾಗುರುವರನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.
ಕೇರಳ ರಾಜ್ಯದ ಮಾದರಿಯಲ್ಲಿ ಸಾಮೂಹಿಕ ಸಹಭಾಗಿತ್ವದಲ್ಲಿ ಎಲ್ಲರೂ ಮುಂದೆ ಬಂದು ಕೆಲಸ ಮಾಡಬೇಕು.ನಮ್ಮ ಜನ ಪ್ರತಿನಿಧಿಗಳು, ಮುಖಂಡರೂ, ಈ ಕಾರ್ಯದಲ್ಲಿ ಕೈಜೋಡಿಸಬೇಕು.ಈಗಾಗಲೇ ರಚಿಸಲಾಗಿರುವ ವಾರ್ಡ್ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಮಹಾನಗರಪಾಲಿಕೆ ಆಯುಕ್ತರು ಈ ಸಮಿತಿಗಳ ತರಬೇತಿ ಕಾರ್ಯನಿರ್ವಹಣೆಯನ್ನು ಯಶಸ್ವಿಯಾಗಿ ನೋಡಿಕೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಎಷ್ಟೇ ಕೇಸ್ ಗಳು ಬಂದರು ನಿರ್ವಹಿಸಲು ಸಿದ್ದವಾಗಿರಬೇಕು. ಅದಷ್ಟು ಸೋಂಕಿತರು ವೆಂಟಿಲೇಟರ್ ಗೆ ಹೋಗುವುದನ್ನು ಕಡಿಮೆ ಮಾಡಲು ತಪಾಸಾಣೆ ತೀವ್ರವಾಗಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವಾನ್ ಮಾಹಿತಿನೀಡಿ, ಈ ಹಿಂದೆ ಕೆಲವರು ರೆಗ್ಯೂಲರ್ ಆಗಿ ಚಕ್ ಆಪ್ಗೆ ಒಳಗಾಗುತ್ತಿದ್ದರು. ಲಾಕ್ಡೌನ್ ನಂತರ ಈ ರೀತಿ ಮುಂಚಿತವಾಗಿ ತಪಾಸಣೆಗೆ ಒಳಗಾಗುವರು ಕಡಿಮೆಯಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಬಿಪಿ ಶುಗರ್ ನಂತಹ ಖಾಯಿಲೆ ಇರುವವರು ಆಸ್ಪತ್ರೆಗೆ ಬರುವುದನ್ನು ತಡಮಾಡುವುದರಿಂದ ಹೆಚ್ಚು ತೊಂದರೆಯಾಗುತ್ತಿದೆ. ಎಂದರು.
ತಜ್ಞ ವೈದ್ಯರಾದ ಡಾ.ಕಾಳಪ್ಪ ಮಾತಾನಾಡಿ, ಎಸ್ ಎಸ್ ಆಸ್ಪತ್ರೆಯಲ್ಲಿ ಒಟ್ಟು 9 ಸಾವು ಸಂಭವಿಸಿವೆ. ಇದರಲ್ಲಿ 4 ಮಂದಿ ಕೊನೆಯ 4 ಗಂಟೆ ಒಳಗೆ ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದ 4 ಮಂದಿ 24 ಗಂಟೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೀಗೆ ಕಡೇ ಗಳಿಗೆಯಲ್ಲಿ ಆಸ್ಪತ್ರೆಗೆ ಬಂದರೆ ಇತರೆ ಖಾಯಿಲೆಯೊಂದಿಗೆ ಕೊರೊನಾ ಭಾದಿತರಾದವರನ್ನು ಉಳಿಸುವುದು ಕಷ್ಟ ಎಂದರು.
ಡಾ. ಮೀನಾಕ್ಷಿ ಮಾತನಾಡಿ, ನಗರದಲ್ಲಿ ಒಟ್ಟು 70 ಕಂಟೈನ್ಮೆಂಟ್ಜೋನ್ಗಳಿವೆ. ಆರೋಗ್ಯ ಸಿಬಂದ್ದಿಗಳು ಕಡಿಮೆ ಇದ್ದಾರೆ ಹಾಗೂ ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ತೊಡಗಿದ್ದಾರೆ. ಹಾಗಾಗಿ ಸರ್ವೇಕ್ಷಣೆ ಸ್ವಲ್ಪ ತಡವಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ ಸಿಇಒ ಪದ್ಮಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಡಿಹೆಚ್ಓ ರಾಘವೇಂದ್ರಸ್ವಾಮಿ, ಡಾ.ಸುರೇಂದ್ರ, ಡಾ.ಮಹಾಂತೇಶ್,ಡಾ. ರವಿ, ಡಾ.ಪ್ರಸಾದ್ ಜಿಲ್ಲಾಕೋವಿಡ್ ನೋಡೆಲ್ ಅಧಿಕಾರಿ ಪ್ರಮೋದ್ ನಾಯಕ್, ಡಾ.ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.