ದಾವಣಗೆರೆ: ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಜೊತೆಗೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಟ್ಟು 21 ಅಪಾಯಕಾರಿ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, ಅಪಫಾತ ಮುಕ್ತವಲಯವನ್ನಾಗಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದರು.
ದಾವಣಗೆರೆ: ಇಂದಿನ ರಾಶಿ ಅಡಿಕೆ ದರ ಎಷ್ಟಿದೆ..?
ಸುಪ್ರಿಂಕೋರ್ಟ್ನ ಆದೇಶದನ್ವಯ ಪುಟ್ ಬಾತ್ ತೆರವು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಜೀವ ಉಳಿದರೂ ಅದು ನಮಗೆ ಹೆಮ್ಮೆ, ಕಳೆದ ಮೂರು ವರ್ಷಗಳ ಅಪಘಾತದ ದತ್ತಾಂಶಗಳನ್ನು ಪರಿಶೀಲಿಸಿ, ಎಲ್ಲಾ ಬ್ಲಾಕ್ ಸ್ಪಾಟ್ಗಳಲ್ಲಿ ಅಗತ್ಯ ಸುಧಾರಣೆ ತರಲು ವರದಿ ಸಿದ್ಧಪಡಿಸಲಾಗುವುದು, ಅಲ್ಲದೆ ಸುಪ್ರಿಂಕೋರ್ಟ್ನ ಆದೇಶದನ್ವಯ ನಗರದ ಆಕ್ರಮಿತ ಪುಟ್ ಬಾತ್ ಗಳನ್ನು ತೆರವುಗೊಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 2025 ನೇ ಸಾಲಿಗೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಮಾರಣಾಂತಿಕ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ 146 ಮಾರಣಾಂತಿಕ ಅಪಘಾತಗಳು ವರದಿಯಾಗಿದ್ದರೆ, ಈ ಬಾರಿ ಈ ಸಂಖ್ಯೆ 139 ಕ್ಕೆ ಇಳಿದಿದ್ದು, ಒಟ್ಟು 7 ಅಪಘಾತಗಳು ಕಡಿಮೆಯಾಗಿವೆ. ಪೊಲೀಸ್ ಇಲಾಖೆಯ ನಿರಂತರ ಕಾರ್ಯಾಚರಣೆ, ಸ್ಪಾಟ್ ಫೈನ್, ಹೆಲ್ಮೆಟ್ ಕಡ್ಡಾಯ ಜಾರಿ ಮತ್ತು ಅಪ್ರಾಪ್ತ ವಯಸ್ಕರ ಚಾಲನೆಗೆ ತಡೆ ಇದಕ್ಕೆ ಪ್ರಮುಖ ಕಾರಣ ಎಂದರು.
ಹೆದ್ದಾರಿ ದೀಪಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಿಗೆ ವಿದ್ಯುತ್ ಸಂಪರ್ಕವನ್ನು ಯಾವುದೇ ವಿಳಂಬವಿಲ್ಲದೆ ತುರ್ತಾಗಿ ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲ ಆರಂಭವಾಗಿರುವುದರಿಂದ ರಸ್ತೆಗಳ ಮೇಲಿನ ಗುಂಡಿಗಳನ್ನು ತಕ್ಷಣ ಮುಚ್ಚಲು ಹಾಗೂ ಫ್ಲೋರೊಸೆಂಟ್ ವೈಟ್ ಪೇಂಟಿಂಗ್ (ಮಾರ್ಕಿಂಗ್) ಮಾಡಲು ಮಹಾನಗರ ಪಾಲಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳು ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ರೇಡಿಯಂ ಸ್ಟಿಕ್ಕರ್ ಅಳವಡಿಸಿ
