ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತವು ನೈರುತ್ಯ ಮುಂಗಾರು ಮಾರುತಗಳಿಗೆ ಅಡ್ಡಿಪಡಿಸುತ್ತಿದೆ. ಈ ಹಿನ್ನೆಲೆ ಜೂನ್ 2-4 ರ ನಡುವೆ ಕೇರಳಂಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ಇದಕ್ಕೂ ಮೊದಲು ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ ಮುಂಗಾರು ಕೇರಳಂ ಪ್ರವೇಶಿಸಲಿದ್ದು, ಮೇ 26ಕ್ಕೆ ನೈರುತ್ಯ ಮುಂಗಾರಿನ ಆಗಮನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಆದರೆ ಹವಾಮಾನ ಪರಿಸ್ಥಿತಿ ಬದಲಾದ ಕಾರಣ ಇಲಾಖೆ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1 ರಂದು ಕೇರಳಂಗೆ ಮುಂಗಾರು ಪ್ರವೇಶಿಸುತ್ತದೆ. ಮುಂಗಾರು ಆರಂಭವಾಗಲು ಪಶ್ಚಿಮ ದಿಕ್ಕಿನಿಂದ ಬಲವಾದ ಮಾರುತಗಳು ಬೀಸಬೇಕಾಗುತ್ತದೆ. ಇದಲ್ಲದೆ, ಬಲವಾದ ಮೋಡಗಳ ರಚನೆಯಾಗಿರಬೇಕು. ಆದರೆ ಈಗ ಹವಾಮಾನದಲ್ಲಾದ ಬದಲಾವಣೆಯಿಂದ ಮುಂಗಾರು ತಡವಾಗುತ್ತಿದೆ.
ಮುಂಗಾರು ಪ್ರವೇಶವಾಗದಿದ್ದರೂ ಕೇರಳಂನಲ್ಲಿ ನಿರಂತರ ಮಳೆಯಾಗುತ್ತಲೇ ಇದೆ. ತಿರುವನಂತಪುರ, ಕೊಲ್ಲಂ, ಅಳಪ್ಪುಳ, ಎರ್ನಾಕುಲಂನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಒಂದೆಡೆ ಕೇರಳಂ ಮುಂಗಾರಿನ ಆಗಮನಕ್ಕೆ ಸಜ್ಜಾಗಿದೆ. ಇನ್ನೊಂದೆಡೆ ಉತ್ತರ ಭಾರತದಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ವಿದರ್ಭದಲ್ಲಿ 47.6 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುತ್ತಿದೆ. ಹವಾಮಾನ ಇಲಾಖೆ ಬಿಸಿಗಾಳಿಯ ಎಚ್ಚರಿಕೆ ನೀಡಿದೆ.
ಜೂನ್ನಿಂದ ಸೆಪ್ಟೆಂಬರ್ವರೆಗೆ ಸುರಿಯುವ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಹವಾನಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಮುಂಗಾರು ಅವಧಿಯ ದ್ವಿತೀಯಾರ್ಧದಲ್ಲಿ ಮಳೆ ಕಡಿಮೆಯಾಗಬಹುದು ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಸದ್ಯ ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಸಂಜೆ ಧಾರಾಕಾರ ಮಳೆಯಾಗುತ್ತಿದೆ.



