ಡಿವಿಜಿ ಸುದ್ದಿ, ಹಾಸನ: ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಿ ಜೈಲಿಗೆ ಕಳಿಸಿ. ಜೈಲಿನಲ್ಲಿ ಊಟನಾದ್ರೂ ಸಿಗುತ್ತೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ. ಪ್ರಧಾನಿ ಮತ್ತು ಸಿಎಂ ಹೇಳಿದಂತೆ ಜನರು ಪಾಲಿಸಿದ್ದಾರೆ. ರಾಷ್ಟ್ರದ ದೊರೆ ಹೇಳಿದ ಹಾಗೆ ಕೇಳಿದ್ದೇವೆ. ದೀಪ ಹಚ್ಚಿ ಅಂದ್ರು ಹಚ್ಚಿದ್ದೇವೆ. ಯೋಗ ಮಾಡಿ ಮಾಡಿ ಅಂದ್ರು ಮಾಡಿದ್ದೀವಿ. ಆದರೆ, ಈಗ ನಮ್ಮ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ಕೊಡಲಿ ಎಂದು ಆಗ್ರಹಿಸಿದರು.
ರಾಜ್ಯದ ಜನರು ಸಿಎಂ ಫಂಡ್ ಗೆ ನೀಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಹಣ ಇಲ್ಲ ಎಂದರೆ ಸಿಎಂಗೆ ಹಣ ಎಲ್ಲಿಂದ ಬರುತ್ತೆ ಅಂತ ನಾವು ತೋರಿಸುತ್ತೇವೆ. ಪಕ್ಷಾತೀತವಾಗಿ ಜನರ ಸಮಸ್ಯೆ ಬಗ್ಗೆ ನಾವು ಕೈಜೋಡಿಸುತ್ತೇವೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಗಳು ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿ ಸ್ಥಗಿತಗೊಳಿಸಿದ್ದಾರೆ. ದಯಮಾಡಿ ಸಿಎಂ ಶಾಸಕರ ನಿಧಿ ಸ್ಥಗಿತಗೊಳಿಸಬಾರದು ಎಂದು ಆಗ್ರಹಿಸಿದರು.



