ದಾವಣಗೆರೆ: ಕಾಮ, ಕ್ರೋಧ, ಮದ, ಮಾತ್ಸರ್ಯ ಜಯಿಸದವರು ಮದುವೆಯಾಗಿ ಮಠ ಮುನ್ನೆಡೆಸಲಿ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲವನ್ನೂ ಜಯಿಸಿರುವವರು ಸನ್ಯಾಸಿಯಾಗಿಯೇ ಮಠ ನಡೆಸಲಿ. ಆದರೆ, ಅವುಗಳನ್ನು ಜಯಿಸದವರು ಮದುವೆಯಾಗಿ ಮಠ ಮುನ್ನೆಡೆಸಲಿ ಎಂದರು. ಈ ದೇಶದಲ್ಲಿ ಸನಾತನ ಹಿಂದೂ ಧರ್ಮದಲ್ಲಿ ಸಪ್ತಋಷಿಗಳು, ವೇದವ್ಯಾಸರು, ಬಸವಣ್ಣನವರೂ ಮದುವೆಯಾಗಿ ಆಶ್ರಮ ನಡೆಸಿದ್ದಾರೆ. ಈ ಆಧುನಿಕ ಕಾಲದಲ್ಲಿಯೂ ಸ್ವಾಮೀಜಿಗಳು ಮದುವೆಯಾಗಿ, ಮಠ ನಡೆಸುವುದು ಸೂಕ್ತ. ನಾನು ಕೂಡಾ ಮದುವೆಯಾಗಿದ್ದೇನೆ. ಹೀಗಾಗಿ ಸ್ವಾಮೀಜಿಗಳಿಗೆ ಒಂದು ಕಡೆ ಸಂಸಾರವೂ ಇಲ್ಲ. ಸನ್ಯಾಸವೂ ಇಲ್ಲದಂತೆ ಇರುವುದಕ್ಕಿಂತ ಮದುವೆ ಅವಶ್ಯಕ ಎಂದರು.
ಭಕ್ತರು ಗುರುಗಳ ಮನವೊಲಿಸಿ, ಸಾಂಸಾರಿಕ ಪರಂಪರೆಗೆ ಹೋಗುವ ಹಾಗೆ ಮಾಡಿದ್ದಲ್ಲಿ ಸನಾತನ ಸಂಸ್ಕೃತಿ ಉಳಿಯುತ್ತದೆ. ನಾರಾಯಣಗುರುಗಳಿಗೂ ಮದುವೆ ಮಾಡಲು ತೀರ್ಮಾನಿಸಲಾಗಿತ್ತು. ಅವರಿಗೆ ವಿಷಯ ಗೊತ್ತಾಗಿ ಮನೆ ಬಿಟ್ಟು ಹೋಗಿದ್ದರು. ಈ ಶರೀರ 9 ದ್ವಾರಗಳಿಂದ ಕೂಡಿದ್ದು, ನಿರಂತರ ಪ್ರಕ್ರಿಯೆ ಆಗಬೇಕು. ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬ್ರಹ್ಮಚರ್ಯ ಪಾಲಿಸುವುದು ಹೇಗೆ ಎಂದರು.



