ದಾವಣಗೆರೆ: ಜಿಲ್ಲೆಯಲ್ಲಿ ಕೊಂಡಜ್ಜಿ, ಕೋಮಾರನಹಳ್ಳಿ ಸೇರಿದಂತೆ ಹಲವು ಕಡೆ ಕಲ್ಲು, ಗುಡ್ಡಗಳ ಸಹಿತವಾದ ಅರಣ್ಯ, ಕುರುಚಲು ಅರಣ್ಯವೂ ಇದೆ. ವನ್ಯ ಜೀವಿಗಳು, ಉಪಯುಕ್ತ ಗಿಡಮೂಲಿಕೆಗಳ ಪ್ರಬೇಧಗಳು ಜಿಲ್ಲೆಯಲ್ಲಿವೆ. ಜಿಲ್ಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸೇರಿದ ಸುಮಾರು 3 ಸಾವಿರ ಹೆಕ್ಟೇರ್ನಷ್ಟು ಭೂಮಿಯನ್ನು ಗುರುತಿಸಲಾಗಿದ್ದು, ಈ ಭಾಗದಲ್ಲಿ ಇವೆಲ್ಲವನ್ನೂ ಸಂರಕ್ಷಿಸಿಕೊಳ್ಳುವುದರ ಜೊತೆಗೆ, ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ, ಅರಣ್ಯ ನಾಶವಾಗದಂತೆ ಸಾರ್ವಜನಿಕರು, ಅರಣ್ಯ ಇಲಾಖೆಯವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಶಾಂತಿಸಾಗರ ಕೆರೆ ಪ್ರದೇಶ ಒತ್ತುವರಿ ಅತ್ಯಂತ ಗಂಭೀರ ವಿಷಯವಾಗಿದ್ದು, ಜಿಲ್ಲಾಡಳಿತ ಒತ್ತುವರಿ ತೆರವುಗೊಳಿಸಲು ನಿಯಮಾನುಸಾರ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕಿದೆ. ಶಾಂತಿಸಾಗರ, ಕೊಂಡಜ್ಜಿ ಮುಂತಾದ ಕೆರೆಗಳಲ್ಲಿ ಅಪರೂಪದ ಹಾಗೂ ವೈವಿಧ್ಯಮಯ ಪಕ್ಷಿ ಸಂಕುಲಗಳು ಇವೆ. ಹೀಗಾಗಿ ಇಂತಹವುಗಳನ್ನು ಗುರುತಿಸಿ, ಅವುಗಳನ್ನು ಪಕ್ಷಿಧಾಮ ಎಂದು ಘೋಷಿಸಲು ಮಂಡಳಿಯು ಕ್ರಮ ವಹಿಸಲಿದೆ.
ವಿನಾಶದ ಅಂಚಿನಲ್ಲಿರುವ ಅಪರೂಪದ ಔಷಧೀಯ ಸಸ್ಯಗಳನ್ನು ಗುರುತಿಸಿ, ಅವುಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುವುದು. ಈ ದಿಸೆಯಲ್ಲಿ ಜಿಲ್ಲಾವಾರು ಮಾಹಿತಿಯನ್ನು ಪಡೆದು, ವರದಿ ತಯಾರಿಸಲು ಯೋಜಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿ ಅಕೇಶಿಯಾ ನಂತಹ ಏಕಜಾತಿ ನೆಡುತೋಪುಗಳನ್ನು ಬೆಳೆಸುವುದರಿಂದ ಜೀವ ವೈವಿಧ್ಯ ಅಸ್ತಿತ್ವಕ್ಕೆ ಧಕ್ಕೆಯಾಗಲಿದ್ದು, ಸ್ಥಾನೀಯ ಜಾತಿ ಗಿಡಗಳನ್ನು ಬೆಳೆಸುವಂತಾಗಲು ಜೀವ ವೈವಿಧ್ಯ ಮಂಡಳಿ ಪ್ರಯತ್ನ ನಡೆಸಲಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಂಡು, ಸುಸ್ಥಿರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಅನಂತ ಹೆಗಡೆ ಆಶೀಸರ ಹೇಳಿದರು.
ಪಾರ್ಕ್ಗಳ ಪುನಶ್ಚೇತನ :ಜಿಲ್ಲೆಯ ದಾವಣಗೆರೆ ನಗರಪಾಲಿಕೆ ಸೇರಿದಂತೆ ವಿವಿಧ ನಗರ, ಪಟ್ಟಣಗಳಲ್ಲಿ ಹಲವಾರು ಪಾರ್ಕ್ಗಳಿದ್ದು, ಇವು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹೀಗಾಗಿ ಈ ಎಲ್ಲ ಪಾರ್ಕ್ಗಳನ್ನು ಪುನಶ್ಚೇತನಗೊಳಿಸುವುದು ಅಗತ್ಯವಾಗಿದೆ. ಪಾರ್ಕ್ಗಳಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಿ, ರಕ್ಷಣೆ ಹಾಗೂ ಅಭಿವೃದ್ಧಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ನಗರ, ಪಟ್ಟಣಗಳಲ್ಲಿ ತ್ಯಾಜ್ಯ ವಿಲೇವಾರಿ ಸವಾಲಿನ ವಿಷಯವಾಗಿದ್ದು, ಅಡುಗೆ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆಗೆ ಅವಕಾಶವಿದೆ. ಹಾಸ್ಟೆಲ್ಗಳು, ಕಲ್ಯಾಣಮಂಟಪಗಳಲ್ಲಿ ಇಂತಹ ವಿಧಾನ ಅಳವಡಿಕೆಗೆ ಅವಕಾಶವಿದ್ದು, ಈ ಬಗ್ಗೆ ಸ್ಥಳಗಳನ್ನು ಗುರುತಿಸಿ, ಜಾರಿಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.