ದಾವಣಗೆರೆ: ಹೆಚ್ಚು ನೀರಾವರಿ ಅವಲಂಭಿತ ಬೆಳೆಗಳನ್ನು ಮುಂದೂಡಲು ರೈತರಿಗೆ ಜಾಗೃತಿ ಮೂಡಿಸಿ, ಬೆಳೆ ವಿಮೆ ಕಡ್ಡಾಯವಾಗಿ ಮಾಡಿಸಿ, ಪ್ರತಿ ತಿಂಗಳು ರೈತರೊಂದಿಗೆ ತಹಶೀಲ್ದಾರರು ಸಭೆ ನಡೆಸಿ , ರೈತರ ಮತ್ತು ಕಾರ್ಮಿಕರ ಮಕ್ಕಳಿಗೆ ಶಾಲಾ ಕಾಲೇಜು ಶುಲ್ಕದಲ್ಲಿ ವಿನಾಯಿತಿಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು. ಬೆಳೆ ವಿಮೆಯಲ್ಲಿ ಜಿಪಿಎಸ್ ತಪ್ಪು ನೀಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 15 ರವರೆಗೆ ವಿಸ್ತರಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಕಚೇರಿಗಳಲ್ಲಿ ಕೂರದೆ, ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಇರುವುದರಿಂದ, ರೈತರು ಕಡಿಮೆ ಮಳೆಯಲ್ಲೂ ಬರಬಲ್ಲ ಮಳೆಯಾಶ್ರಿತ ಪರ್ಯಾಯ ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಪಾಳು ಬಿಡಬಾರದು , ರೈತರ ಹಿತರಕ್ಷಣೆ, ಬೆಳೆ ನಷ್ಟ ಪರಿಹಾರ ಹಾಗೂ ಮುಂದೆ ಎದುರಾಗಬಹುದಾದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ. 8.09 ರಷ್ಟು ಮಾತ್ರ ಬಿತ್ತನೆ
ಜಿಲ್ಲೆಯಲ್ಲಿ ಈ ಬಾರಿ ಜುಲೈ ತಿಂಗಳಿನಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ, ಬಿತ್ತನೆ ಪ್ರಕ್ರಿಯೆ ಕುಂಠಿತಗೊಂಡಿದೆ. ಈವರೆಗೆ ಕೇವಲ ಶೇ. 8.09 ರಷ್ಟು ಮಾತ್ರ ಬಿತ್ತನೆಯಾಗಿದ್ದು, ಮಳೆಯ ಅಭಾವದ ಕಾರಣದಿಂದಾಗಿ ರೈತರು ಮಳೆಯಾಶ್ರಿತ ಬದಲು ಅಲ್ಪಾವಧಿ ಹಾಗೂ ಸಿರಿಧಾನ್ಯಗಳ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಮುಖವಾಗಿ ಮೆಕ್ಕೆಜೋಳ 15,000 ಹೆಕ್ಟೇರ್ನಲ್ಲಿ ಹಾಗೂ ಉಳಿದಂತೆ ಸುಮಾರು ಎರಡುವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, ಶೇಂಗಾ ಮತ್ತು ತೊಗರಿ ಬಿತ್ತನೆಯಾಗಿದೆ. ತೊಗರಿ ಬಿತ್ತನೆ ಮಾಡಲು ಇನ್ನು 15 ದಿನಗಳ ಕಾಲ (ಜುಲೈ 15 ರವರೆಗೆ) ಅವಕಾಶವಿದ್ದು, ಮುಂದಿನ 11 ದಿನಗಳಲ್ಲಿ ಉತ್ತಮ ಮಳೆಯಾದರೆ ರೈತರು ತೊಗರಿ ಬಿತ್ತನೆ ಮಾಡಬಹುದು. ಒಂದು ವೇಳೆ ಇನ್ನು ಉತ್ತಮ ಮಳೆಯಾದಲ್ಲಿ ಮೆಕ್ಕೆಜೋಳ ಬಿತ್ತನೆಗೂ ಅವಕಾಶವಿದೆ. ಆದರೆ ಮೆಕ್ಕೆಜೋಳಕ್ಕೆ ಹೆಚ್ಚಿನ ಗೊಬ್ಬರ ಹಾಗೂ ನೀರಿನ ಅಗತ್ಯವಿರುವುದರಿಂದ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ಮೆಕ್ಕೆಜೋಳ ಬಿತ್ತನೆ ಮಾಡಲು ಕ್ರಮವಹಿಸಬಹುದು ಎಂದರು.