ಇತ್ತೀಚೆಗೆ ಕಿರಿದಾದ ಸೇತುವೆಯೊಂದರ ಮೇಲೆ ನಡೆದ ಅಪಘಾತದಲ್ಲಿ ಟ್ರ್ಯಾಕ್ಟರ್ಗೆ ಇನ್ಶೂರೆನ್ಸ್ ಹಾಗೂ ಚಾಲಕನಿಗೆ ಲೈಸೆನ್ಸ್ ಇಲ್ಲದಿರುವುದು ಕಂಡುಬಂದಿದೆ, ಟ್ರ್ಯಾಕ್ಟರ್ಗಳನ್ನು ಇತರ ಉದ್ದೇಶಗಳಿಗೆ ಬಳಸುವುದು, ಕರ್ಕಶ ಶಬ್ದ ಮಾಡುವುದು, ಹಾಗೂ ಪರವಾನಗಿ ಇಲ್ಲದೆ ಚಾಲನೆ ಮಾಡುವವರ ವಿರುದ್ಧ ಆರ್.ಟಿ.ಓ ಅಧಿಕಾರಿಗಳು ವಿಶೇಷ ಜಾಗೃತಿ ಮತ್ತು ತಪಾಸಣಾ ಅಭಿಯಾನ ಹಮ್ಮಿಕೊಳ್ಳಬೇಕು ಹಾಗೂ ಬಿತ್ತನೆ ಚಟುವಟಿಕೆಗಳು ಆರಂಭವಾಗುತ್ತಿರುವುದರಿಂದ ರಸ್ತೆಗಿಳಿಯುವ ಎಲ್ಲಾ ಟ್ರ್ಯಾಕ್ಟರ್ ಹಾಗೂ ಬಂಡಿಗಳ ಹಿಂಭಾಗದಲ್ಲಿ ಕಡ್ಡಾಯವಾಗಿ ರೇಡಿಯಂ ಸ್ಟಿಕ್ಕರ್ (Reflective Stickers) ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕಳೆದ ತಿಂಗಳು ಶಾಲಾ ವಾಹನಗಳ ಚಾಲಕರ ತಪಾಸಣೆ ನಡೆಸಲಾಗಿದ್ದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಪ್ರಕರಣಗಳನ್ನು ಪತ್ತೆಹಚ್ಚಿ ದಂಡ ವಿಧಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಆರ್.ಟಿ.ಓ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಶಾಲಾ ಬಸ್ಸುಗಳ ಫಿಟ್ನೆಸ್, ಮಿತಿಮೀರಿದ ಮಕ್ಕಳ ಸಾಗಣೆಯನ್ನು ನಿಯಂತ್ರಿಸಲು ಕ್ರಮವಹಿಸಬೇಕು, ಕೆ.ಎಸ್.ಆರ್.ಟಿ.ಸಿ , ಖಾಸಗಿ ಬಸ್ ಚಾಲಕರು ಹಾಗೂ ಶಾಲಾ ಬಸ್ ಚಾಲಕರಿಗೆ ಡಿಡಿಪಿಐ, ಡಿಡಿಪಿಯು ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ಕಾರ್ಯಾಗಾರ ಏರ್ಪಡಿಸಲು ಆರೋಗ್ಯ ಇಲಾಖೆಗೆ ಸೂಚಿಸಿದರು.
ಸಾರ್ವಜನಿಕರು ಅಪಘಾತ ತಡೆಗೆ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರೂ, ಅವೈಜ್ಞಾನಿಕ ಹಂಪ್ಸ್ಗಳಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ, ಸುಪ್ರೀಂಕೋರ್ಟ್ ಆದೇಶದ ಅನ್ವಯ ಅವೈಜ್ಞಾನಿಕ ಉಬ್ಬುಗಳನ್ನು ತೆರವುಗೊಳಿಸಬೇಕಿದ್ದು, ಬದಲಿಗೆ ವೈಜ್ಞಾನಿಕವಾಗಿ ರಂಬ್ಲರ್ ಸ್ಟ್ರಿಪ್ಸ್ (Rumbler Strips) ಅಳವಡಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಕನಿಷ್ಠ 20 ರಿಂದ 50 ಮೀಟರ್ ದೂರದಲ್ಲೇ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಕ್ರಮವಹಿಸುವಂತೆ ಲೊಕೋಪಯೋಗಿ ಇಲಾಖೆಯ ಇಂಜಿನಿಯರ್ ರವರಿಗೆ ಸೂಚನೆ ನೀಡಿದರು.
ಜಗಳೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 50 ರ ದೊಣ್ಣೆಹಳ್ಳಿ ಬಳಿ ಇರುವ ಸಣ್ಣ ಸೇತುವೆ ಕಿರಿದಾಗಿದ್ದು, ಗ್ರಾಮೀಣ ಭಾಗದ ಲಿಂಕ್ ರಸ್ತೆಗಳಿಂದ ವಾಹನಗಳು ಅತಿ ವೇಗವಾಗಿ ಹೆದ್ದಾರಿ ಸೇರುವುದರಿಂದ ಇತ್ತೀಚೆಗೆ ಇಬ್ಬರು ಸಾವನ್ನಪ್ಪಿದ್ದರು. ಅಧಿಕಾರಿಗಳು ಪರಿಶೀಲಿಸಿ ಈ ಸ್ಥಳವನ್ನು ಅಪಘಾತ ವಲಯ ಎಂದು ಗುರುತಿಸಿದ್ದು, ರಸ್ತೆ ಅಗಲೀಕರಣ ಹಾಗೂ ಅಗತ್ಯ ಮಾರ್ಪಾಡುಗಳನ್ನು ಮಾಡಲು ಜಂಟಿ ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿ -48 ನಲ್ಲಿ ಬರುವ ಅಂಡರ್ ಪಾಸ್ ಸೇತುವೆಯು ಎಸ್.ಎಸ್ ಹೈ-ಟೆಕ್ ಆಸ್ಪತ್ರೆ , ರಾಮನಗರ ಸೇರಿದಂತೆ ಅನೇಕ ಹಳ್ಳಿಗಳಿಗೆ ಸಂಪರ್ಕವನ್ನು ಕಲ್ಪಿಸುವ ಅಂಡರ್ ಪಾಸ್ ಬಹಳ ಕಿರಿದಾಗಿದ್ದು ಅಂಬುಲೆನ್ಸ್, ಲಾರಿ, ಬಸ್ ಗಳ ಓಡಾಟಕ್ಕೆ ಬಹಳ ದುಸ್ತರವಾಗಿರುತ್ತದೆ. ಈ ಅಂಡರ್ ಪಾಸ್ ಸೇತುವೆಯನ್ನು ಅಗಲೀಕರಣ ಮಾಡಲು ಕ್ರಮವಹಿಸುವಂತೆ ಎನ್.ಹೆಚ್.ಎ.ಐ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ಸರ್ಕಾರದ ಪಿಎಂ ರಾಹತ್ ಯೋಜನೆಯ ಅಡಿಯಲ್ಲಿ ರಸ್ತೆ ಅಪಘಾತ ಸಂತ್ರಸ್ತರಿಗೆ ರೂ.1.50 ಲಕ್ಷದವರೆವಿಗೆ ನಗದು ರಹಿತ ಚಿಕಿತ್ಸೆಯನ್ನು ನೀಡಲು ಅವಕಾಶವಿದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಸೂಕ್ತ ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ ಅವರು ಮಾತನಾಡಿ, ಹೆದ್ದಾರಿಯ ಹಲವು ಕಡೆಗಳಲ್ಲಿ ಮೀಡಿಯನ್ (ರಸ್ತೆ ವಿಭಾಜಕ) ಗ್ಯಾಪ್ಗಳಿರುವುದರಿಂದ ಚಾಲಕರು ಆಹಾರ ಮತ್ತಿತರ ಕಾರಣಗಳಿಗಾಗಿ ರಸ್ತೆ ದಾಟುವಾಗ ಭೀಕರ ಅಪಘಾತಗಳು ಸಂಭವಿಸುತ್ತಿವೆ , ವಿಶೇಷವಾಗಿ ಬಾಡ ಕ್ರಾಸ್ ಬಳಿ ಕಳೆದ ನಾಲ್ಕು ತಿಂಗಳಲ್ಲಿ 2 ರಿಂದ 3 ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ, ವಾಹನ ಸವಾರರು ಮತ್ತು ಪಾದಚಾರಿಗಳು ನಿಯಮ ಬಾಹಿರವಾಗಿ ರಸ್ತೆ ದಾಟುವುದನ್ನು ತಡೆಯಲು ಮೀಡಿಯನ್ಗಳಿಗೆ ಕನಿಷ್ಠ 2 ರಿಂದ 3 ಅಡಿ ಎತ್ತರದ ಕಬ್ಬಿಣದ ಮೆಶ್ (Mesh) ಅಳವಡಿಸುವಂತೆ ಎನ್ಎಚ್ಎಐ ಅಧಿಕಾರಿಗಳಿಗೆ ತಿಳಿಸಿದರು. ರಾತ್ರಿ ವೇಳೆ ಈ ಭಾಗದಲ್ಲಿ ಹೈವೇ ಪೆಟ್ರೋಲಿಂಗ್ ವಾಹನಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇನ್ನು 8 ಸಿಗ್ನಲ್ ಗಳನ್ನು ಅಳವಡಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ, ಒಂದು ಸಿಗ್ನಲ್ ನಿರ್ಮಿಸಲು ರೂ. 30.00 ಲಕ್ಷಗಳ ವೆಚ್ಚ ತಗುಲಲಿದೆ , ಅನುದಾನದ ಲಭ್ಯತೆ ನೋಡಿಕೊಂಡು ಹಂತಹಂತವಾಗಿ ನಿರ್ಮಿಸಲಾಗುವುದು. ಹಾಗೂ ಅಪಘಾತಗಳು ಹೆಚ್ಚಿರುವ ಮತ್ತು ಅಗತ್ಯವಿರುವ ಚನ್ನಗಿರಿ ಮತ್ತು ಹರಿಹರಗಳಲ್ಲಿ ನಿರ್ಮಿಸಲು ಕ್ರಮವಹಿಸಲಾಗುವುದು ಎಂದರು.
ಐಐಎಂಎಸ್ ,ಬ್ಯಾಂಕ್ ಗಳು ಅಥವಾ ಇತರೆ ಖಾಸಗಿಯವರ ಸಹಭಾಗಿತ್ವದಲ್ಲಿ ಸಿಗ್ನಲ್ ಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದರು.
ಎನ್ಎಚ್ಎಐ ಅಧಿಕಾರಿ ಸುನಿಲ್ ಅವರು ಮಾತನಾಡಿ, ಬಾಡ ಕ್ರಾಸ್ ಬಳಿ ರಸ್ತೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಅಲ್ಲದೆ, ಅಪಘಾತ ವಲಯಗಳ ಸುಧಾರಣೆಗಾಗಿ ಎನ್ಎಚ್ಎಐ ಕಡೆಯಿಂದ ತಲಾ 10 ಲಕ್ಷ ರೂ. ಗಳ ತಕ್ಷಣದ ನಿಧಿ ಲಭ್ಯವಿದ್ದು, ಅಗತ್ಯ ಬಿದ್ದರೆ ಪ್ರಾದೇಶಿಕ ಅಧಿಕಾರಿಗಳ ಅನುಮತಿಯೊಂದಿಗೆ 25 ಲಕ್ಷ ರೂ. ವರೆಗೆ ಅನುದಾನ ಬಳಸಿಕೊಳ್ಳಬಹುದು ಹಾಗೂ ಎಸ್.ಎಸ್. ಆಸ್ಪತ್ರೆಯ ಬಳಿ ಅಂಡರ್ ಪಾಸ್ ವಿಸ್ತೀರ್ಣವನ್ನು ಹೆಚ್ಚಿಸುವ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು.
ಲೊಕೋಪಯೋಗಿ ಇಲಾಖೆಯ ಇಂಜನಿಯರ್ ಗಳು, ಮಹಾನಗರ ಪಾಲಿಕೆ ಇಂಜಿನಿಯರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು


