ದಾವಣಗೆರೆ: ಮುಂಗಾರು ಮಳೆ 2ರಿಂದ 4 ವಾರ ತಡವಾದರೆ ರೈತರು ಮುಖ್ಯ ಬೆಳೆ ಬದಲಾಯಿಸಿ, ಮಧ್ಯಮ ಮತ್ತು ಅಲ್ಪಾವಧಿ ತಳಿಗಳನ್ನು ಬಳಸಬೇಕು ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಸಲಹೆ ನೀಡಿದ್ದಾರೆ.
ರಾಗಿ ತಳಿಗಳಾದ ML-365, CPU-28, ಜೈವಿಕ ಬಲವರ್ಧಿತ ರಾಗಿ ತಳಿ ಬೆಳೆಯುವುದು ಅತ್ಯಂತ ಸೂಕ್ತವಾಗಿದೆ. ನವಣೆ ಬೆಳೆಯಲ್ಲಿ ಜೈವಿಕ ಬಲವರ್ದಿತ ತಳಿ ಹಾಗೂ ಸಜ್ಜೆ ತಳಿಗಳನ್ನು ಬಳಸಬಹುದು. ದ್ವಿದಳ ಧಾನ್ಯ ಬೆಳೆಗಳಾದ ಅವರೆ ಮತ್ತು ಅಲಸಂಧಿಯನ್ನು ರಾಗಿಯಲ್ಲಿ ಅಂತರ ಬೆಳೆಯಾಗಿ ಬೆಳೆಯುವುದು ಉತ್ತಮ.
ಏಕದಳ ಧಾನ್ಯ ಬೆಳೆಗಳಿಗೆ ಜೈವಿಕ ಗೊಬ್ಬರಗಳಾದ ಅಜೋಸ್ಪಿರಿಲಂ ಹಾಗೂ ರಂಜಕ ಕರಗಿಸುವ ಬ್ಯಾಕ್ಟೀರಿಯಾವನ್ನು ಪ್ರತಿ ಎಕರೆ ಬೀಜಕ್ಕೆ 200 ಗ್ರಾಂ ಹಾಗೂ ದ್ವಿದಳ ಧಾನ್ಯ ಬೆಳೆಗಳಿಗೆ ರೈಝೋಬಿಯಂ ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯಾವನ್ನು 200 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಬಳಸಿ ಬೀಜೋಪಚಾರ ಮಾಡುವುದರಿಂದ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಶೇ.15ರಷ್ಟು ಕಡಿಮೆ ಮಾಡಬಹುದು. ಎಲ್ಲಾ ಬೆಳೆಗಳಲ್ಲಿ ಸಮತೋಲನ ರಸಗೊಬ್ಬರದ ಬಳಕೆಯನ್ನು ಕಡ್ಡಾಯವಾಗಿ ಅನುಸರಿಸಬೇಕು.
ಬಿತ್ತನೆ ಮಾಡುವಾಗ ತೇವಾಂಶ ಕೊರತೆ ಇದ್ದರೆ ಶಿಫಾರಸ್ಸು ಮಾಡಿದ ಬಿತ್ತನೆ ಬೀಜಕ್ಕಿಂತ ಶೇ.10ರಿಂದ ಶೇ.15ರಷ್ಟು ಹೆಚ್ಚು ಬೀಜವನ್ನು ಬಳಸಬೇಕು. ಜುಲೈ 15ರ ನಂತರ ಉತ್ತಮ ಮಳೆಯಾದರೆ ಎಣ್ಣೆಕಾಳು ಬೆಳೆಯಾದ ಸೂರ್ಯಕಾಂತಿಯನ್ನು ಪ್ರತಿ ಎಕರೆಗೆ 2 ಕೆಜಿ ಬೀಜ ಬಳಸಿ ಬಿತ್ತನೆ ಮಾಡಬೇಕು. ಮಣ್ಣಿನಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ 300 ಲೀಟರ್ ಜೀವಾಮೃತವನ್ನು ಪ್ರತಿ ಎಕರೆಗೆ ಬಳಸಬೇಕು.
ಸಾವಯವ ಗೊಬ್ಬರಗಳಾದ ಎರೆಗೊಬ್ಬರ, ಹಸಿರೆಲೆ ಗೊಬ್ಬರ ಇವುಗಳನ್ನು ಹೆಚ್ಚು ಬಳಸಬೇಕು. ಮಳೆನೀರು ಕೊಯ್ಲು ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡರೆ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರನ್ನು ಒದಗಿಸಬಹುದು. ಬಿತ್ತನೆ ಮಾಡಿದ ಬೆಳೆಗಳಲ್ಲಿ ಮಳೆ ಹೆಚ್ಚಾದರೆ ಜಮೀನಿನಿಂದ ನೀರನ್ನು ಹೊರಹೋಗಲು ವ್ಯವಸ್ಥೆ ಮಾಡಿಕೊಳ್ಳಬೇಕು. ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು (13:00:45, 19:19:19) ಬೆಳೆಯ ಬೆಳವಣಿಗೆಗೆ ಅನುಗುಣವಾಗಿ 2 ರಿಂದ 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಗೊಬ್ಬರಗಳನ್ನು ಬಳಸಿ, 4 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯು 20 ರಿಂದ 25 ದಿವಸಗಳಿರುವಾಗ ಸಿಂಪಡಿಸಬೇಕು. ರೈತರು ತಪ್ಪದೇ `ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ ಅಡಿ ಬೆಳೆ ವಿಮೆಯನ್ನು ಮಾಡಿಸಿಕೊಳ್ಳಬೇಕು ಹಾಗೂ ಅತಿಯಾಗಿ ಯೂರಿಯಾ ಗೊಬ್ಬರವನ್ನು ಬಳಸಬಾರದು.