ಸಿರಿಧಾನ್ಯ ಬೆಳೆಗೆ ಆದ್ಯತೆ ನೀಡಿ
ಮೆಕ್ಕೆಜೋಳದ ಬದಲಾಗಿ ಕಡಿಮೆ ಅವಧಿಯಲ್ಲಿ ಕೈಗೆ ಬರುವ ಸಿರಿಧಾನ್ಯಗಳಾದ ನವಣೆ, ಆರ್ಕ, ಬರಗು, ಸಾಮೆ, ಊದಲು, ಕೊರಲೆ ಹಾಗೂ ರಾಗಿ ಮತ್ತು ಹುರುಳಿ ಬೆಳೆಗಳನ್ನು ಬಿತ್ತನೆ ಮಾಡುವಂತೆ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ರೈತ ಮುಖಂಡ ಮಂಜಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಬರಗಾಲದ ವಾತಾವರಣ ಎದುರಾಗಿದ್ದು, ರೈತರು ಮತ್ತು ಕೃಷಿ ಕಾರ್ಮಿಕರು ಉದ್ಯೋಗ ಅರಸಿ ಇತರೆ ಜಿಲ್ಲೆಗಳಿಗೆ ವಲಸೆ ಹೋಗಲು ಸಿದ್ದರಾಗಿದ್ದಾರೆ, ಇದನ್ನು ತಡೆಗಟ್ಟಲು ಜಿಲ್ಲಾ ಪಂಚಾಯತ್ ತಕ್ಷಣವೇ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು, ಯೋಜನೆಯಡಿ ವಿಳಂಬ ಮಾಡದೆ ಅಂದಾಜು ಪಟ್ಟಿ ಸಿದ್ಧಪಡಿಸಿ ಕೆಲಸ ನೀಡದಿದ್ದರೆ, ಸ್ವಸಹಾಯ ಸಂಘಗಳ ಸಾಲ ತೀರಿಸಲಾಗದೆ ಜನರು ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ , ಮನೆ ಸಾಲ, ಟ್ರಾಕ್ಟರ್ ಸಾಲಗಳ ವಸೂಲಾತಿಯನ್ನು ಮುಂದೂಡುವಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಬೆಳೆ ವಿಮೆ ಪಾವತಿಸಿದ ತಕ್ಷಣ ಅಥವಾ ಬಿತ್ತನೆ ಮಾಡಿದ ಒಂದು ತಿಂಗಳೊಳಗೆ ಕ್ಲೈಮ್ ಮಾಡಿದರೆ ಎಕರೆಗೆ ಕೇವಲ ₹1,000 ದಿಂದ ₹1,500 ಮಾತ್ರ ಪರಿಹಾರ ಸಿಗುತ್ತದೆ. ಆದರೆ, ಬಿತ್ತನೆ ಮಾಡಿ 90 ದಿನಗಳ ನಂತರ (ಬೆಳೆ ಕಟಾವಿನ ಹಂತದಲ್ಲಿ) ಬೆಳೆ ಹಾನಿಯಾಗಿದ್ದರೆ, ನಿಯಮಾನುಸಾರ ಕ್ಲೈಮ್ ಮಾಡಿದಲ್ಲಿ ಎಕರೆಗೆ ₹16,000, ₹19,000 ದಿಂದ ಹಿಡಿದು ₹20,000 ವರೆಗೂ ವಿಮಾ ಪರಿಹಾರದ ಮೊತ್ತ ಸಿಗುವ ಅವಕಾಶವಿರುತ್ತದೆ ಎಂದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಜಿಲ್ಲೆಯ ಕೃಷಿ ಭೂಮಿಯು ಭದ್ರಾ ನಾಲಾ ಆಶ್ರಿತ, ಪಂಪ್ಸೆಟ್ ಆಧಾರಿತ ಹಾಗೂ ಮಳೆಯಾಶ್ರಿತ ಪ್ರದೇಶಗಳಾಗಿ ವಿಂಗಡಣೆಯಾಗಿದೆ. ಆದರೆ, ಪ್ರತಿ ಭಾಗದ ರೈತರು ವಿಭಿನ್ನ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಕೇವಲ ಆಧುನೀಕರಣದ ಹೆಸರಿನಲ್ಲಿ ಕಾಮಗಾರಿಗಳು ನಡೆಯುತ್ತಿವೆಯೇ ಹೊರತು ರೈತರ ಗದ್ದೆಗಳಿಗೆ ನೀರು ಹರಿಯುತ್ತಿಲ್ಲ ಎಂದು ತಿಳಿಸಿದರು.
ರೈತ ಮುಖಂಡ ವಿಶ್ವನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಪ್ರತಿ ವರ್ಷ 10 ರಿಂದ 20 ಅಡಿಗಳಷ್ಟು ಕೆಳಗೆ ಹೋಗುತ್ತಿದೆ. ಜಿಲ್ಲೆಯಲ್ಲಿ ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ, ಕೇವಲ ಮೇಲ್ಮಟ್ಟದ ಚರ್ಚೆಗಳನ್ನು ನಡೆಸುವ ಬದಲು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ಸಭೆ ನಡೆಸಿ ವಾಸ್ತವ ಸ್ಥಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಗ್ರಹಿಸಿದರು.
ಚೆಕ್ ಡ್ಯಾಂ’ (ತಡೆಗೋಡೆ) ನಿರ್ಮಿಸಿ
ರೈತ ಮುಖಂಡ ತೇಜಸ್ವಿ ಪಾಟೀಲ್ ಅವರು ಮಾತನಾಡಿ, ರಾಜ್ಯದಲ್ಲಿ ಸದ್ಯ ಬಹುತೇಕ ಹಳ್ಳ, ಕೊಳ್ಳ ಹಾಗೂ ಕೆರೆಕಟ್ಟೆಗಳು ಒಣಗುತ್ತಿದ್ದು, ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರೈತರು ಮತ್ತು ಕೃಷಿ ಕಾರ್ಮಿಕರಿಗೆ ನೆರವಾಗುವಂತಹ ನೂತನ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ಜಾರಿಗೆ ತರಬೇಕು ಕೃಷಿ ಕಾರ್ಮಿಕರನ್ನು ಬಳಸಿಕೊಂಡು ರೈತರಿಗೆ ನೇರ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಸಣ್ಣ ಸಣ್ಣ ಹಳ್ಳಗಳಿಗೆ ಕಲ್ಲುಗಳನ್ನು ಬಳಸಿ ‘ಚೆಕ್ ಡ್ಯಾಂ’ (ತಡೆಗೋಡೆ) ನಿರ್ಮಿಸುವ ಮೂಲಕ ನೀರಿನ ಉಸ್ತುವಾರಿ ಮತ್ತು ಸಂರಕ್ಷಣೆ ಮಾಡಬಹುದಾಗಿದೆ. ಈ ಮೂಲಕ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.
