Connect with us

Dvgsuddi Kannada | online news portal | Kannada news online

ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ಕಲ್ಪಿಸಲು ಹಣ ಕೇಳಿದ ಲಕ್ಷ್ಮೀ ಏಜೆನ್ಸಿ ಲೈಸೆನ್ಸ್ ರದ್ದತಿಗೆ ಶಿಫಾರಸು: ಜಿಲ್ಲಾಧಿಕಾರಿ

ದಾವಣಗೆರೆ

ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ಕಲ್ಪಿಸಲು ಹಣ ಕೇಳಿದ ಲಕ್ಷ್ಮೀ ಏಜೆನ್ಸಿ ಲೈಸೆನ್ಸ್ ರದ್ದತಿಗೆ ಶಿಫಾರಸು: ಜಿಲ್ಲಾಧಿಕಾರಿ

ದಾವಣಗೆರೆ: ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಹರಿಹರದ ಲಕ್ಷ್ಮೀ ಗ್ಯಾಸ್ ಏಜೆನ್ಸಿ ಅವರು ಫಲಾನುಭವಿಗಳಿಂದ ಹಣ ಕೇಳುತ್ತಿರುವ ಬಗ್ಗೆ ಬಹಳಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ, ಈ ಏಜೆನ್ಸಿಯ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಲೈಸೆನ್ಸ್ ರದ್ದುಪಡಿಸುವಂತೆ ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ದಿಶಾ ಸಭೆಯಲ್ಲಿ ಮಾಹಿತಿ ನೀಡಿದರು.

ಜಗಳೂರು ಶಾಸಕ ರಾಮಚಂದ್ರ ಅವರು ಮಾತನಾಡಿ, ಎಲ್ಲ ತಾಂಡಾ, ಹಾಡಿಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ.  ಆದರೆ ಜಿಲ್ಲೆಯಲ್ಲಿ ಈ ಕಾರ್ಯ ಆಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೆಸ್ವಾಮಿ, ಕನಿಷ್ಟ 100 ಕಾರ್ಡ್ ಇದ್ದರೂ, ನ್ಯಾಯಬೆಲೆ ಅಂಗಡಿ ನೀಡುವಂತೆ ಇಲಾಖೆ ಸೂಚನೆ ನೀಡಿದ್ದು, ಈಗಾಗಲೆ ಜಿಲ್ಲೆಯಲ್ಲಿ ಸರ್ವೆ ಮಾಡಿಸಲಾಗುತ್ತಿದ್ದು, ಶೀಘ್ರ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.  ಸಂಸದರು ಮಾತನಾಡಿ ರಾಜ್ಯದಲ್ಲಿ ಬರುವ ಜ. 26 ರಿಂದ ಮನೆ ಮನೆಗೆ ಪಡಿತರ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು, ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು

ಜಲಜೀವನ್ 62 ಕಾಮಗಾರಿ ಪೂರ್ಣ :ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಕಾಮಗಾರಿ ಪೂರೈಸಲು ಒಟ್ಟು 353 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಈಗಾಗಲೆ 62 ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಕೆಲವು ಗ್ರಾಮಗಳಲ್ಲಿ ಜಲಜೀವನ್ ಮೀಷನ್ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಹಾಗೂ ಮೀಟರ್ ಅಳವಡಿಕೆಗೆ ಗ್ರಾಮಸ್ಥರ ವಿರೋಧವಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ಹೇಳಿದರು. ದಿಶಾ ಸಮಿತಿಯ ಸದಸ್ಯ ಅಣ್ಣಪ್ಪ ಅವರು ಮಾತನಾಡಿ, ಯೋಜನೆಯಡಿ ಪೈಪ್‍ಲೈನ್ ಹಾಕಲು ಉತ್ತಮವಾಗಿರುವ ಕಾಂಕ್ರಿಟ್ ರಸ್ತೆಗಳಿಗೆ ಗುಂಡಿ ತೋಡಿ, ಕಾಮಗಾರಿ ಬಳಿಕ, ಅದನ್ನು ಪುನಃ ಕಾಂಕ್ರಿಟ್‍ನಿಂದಲೇ ದುರಸ್ತಿಗೊಳಿಸದೆ, ಮಣ್ಣು ಹಾಕಿ ಮುಚ್ಚುತ್ತಿದ್ದಾರೆ, ಇದಕ್ಕೂ ಕೂಡ ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ ಎಂದರು. ಸಂಸದರು ಪ್ರತಿಕ್ರಿಯಿಸಿ, ಯೋಜನೆಗಾಗಿ ರಸ್ತೆ ಅಗೆದು, ಕಾಮಗಾರಿ ಕೈಗೊಂಡ ಬಳಿಕ, ರಸ್ತೆಯನ್ನು ಮೊದಲು ಇದ್ದ ಸ್ಥಿತಿಯಂತೆ ನಿರ್ಮಿಸಿವುದು ಆಯಾ ಗುತ್ತಿಗೆದಾರರ ಕರ್ತವ್ಯ, ಒಂದು ವೇಳೆ ಈ ರೀತಿ ನಿರ್ಲಕ್ಷ್ಯ ಮಾಡಿದಲ್ಲಿ, ಅಧಿಕಾರಿಗಳು ಗಮನಿಸಿ, ಅದನ್ನು ಸರಿಪಡಿಸುವ ಕಾರ್ಯ ಮಾಡಬೇಕು, ತಪ್ಪಿದಲ್ಲಿ, ಅಂತಹ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು ಎಂದರು.

ಸಭೆಯಲ್ಲಿ ಮಾಯಕೊಂಡ ಕ್ಷೇತ್ರ ಶಾಸಕ ಪ್ರೊ. ಲಿಂಗಣ್ಣ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ದಿಶಾ ಸಮಿತಿಯ ಸದಸ್ಯರುಗಳಾದ ಜೆ.ಪಿ. ಮುಪ್ಪಣ್ಣ, ಅಣ್ಣಪ್ಪ, ವೆಂಕಟಗಿರಿನಾಯ್ಕ, ಬಸವರಾಜ್, ಹೆಚ್.ಎಂ. ಆಶಾ, ಚೇತನ ಸೇರಿದಂತೆ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top