ಬೆಂಗಳೂರು: ದೇಶದ ಬಹುತೇಕ ಭಾಗಗಳಲ್ಲಿ ಮಳೆ ಮೋಡಗಳು ದಿಢೀರ್ ಕಣ್ಮರೆಯಾಗಿವೆ. ಈ ಉಪಗ್ರಹ ಚಿತ್ರಗಳು ನೋಡಿದ್ರೆ, ಈ ಬಾರಿ ಮುಂಗಾರು ಮಳೆ ಮತ್ತಷ್ಟುದುರ್ಬಲಗೊಳ್ಳುವ ಆತಂಕ ಕಾಡುತ್ತಿದೆ. ಈ ಸುದ್ದಿ ರೈತರರಲ್ಲಿ ಮತ್ತೆ ಆತಂಕ ಮನೆ ಮಾಡುವಂತಾಗಿದೆ. ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ರೈತರು ಕಂಗಾಲು ಆಗಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದ್ರೆ ಈ ಬಾರಿ ಭೀಕರ ಬರಗಾಲ ಮುನ್ಸೂಚನೆ ನಾ..? ಎನ್ನುವ ಆತಂಕ ಎದುರಾಗಿದೆ.
ಮುಂಗಾರು ಶುರುವಾಗಿ ಒಂದುವರೆ ತಿಂಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಸುರಿಯದೆ ಇರುವುದು ಆತಂಕ ಹೆಚ್ವಿಸಿದೆ. ಇದರ ನಡುವೆ ಜುಲೈ 11ರ ಶನಿವಾರ ಉಪಗ್ರಹ ಬಿಡುಗಡೆ ಮಾಡಿರುವ ದೃಶ್ಯಗಳು ಅಕ್ಷರಶಃ ಅಚ್ಚರಿ ಮೂಡಿಸುವಂತಿದ್ದು, ದೇಶದ ಶೇ.70 ರಿಂದ 80 ರಷ್ಟು ಭಾಗದಲ್ಲಿ ಮಳೆ ಮೋಡಗಳೇ ಇಲ್ಲದೆ ಖಾಲಿ ಖಾಲಿಯಾಗಿ ಕಾಣುತ್ತಿದೆ.
ಇದ್ದಕ್ಕಿದ್ದಂತೆ ಒಣ ಹವಾಮಾನ ಆವರಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಮಳೆ ಮೋಡಗಳು ದಿಢೀರ್ ಕಣ್ಮರೆಯಾಗಿದ್ದು, ಮುಂಗಾರು ಮಳೆಯ ಈ ಕಣ್ಣಾಮುಚ್ಚಾಲೆ ಆಟ ರೈತರಲ್ಲಿ ಆತಂಕ ಹೆಚ್ಚಿಸಿದೆ. ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗಿರುವ ಶಕ್ತಿಶಾಲಿ ‘ಎಲ್ ನಿನೊ’ ಹವಾಮಾನ ವಿದ್ಯಮಾನವು ಈ ಬಾರಿ ಭಾರತದ ಮುಂಗಾರು ಮಳೆಗೆ ತಡೆಗೋಡೆಯಂತೆ ನಿಂತಿದೆ.
ಹಿಂದೂ ಮಹಾಸಾಗರದಿಂದ ಬರುವ ತೇವಾಂಶ ಭರಿತ ಮಾರುತಗಳು ಹಾಗೂ ಮಾನ್ಸೂನ್ ಆಧಾರದ ಮೇಲೆ ಭಾರತದ ಕೃಷಿ ನಿಂತಿದೆ. ಆದರೆ, ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಅತಿ ಉಷ್ಣವಲಯದ ಚಂಡಮಾರುತವು ಭಾರತಕ್ಕೆ ಬರಬೇಕಿದ್ದ ತೇವಾಂಶ ಭರಿತ ಮಾರುತಗಳನ್ನು ತನ್ನತ್ತ ಸೆಳೆದುಕೊಂಡಿದೆ. ಈ ಜಾಗತಿಕ ಹವಾಮಾನ ವೈಪರೀತ್ಯಗಳ ನೇರ ಪರಿಣಾಮವಾಗಿ ಭಾರತದ ಮಾನ್ಸೂನ್ ಮಾರುತಗಳು ದಿಕ್ಕು ಬದಲಿಸಿದ್ದು, ಇದರಿಂದ ಮಳೆಯ ಕೊರತೆ ಮುಖ್ಯ ಕಾರಣವಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜುಲೈ ತಿಂಗಳ ಒಟ್ಟಾರೆ ಮಳೆಯು ದೀರ್ಘಾವಧಿಯ ಸರಾಸರಿಗಿಂತ ಕಡಿಮೆಯಿರಲಿದ್ದು, ಮಾಸಿಕ ಮಳೆಯ ಪ್ರಮಾಣವು ವಾಡಿಕೆಗಿಂತ ಶೇ. 94 ರಷ್ಟು ತಗ್ಗುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಮುಂಗಾರು ಮಳೆ ಚೇತರಿಸಿಕೊಳ್ಳುವುದು ಮತ್ತು ಸಕ್ರಿಯವಾಗುವುದು ಸಂಪೂರ್ಣವಾಗಿ ಪೆಸಿಫಿಕ್ ಮಹಾಸಾಗರದ ಹವಾಮಾನ ವ್ಯವಸ್ಥೆಯ ಬದಲಾವಣೆಗಳ ಮೇಲೆ ಅವಲಂಬಿತವಾಗಿದೆ. ಅಲ್ಲಿನ ಚಂಡಮಾರುತ ಮತ್ತು ಎಲ್ ನಿನೊ ಪ್ರಭಾವ ತಗ್ಗಿದರೆ ಮಾತ್ರ ಮತ್ತೆ ಮಳೆಯಾಗಲಿದೆ. ಇಲ್ಲದಿದ್ರೆ ಇದೇ ರೀತಿಯ ಕಣ್ಣಾಮುಚ್ಚಾಲೆ ಇರಲಿದೆ.