ರೈತ ಮುಖಂಡ ನಾಗರಾಜು ಮಾತನಾಡಿ, ರೈತರು ಬಳಸುವ ಗೊಬ್ಬರ ಒಂದೊಂದು ದರವಿದೆ, ಸಾವಯವ, ನ್ಯಾನೋ, ಮೋದಿಕೇರ್, ಎರೆಹುಳ , ಮೀನಿನ ಗೊಬ್ಬರವಿರುವುದಾಗಿ ರೈತರಿಗೆ ತಿಳಿಸಲಾಗುತ್ತಿದೆ ರೈತ ಯಾವ ಗೊಬ್ಬರ ಬಳಸಬೇಕು ಎಂದು ಗೊಂದಲದಲ್ಲಿ ಇದ್ದಾನೆ ಎಂದರು.
ಕೆರೆಗಳ ಹೂಳು ತೆಗೆಯಬೇಕು
ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಪಂಪ್ಸೆಟ್ ಮತ್ತು ಬೋರ್ವೆಲ್ಗಳನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಡಿಸಿ ಅವರನ್ನು ಹೊರತುಪಡಿಸಿ, ಉಳಿದ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಮಧ್ಯೆ ಬರುತ್ತಿಲ್ಲ. ಕೇವಲ ಕೆರೆಗಳ ಹೂಳು ತೆಗೆಯುವ ಸಾಂಪ್ರದಾಯಿಕ ಕೆಲಸಗಳಿಗಿಂತ, ಇಂತಹ ನಾವೀನ್ಯತಾ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಂತ ಸೂಕ್ತ ಮತ್ತು ಅಗತ್ಯವಾಗಿದೆ ಎಂದು ರೈತ ಮುಖಂಡರುಗಳು ಸಭೆಗೆ ತಿಳಿಸಿದರು.
ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬಾರದು
ಜಿಲ್ಲಾಧಿಕಾರಿ ಜಿ.ಎಂ.ಗಂಗಾದರಸ್ವಾಮಿ ಅವರು ಮಾತನಾಡಿ, ಭದ್ರಾ ಹಾಗೂ ತುಂಗಭದ್ರಾ ಜಲಾಶಯಗಳಲ್ಲಿ ಸದ್ಯ ಒಳಹರಿವು ಅತ್ಯಂತ ಕಡಿಮೆಯಾಗಿದೆ. ಇತ್ತೀಚಿನ ಮೂರು ದಿನಗಳಿಂದ ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಸ್ವಲ್ಪ ಪ್ರಮಾಣದ ನೀರು ಬರುತ್ತಿದೆ. ಮುಖ್ಯಮಂತ್ರಿಗಳ ಮನವಿಯ ಪ್ರಕಾರ, ರೈತರು ಹದವಿಲ್ಲದೆ ಬಿತ್ತನೆ ಮಾಡಬಾರದು ಹಾಗೂ ಕೇವಲ ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬಾರದು. ಸ್ವಂತ ಕೊಳವೆ ಬಾವಿ ಅಥವಾ ನೀರಾವರಿ ಸೌಲಭ್ಯವಿದ್ದಲ್ಲಿ ಮಾತ್ರ ಬೆಳೆ ಯೋಜನೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜುಲೈ ತಿಂಗಳ ಮಳೆ ಹಾಗೂ ಜಲಾಶಯಗಳ ಒಳಹರಿವನ್ನು ಆಧರಿಸಿ, ಕಾಡಾ (ನೀರಾವರಿ ಇಲಾಖೆ) ಐಸಿಸಿ ಸಭೆ ನಡೆಸಲಿದ್ದು, ಮುಂದಿನ 15 ದಿನಗಳ ನಂತರ ಯಾವ ಬೆಳೆ ಬಿತ್ತನೆ ಮಾಡಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಆಗಸ್ಟ್ ವರೆಗೂ ಭತ್ತ ನಾಟಿ ಮಾಡಲು ಅವಕಾಶವಿದ್ದು, ಸದ್ಯಕ್ಕೆ ರೈತರು ಜುಲೈ ತಿಂಗಳ ಮಳೆಯ ಪ್ರಮಾಣವನ್ನು ಗಮನಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ತಿಳಿಸಿದರು.
ರೈತರು ತಮ್ಮ ಜಮೀನುಗಳನ್ನು ಪಾಳು ಬಿಡದೆ, ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು., ರೈತರು ಹವಾಮಾನ ವೈಪರೀತ್ಯ ಹಾಗೂ ಬರಗಾಲದ ಸಂದರ್ಭದಲ್ಲಿ ನಷ್ಟ ಅನುಭವಿಸದಂತೆ ತಡೆಯಲು ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 15 ರವರೆಗೆ ವಿಸ್ತರಿಸಲಾಗಿದೆ , “ಬೆಳೆ ವಿಮೆ ಮಾಡಿಸುವುದರಿಂದ ಮಳೆ ಕೈಕೊಟ್ಟರೂ ರೈತರಿಗೆ ಆರ್ಥಿಕ ನೆರವು ಸಿಗಲಿದ್ದು, ಸಾಲದ ಸುಳಿಯಿಂದ ಪಾರಾಗಲು ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬ ರೈತರೂ ಕಾಲಮಿತಿಯೊಳಗೆ ವಿಮೆ ಮಾಡಿಸಬೇಕು.” ರೈತ ಸಂಘಟನೆಗಳು ಮತ್ತು ಮಾಧ್ಯಮಗಳ ಮೂಲಕ ಸರ್ಕಾರದ ಸಂದೇಶ ಹಾಗೂ ಮಾರ್ಗಸೂಚಿಗಳನ್ನು ಕನಿಷ್ಠ ಶೇಕಡಾ 30 ರಿಂದ 40 ರಷ್ಟು ರೈತರಿಗಾದರೂ ತಲುಪಿಸಿದರೆ, ಅವರು ದೊಡ್ಡ ಮಟ್ಟದ ನಷ್ಟದಿಂದ ಪಾರಾಗಬಹುದು ಎಂದು ತಿಳಿಸಿದರು.
ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಪೂರ್ವ ಮುಂಗಾರು (ಬೇಸಿಗೆ ಮಳೆ ಹಾಗೂ ಆಲಿಕಲ್ಲು ಮಳೆ) ಅವಧಿಯಲ್ಲಿ ಸಂಭವಿಸಿದ ಬೆಳೆ ನಷ್ಟದ ಪರಿಹಾರ ಈಗಾಗಲೇ ಮಂಜೂರಾಗಿದೆ. ಮೇ ತಿಂಗಳಿನಲ್ಲಿ ಉಂಟಾದ ಬೆಳೆ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ‘ಗ್ರೀನ್ ಲಿಸ್ಟ್’ ಅನುಮೋದನೆ ದೊರೆತ ತಕ್ಷಣವೇ ಪರಿಹಾರ ವಿತರಿಸಲಾಗುವುದು. ಇದು ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿರದೆ ಇಡೀ ರಾಜ್ಯಾದ್ಯಂತ ಬಾಕಿ ಉಳಿದಿದೆ ಎಂದರು.
