ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ವ್ಯಾಪ್ತಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ನಿರಂತರ ಮಳೆ ಸುರಿಯುತ್ತಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಡ್ಯಾಂಗೆ ಒಳ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇಂದಿನ ಒಳ ಹರಿವು ಬರೋಬ್ಬರಿ 36 ಸಾವಿರ ಕ್ಯೂಸೆಕ್ ನಷ್ಟು ಇದೆ. ಈ ವರ್ಷದಲ್ಲಿ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಳವಾಗಿದ್ದು, ಜಲಾಶಯ ಭರ್ತಿಯಾಗುವ ಭರವಸೆ ಮೂಡಿದೆ. ಬೇಸಿಗೆ ಹಂಗಾಮಿನ ಬೆಳೆಗೆ ನೀರು ಸಿಗುವ ಭರವಸೆ ರೈತರಲ್ಲಿ ಮೂಡಿದೆ. ಇದರಿಂದ ಭದ್ರಾ ಅಚ್ಚುಕಟ್ಟು ರೈತರು ಸಂತಸಗೊಂಡಿದ್ದಾರೆ.
ಈಗಾಗಲೇ ಮುಂಗಾರು ಬೆಳೆಗೆ ನಾಲೆಯಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಪ್ರಕಟಿಸಿದೆ. ಒಂದು ವೇಳೆ ನಿರಂತರ ಮಳೆಯಿಂದ ಡ್ಯಾಂ ತುಂಬಿದ್ರೆ ಸಲಹಾ ಸಮಿತಿ ಸಭೆ ಕರೆದು, ಈ ಬಾರಿ ಮುಂಗಾರು ಬೆಳೆಗೆ ನಾಲೆಯಿಂದ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹ ನಿಗಮ ತಿಳಿಸಿದೆ.
ಇಂದು(ಅ.3) ಬೆಳಗ್ಗೆ 6ಗಂಟೆ ಹೊತ್ತಿಗೆ ಒಳ ಹರಿವು 36,103 ಕ್ಯೂಸೆಕ್ ನಷ್ಟಿದೆ.ನೀರಿನ ಮಟ್ಟ 163.6 ಅಡಿಗೆ ಏರಿಕೆ ಕಂಡಿದೆ. ಈ ಬಾರಿಯ ಮುಂಗಾರು ಜೂನ್ ತಿಂಗಳಲ್ಲಿ ಆರಂಭವಾಗಿದರೂ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದಿದ್ದರಿಂದ ಭದ್ರಾ ಜಲಾಶಯಕ್ಕೆ ನೀರಿನ ಒಳನ ಹರಿವು ಕುಂಠಿತವಾಗಿತ್ತು. ಇದೇ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಒಳ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಜುಲೈ 15ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಿದೆ. ಅಚ್ಚುಕಟ್ಟು ಭಾಗದ ರೈತರು ನಿರಂತರ ಮಳೆಯಾಗಿ ಜಲಾಶಯ ಭರ್ತಿಯಾಗಿ ನಾಲೆಗೆ ನೀರು ಹರಿಯುವಂತಾಗಲಿ ಎಂದು ಪ್ರಾರ್ಥಿಸಿಸುತ್ತಿದ್ದಾರೆ. ಕಳೆದ ವರ್ಷ ಇದೇ ದಿನ 180.9 ಅಡಿ ನೀರು ಇತ್ತು. ಈ ವರ್ಷ ನೀರಿಕ್ಷಿತ ಮಟ್ಟದಷ್ಟು ಮಳೆ ಸುರಿದಿಲ್ಲ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :3-8-2026
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 46,250 ಟಿಎಂಸಿ
- ಗರಿಷ್ಠ ಮಟ್ಟ: 186ಅಡಿ
- ಇಂದಿನ ಮಟ್ಟ:163.6 ಅಡಿ
- ಒಳ ಹರಿವು: 36,103 ಕ್ಯೂಸೆಕ್
- ಹೊರ ಹರಿವು : 189 ಕ್ಯೂಸೆಕ್
- ಕ್ರೆಸ್ಟ್ ಗೇಟ್ : 00 ಕ್ಯೂಸೆಕ್
- ಎಡ ದಂಡೆ : 00 ಕ್ಯೂ ಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 180.9 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 8579 ಕ್ಯೂಸೆಕ್


