ಹೊಳಲ್ಕೆರೆ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಬಳಿ ನಡೆದಿದೆ.
ದುರ್ಗಾಂಬಾ ಖಾಸಗಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದ್ದು, ಬೈಕಿನಲ್ಲಿದ್ದ ನಾಗರಾಜ (46), ಶೈಲಜಾ (43), ಸಂತೋಷ (16), ವಿರೇಶ (13) ಮೃತಪಟ್ಟಿದ್ದಾರೆ. ಮೃತರೆಲ್ಲರೂ ಬರಮಣ್ಣನಕಾಯಕ ದುರ್ಗಾ ನಿವಾಸಿಗಳಾಗಿದ್ದು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ವಾಪಸ್ ಬರುವಾಗ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಬಳಿ ರಾತ್ರಿ ಘಟನೆ ನಡೆದಿದೆ. ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಸಹಿತ ಇಡೀ ಕುಟುಂಬದವರು ಸಾವನ್ನಪ್ಪಿದ್ದಾರೆ.
ಚನ್ನಗಿರಿ ಕಡೆಯಿಂದ ಬಿ. ದುರ್ಗಾ ಕಡೆ ಒಂದೇ ಬೈಕ್ ನಲ್ಲಿ ಬರುತ್ತಿರುವಾಗ ಎದುರಿಗೆ ಬಂದ ದುರ್ಗಾಂಬಾ ಬಸ್ ಡಿಕ್ಕಿಯಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹೊಳಲ್ಕೆರೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