ಮಣ್ಣಿನ ತೇವಾಂಶ ನಿರ್ವಹಣೆಗಾಗಿ ಬೆಳೆ ಅವಶೇಷಗಳು ಅಥವಾ ಸಾವಯವ ವಸ್ತುಗಳನ್ನು ಮಣ್ಣಿನ ಮೇಲ್ಮೈಯಲ್ಲಿ ಹರಡುವ ಮಲ್ಚಿಂಗ್ ಪದ್ಧತಿ ಅನುಸರಿಸುವುದರಿಂದ ನೀರಿನ ಆವಿಯಾಗುವಿಕೆ ಕಡಿಮೆಯಾಗುತ್ತದೆ. ಮೇಡು-ಕಣಿವೆ ಪದ್ಧತಿಯಲ್ಲಿ ಬಿತ್ತನೆ ಮಾಡುವುದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚು ಕಾಲ ಉಳಿದುಕೊಳ್ಳುತ್ತದೆ. ಭಾರಿ ಮಳೆಯ ನಂತರ ಮಣ್ಣಿನ ಮೇಲ್ಮೈ ಗಟ್ಟಿಯಾಗಿದ್ದರೆ, ಮೇಲ್ಮಟ್ಟದ ಉಳುಮೆ ಮಾಡುವ ಮೂಲಕ ಗಟ್ಟಿಯಾದ ಪದರವನ್ನು ಒಡೆದು ಗಾಳಿಯ ಸಂಚಾರಕ್ಕೆ ಅನುಕೂಲ ಮಾಡಬೇಕು. ತೇವಾಂಶ ಕೊರತೆಯ ಸಂದರ್ಭಗಳಲ್ಲಿ ಯೂರಿಯಾ, ನ್ಯಾನೋ ಗೊಬ್ಬರಗಳು ಹಾಗೂ ಬೆಳೆ ಉತ್ತೇಜಕಗಳನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಸಸ್ಯಗಳಿಗೆ ಅಗತ್ಯ ಪೋಷಕಾಂಶಗಳು ತ್ವರಿತವಾಗಿ ದೊರೆಯುತ್ತವೆ. ತೀವ್ರ ಬರ ಪರಿಸ್ಥಿತಿಯಲ್ಲಿ ನೈಟ್ರೋಜನ್ ಮೇಲ್ಗೊಬ್ಬರವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು ಸೂಕ್ತ. ಸೋಡಿಕತೆಯನ್ನು ಕಡಿಮೆ ಮಾಡಲು ಜಿಪ್ಸಮ್ ಬಳಸುವುದರಿಂದ ಮಣ್ಣಿನ ರಚನೆ ಸುಧಾರಿಸುತ್ತದೆ. ಶೂನ್ಯ ಅಥವಾ ಕನಿಷ್ಠ ಉಳುಮೆಯಿಂದ ಮಣ್ಣಿನ ಕೊರೆತ ಕಡಿಮೆಯಾಗುತ್ತದೆ. ವೇಗವಾಗಿ ಬೆಳೆಯುವ ಆಳವಾದ ಬೇರುಗಳನ್ನು ಹೊಂದಿರುವ ಸೆಣಬು, ಡಯಾಂಚ ಮತ್ತಿತರೆ ಹೊದಿಕೆ ಬೆಳೆಗಳನ್ನು ಬೆಳೆಸುವುದರಿಂದ ತೇವಾಂಶ ಸಂರಕ್ಷಣೆ ಸಾಧ್ಯವಾಗುತ್ತದೆ.
