ದಾವಣಗೆರೆ: ಮಹಾನಗರ ಪಾಲಿಕೆ ಎದುರಿನ ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ ನೀರು ನಿಲ್ಲದಂತೆ ನಡೆಯುತ್ತಿದ್ದ ಶಾಶ್ವತ ಪರಿಹಾರ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಇಂದು ಬೆಳಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ಸಲ ಮಳೆ ಬಂದಾಗಲೂ ನೀರು ನಿಂತು, ಅಂಡರ್ ಬ್ರಿಡ್ಜ್ ಮೂಲಕ ಓಡಾಡುವುದಕ್ಕೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರು. ಹೀಗಾಗಿ ಜಿಲ್ಲಾಧಿಕಾರಿಗಳು,ಮೇಯರ್ ಹಾಗೂ ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಗೊಂಡಿತ್ತು. ಒಟ್ಟು 42 ಲಕ್ಷದ ವೆಚ್ಚದಲ್ಲಿ ನೀರು ನಿಲ್ಲದಂತೆ ಕಾಮಗಾರಿಯನ್ನು ಮಾಡಲಾಗಿದೆ ಎಂದರು.
ಎರಡು ಕಡೆ ನಿಲ್ಲುವಂತಹ ನೀರು ಒಂದು ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಹತ್ತು ಎಚ್ ಪಿ ಸಾಮರ್ಥ್ಯದ ಎರಡು ಸೆನ್ಸಾರ್ ಮೋಟಾರು ಅಳವಡಿಸಲಾಗಿದೆ. ನೀರು ಒಂದು ಮಟ್ಟಕ್ಕೆ ಬಂದ ತಕ್ಷಣ ಆಟೋಮ್ಯಾಟಿಕ್ ಆಗಿ ನೀರು ಪಂಪ್ ಮಾಡಲಾಗುತ್ತದೆ. ವೃತ್ತದಲ್ಲಿ ಇರುವ ರಾಜಕಾಲುವೆಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇದಲ್ಲದೇ ರೈಲ್ವೆ ನಿಲ್ದಾಣದ ಒಂದು ಭಾಗ ಶಿಥಿಲವಾಗಿದ್ದು ಅದನ್ನೂ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಈ ವೇಳೆಮೇಯರ್ ಎಸ್.ಟಿ. ವೀರೇಶ್, ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಕೆ. ಪ್ರಸನ್ನ ಕುಮಾರ್, ಉಮಾ ಪ್ರಕಾಶ್, ಯಶೋಧ ಹೆಗ್ಗಪ್ಪ, ರೇಣುಕಾ ಶ್ರೀನಿವಾಸ್, ವೀಣಾ ನಂಜಪ್ಪ, ಗೀತಾ ದಿಳ್ಯಪ್ಪ. ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇತರರು ಇದ್ದರು.