ರೈತರು ಮತ್ತು ಕಾರ್ಮಿಕ ಮಕ್ಕಳಿಗೆ ಶಾಲಾ ಕಾಲೇಜುಗಳ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ಪತ್ರ ಬರೆಯಲಾಗುವುದು, ಜಿ.ಪಿ.ಎಸ್ ಮೂಲಕ ತಪ್ಪು ಮಾಹಿತಿಯನ್ನು ನೀಡುವ ಅಧಿಕಾರಿಗಳಿಗೆ ಶಿಸ್ತು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 17,000 ಬಗರ್ ಹುಕುಂ ಅರ್ಜಿದಾರರಿದ್ದು, ಈ ಪೈಕಿ 8,000 ಜನರಿಗೆ ಕ್ರಮಬದ್ಧವಾಗಿ ಹಕ್ಕುಪತ್ರಗಳನ್ನು ಮಾಡಿಕೊಡಲಾಗಿದೆ. ರಾಜ್ಯದಲ್ಲಿಯೇ ನಮ್ಮ ಜಿಲ್ಲೆ 2ನೇ ಸ್ಥಾನದಲ್ಲಿದೆ, ದಾಖಲೆಗಳೇ ಇಲ್ಲದ 542 ರೈತರ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ, ಮುಖಾಮುಖಿ ಸಂದರ್ಶನದ ಮೂಲಕ ಖಾತೆಗಳನ್ನು ಮಾಡಿಕೊಡಲಾಗಿದೆ. ಕಂದಾಯ ಸಚಿವರು ಕೂಡ ಈ ಬಗ್ಗೆ ಗಂಭೀರವಾಗಿ ಸೂಚನೆ ನೀಡಿದ್ದು, ತಹಶೀಲ್ದಾರ್ ಕಚೇರಿಗಳಲ್ಲಿ ಬಾಕಿ ಇರುವ ಆರ್.ಟಿ.ಸಿ (RTC) ಮತ್ತು ಅಳತೆ ಪ್ರಕ್ರಿಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸಬೇಕು. ಜಿಲ್ಲೆಯಲ್ಲಿ ಇದುವರೆಗೆ 30,000 ಜನರಿಗೆ ಕಂದಾಯ ಗ್ರಾಮಗಳ ಅಡಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಈ ಸಾಧನೆಯಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲೇ ೪ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಮಾತನಾಡಿ, ಮಳೆ ಕೊರತೆಯಿಂದ ಕೃಷಿ ಕಾರ್ಮಿಕರು ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗುವುದನ್ನು ತಡೆಗಟ್ಟಲು ವಿಬಿಜಿ ರಾಮ್ಜಿ ಅಡಿ 5 ಲಕ್ಷ ಮಾನವ ದಿನಗಳನ್ನು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ, ಯಾರು ಸಹ ವಲಸೆ ಹೋಗಬಾರದು, ಈ ಮೂಲಕ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಸಣ್ಣ ಸಣ್ಣ ಹಳ್ಳಗಳನ್ನು ಗುರುತಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ‘ಟ್ರೆಂಚ್ ಕಮ್ ಬಂಡ್’ ಅಥವಾ ಸಣ್ಣ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಎಲ್ಲಾ ಪಿಡಿಒಗಳು ತಮ್ಮ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ನೀರು ಹರಿಯುವ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ, ಚೆಕ್ ಡ್ಯಾಂ ನಿರ್ಮಾಣದ ಕ್ರಿಯಾ ಯೋಜನೆಯನ್ನು ಮುಂದಿನ 15 ದಿನಗಳ ಒಳಗಾಗಿ ತಾಲೂಕು ಪಂಚಾಯತ್ಗೆ ಕಳುಹಿಸಿಕೊಡಬೇಕು. ದಾವಣಗೆರೆ ಜಿಲ್ಲೆಯ ಶೇ. 70 ಕ್ಕಿಂತ ಹೆಚ್ಚು ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತಿದೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಮಳೆನೀರು ಕೊಯ್ಲು ಹಾಗೂ ಅಂತರ್ಜಲ ಸಂರಕ್ಷಣೆಯ ವಿವಿಧ ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯವಾಗಿದೆ ಎಂದರು.
ಎಎಸ್ಪಿ ಪರಮೇಶ್ವರ ಹೆಗಡೆ, ತಹಶೀಲ್ದಾರುಗಳು, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ, ನೀರಾವರಿ ಇಲಾಖೆಯ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ,ಪಿಡಿಓಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ರೈತ ಮುಖಂಡರುಗಳು ಉಪಸ್ಥಿತರಿದ್ದರು.