ಅರ್ಬಸ್ಕ್ಯುಲರ್ ಮೈಕೋ ರೈಜಲ್ ಫಂಗಿ ಬಳಕೆಯಿಂದ ಬರ ಪರಿಸ್ಥಿತಿಯಲ್ಲಿಯೂ ನೀರು ಮತ್ತು ರಂಜಕದ ಲಭ್ಯತೆ ಸುಧಾರಿಸುತ್ತದೆ. ಸೂಕ್ಷ್ಮ ಜೀವಿ ಒಕ್ಕೂಟಗಳನ್ನು ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಬೆಳೆಗಳಿಗೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಮೆಕ್ಕೆಜೋಳದಲ್ಲಿ ಮಳೆಯ ಕೊರತೆಯಿಂದಾಗಿ ಸೈನಿಕ ಹುಳುವಿನ ಬಾಧೆ ಹೆಚ್ಚಾಗಲಿದ್ದು, ಇದರ ನಿರ್ವಹಣೆಗೆ ಅಜಾಡಿರಾಕ್ಟಿನ್ 5 ಮಿಲಿ ಪ್ರತಿ ಲೀಟರ್ನಂತೆ ಸಿಂಪಡಿಸಬೇಕು. ಬಾಧೆ ಹೆಚ್ಚಾದಲ್ಲಿ ಎಮಾಮೆಕ್ಟಿನ್ ಬೆಂಜೋಯೇಟ್ 0.4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸೂರ್ಯಕಾಂತಿಯ ನೆಕ್ರೋಸಿಸ್ ನಂಜುರೋಗ ನಿಯಂತ್ರಣಕ್ಕಾಗಿ ಹೊಲದ ಸುತ್ತ 4 ಸಾಲು ಸಜ್ಜೆ ಬೆಳೆಯಬೇಕು ಹಾಗೂ ಪ್ರತಿ ಎಕರೆಗೆ 8 ರಂತೆ ಹಳದಿ ಅಂಟು ಬಲೆಗಳನ್ನು ಅಳವಡಿಸಬೇಕು.
ಪ್ರಾಥಮಿಕ ಹಂತದಲ್ಲಿ ಬಾಧೆಗೊಳಗಾದ ಗಿಡಗಳನ್ನು ಕಿತ್ತು ನಾಶಪಡಿಸಿ, ಇಮಿಡಾಕ್ಲೋಪ್ರಿಡ್ 0.5 ಮಿಲಿ ಪ್ರತಿ ಲೀಟರ್ನಂತೆ ಸಿಂಪಡಿಸಬೇಕು. ನೆಲಗಡಲೆಯ ಕಾಂಡ ಕೊಳೆಯುವುದು ಮತ್ತು ಎಲೆಚುಕ್ಕೆ ರೋಗಕ್ಕೆ ಕ್ಲೋರೋಥಲೋನಿಲ್ 2 ಗ್ರಾಂ ಪ್ರತಿ ಲೀಟರ್ನಂತೆ ಸಿಂಪಡಿಸಬೇಕು.
ಅಡಿಕೆ ತೋಟಗಳಲ್ಲಿ ಜೂನ್ ತಿಂಗಳಲ್ಲಿ ಅತಿಯಾದ ತೇವಾಂಶದ ಕೊರತೆಯಿಂದ ಆಂತರಿಕ ಉಷ್ಣಾಂಶ ಹೆಚ್ಚಾಗುತ್ತಿದ್ದು, ಕೆಂಪುನುಸಿ ಮತ್ತು ಕಾಯಿಗಳು ಉದುರುತ್ತಿರುವ ಸಮಸ್ಯೆ ಹೆಚ್ಚಾಗಿದೆ. ರೈತರು ಇದರ ನಿವಾರಣೆಗೆ ಹೆಕ್ಸಿತೈಯೋಜಾಕ್ಸ್ 1.5 ಮಿಲಿ ಅಥವಾ ಪ್ರೋಪಾರ್ಗೈಟ್ 1.5 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಎಲೆಯ ಕೆಳಭಾಗದಲ್ಲಿ ಸಿಂಪಡಿಸಬೇಕು. ಬರಗಾಲದ ಛಾಯೆಯಿರುವುದರಿಂದ ಆದಷ್ಟು ಸಾವಯವ ಗೊಬ್ಬರಗಳನ್ನು ಮುಂಗಾರಿನಲ್ಲೇ ಕೊಡುವುದು ಉತ್ತಮ. ಸಂಯುಕ್ತ ರಾಸಾಯನಿಕಗಳಾದ 10:26:26 ಅಥವಾ 15:15:15 ಗೊಬ್ಬರವನ್ನು 10 ವರ್ಷ ಮೇಲ್ಪಟ್ಟ ಗಿಡಗಳಿಗೆ 200 ಗ್ರಾಂ, ಪೊಟ್ಯಾಷ್ ಗೊಬ್ಬರವನ್ನು 50 ಗ್ರಾಂ ಮತ್ತು ಲಘು ಪೋಷಕಾಂಶಗಳ ಮಿಶ್ರಣವನ್ನು 70-100 ಗ್ರಾಂ ಪ್ರತಿ ಗಿಡಕ್ಕೆ ನೀಡಬೇಕು.
ಮಳೆ ಬರದಿದ್ದರೆ ತಕ್ಷಣವೇ ನೀರಾವರಿ ಒದಗಿಸಬೇಕು. ಭೂಮಿಯಲ್ಲಿ ತೇವಾಂಶದ ನಿರ್ವಹಣೆಗೆ ಸೆಣಬು, ಡಯಾಂಚ, ವೆಲ್ವೆಟ್ ಬೀನ್ಸ್, ಹುರಳಿ ಮುಂತಾದವುಗಳನ್ನು ಹೊದಿಕೆ ಬೆಳೆಗಳಾಗಿ ಬೆಳೆಯಬೇಕು ಹಾಗೂ ಅಂತರ್ಜಲ ವೃದ್ಧಿಗೆ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.


