ಬೆಂಗಳೂರು: ಮಠದ ಭಕ್ತರನ್ನು ಕುಡುಕರೆಂದು ನಿಂದಿಸಿದ ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇವೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಲಿಂಗರಾಜು, ಷಣ್ಮುಖಪ್ಪ, ಉಮೇಶ್ ಬಣಕಾರ್, ಗುರುಸ್ವಾಮಿ, ಬಿ.ಸಿ.ರಾಜಪ್ಪ, ಶಿವಕುಮಾರಸ್ವಾಮಿ ಸೇರಿ ಇತರರು ಬೆಂಗಳೂರಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಆಗಸ್ಟ್ 4ರಂದು ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ದಾವಗೆರೆಯಲ್ಲಿ ಸಭೆ ಮಾಡಿ ನಂತರ ಭಕ್ತರನ್ನು ಕುಡುಕರು ಎಂದು ನಿಂದಿಸಿದ್ದಾರೆ. ಹೀಗಾಗಿ ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇವೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಏಕವ್ಯಕ್ತಿ ಹೆಸರಿನಲ್ಲಿರುವ ಟ್ರಸ್ಟ್ ರಚಿಸಿಕೊಂಡು ಸರ್ವಾಧಿಕಾರಿಯಂತೆ ಎಲ್ಲ ನಿರ್ಧಾರಗಳನ್ನುತೆಗೆದುಕೊಳ್ಳುತ್ತಿದ್ದಾರೆ ಎಂದು ಮತ್ತೆ ದೂರಿದರು.
ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀಮಠ ಪಾಲ್ಕುರಿಕೆ-ಸಿರಿಗೆರೆ ಶ್ರೀತರಳಬಾಳು ಜಗದ್ಗುರು ಬೃಹನ್ಮಠ’ ಎಂಬ ಹೆಸರಿತ್ತು. ಆದರೆ, ಈಗಿನ ಪೀಠಾಧಿಪತಿಗಳಾಗಿರುವ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಎಂದು ಬದಲಿಸಿಕೊಂಡಿದ್ದಾರೆ. 1990ರಲ್ಲಿ ಏಕಮಾತ್ರ ಟ್ರಸ್ಟಿಯ ಟ್ರಸ್ಟ್ ರಚಿಸಿಕೊಂಡು ಮಠದ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಟ್ರಸ್ಟ್ನ ಬೈ-ಲಾವನ್ನು ಕಡೆಗಣಿಸಿ ಎಲ್ಲ ರೀತಿಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
60 ವರ್ಷಕ್ಕೆ ಶಿವಾಚಾರ್ಯ ಸ್ವಾಮೀಜಿಯವರು ಪೀಠ ತ್ಯಾಗ ಮಾಡಬೇಕಿತ್ತು. 78 ವರ್ಷಗಳಾಗಿರುವ ಶಿವಮೂರ್ತಿ ಸ್ವಾಮೀಜಿ ಪೀಠ ತ್ಯಾಗ ಮಾಡದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ಧಾರೆ. ಮಠದ ಭಕ್ತರನ್ನು ಒಡೆದು ಎರಡು ಗುಂಪುಗಳನ್ನಾಗಿ ಮಾಡುತ್ತಿದ್ದಾರೆ.ಬೈ-ಲಾ ಪ್ರಕಾರ ಚುನಾವಣೆಯ ಮೂಲಕ ಸಂಘದ ಸಮಿತಿ ರಚಿಸಬೇಕು. ಆದರೆ, ಸ್ವಾಮೀಜಿ ತಮಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ, ಗುರುಗಳನ್ನಾಗಿ ನೇಮಿಸುತ್ತಿದ್ದಾರೆ. 30 ವರ್ಷಗಳಿಂದ ಸಂಘದ ಸದಸ್ಯತ್ವ ನೋಂದಣಿ ಮಾಡಿಲ್ಲ ಎಂದರು.