ದಾವಣಗೆರೆ: ನಗರದ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜೂನ್ 9ರವರೆಗೆ ವಿವಿಧ ರೈಲುಗಳ ಸಂಚಾರದಲ್ಲಿ ನಿಯಂತ್ರಣ, ವೇಳಾಪಟ್ಟಿ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಜೂನ್ 8ರವರೆಗೆ ವಾಸ್ಕೋ-ಡ-ಗಾಮಾ ದಿಂದ ಹೊರಡುವ ವಾಸ್ಕೋ-ಡ-ಗಾಮಾ – ಯಶವಂತಪುರ ದೈನಂದಿನ ಎಕ್ಸ್ಪ್ರೆಸ್ (17310) ರೈಲನ್ನು ಮಾರ್ಗಮಧ್ಯೆ 100 ನಿಮಿಷ ಹಾಗೂ ಜೂನ್ 1ರಂದು ಉದಯಪುರ ಸಿಟಿಯಿಂದ ಹೊರಡುವ ಮೈಸೂರು ಹಮ್ಸಫರ್ ಎಕ್ಸ್ಪ್ರೆಸ್ (19667) ರೈಲನ್ನು 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ನಾಳೆ ದಿನಾಂಕ 31ರಿಂದ ಜೂನ್ 9ರವರೆಗೆ ಧಾರವಾಡದಿಂದ ಹೊರಡುವ ಸಿದ್ದಗಂಗಾ ಎಕ್ಸ್ಪ್ರೆಸ್ (12726) ರೈಲನ್ನು 50 ನಿಮಿಷ ಹಾಗೂ ಅರಸೀಕೆರೆ – ಹುಬ್ಬಳ್ಳಿ ಎಕ್ಸ್ಪ್ರೆಸ್ (16213) ರೈಲನ್ನು 30 ನಿಮಿಷಗಳ ಕಾಲ ಮಾರ್ಗಮಧ್ಯೆ ತಡೆಹಿಡಿಯಲಾಗುವುದು.
ಇದೇ ಅವಧಿಯಲ್ಲಿ ಬೆಂಗಳೂರು – ಮೈಸೂರು ಒಡೆಯರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12614) ರೈಲು ಬೆಂಗಳೂರು ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಹೊರಡಲಿದೆ.
ಇನ್ನು ಹರಿಹರ – ಹೊಸಪೇಟೆ ಪ್ಯಾಸೆಂಜರ್ (56529) ರೈಲನ್ನು ಹರಿಹರ, ಅಮರಾವತಿ ಕಾಲೋನಿ ಮತ್ತು ತೆಲಿಗಿ ನಿಲ್ದಾಣಗಳ ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕಾರಣದಿಂದಾಗಿ ಸದರಿ ರೈಲಿಗೆ ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ.



