Connect with us

Dvgsuddi Kannada | online news portal | Kannada news online

ಅಂಕಣ-ಶತಮಾನದಿಂದ ನಡೆದು ಬಂದ ಶಿಕ್ಷಣದ ಹಾದಿ

ಅಂಕಣ

ಅಂಕಣ-ಶತಮಾನದಿಂದ ನಡೆದು ಬಂದ ಶಿಕ್ಷಣದ ಹಾದಿ

-ಡಾ.ಶ್ರೀ ಶಿವಮೂರ್ತಿಸ್ವಾಮೀಜಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ.

ಯಾವುದೋ ಒಂದು ಹಳ್ಳಿಯ ಕಾರ್ಯಕ್ರಮ. ಊರ ಹೊರವಲಯದಲ್ಲಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಗ್ರಾಮಸ್ಥರು ಬೀದಿಯಲ್ಲಿ ಕರ್ಪೂರಹಚ್ಚಿ, ತೆಂಗಿನ ಕಾಯಿ ಒಡೆದು ಜಯಘೋಷ ಮಾಡಿ ಪೂರ್ಣ ಕುಂಭದೊಂದಗೆ ಮಂಗಳ ವಾದ್ಯಗಳನ್ನು ಮೊಳಗಿಸುತ್ತಾ ಪಟಾಕಿಗಳನ್ನು ಸಿಡಿಸುತ್ತಾ ಅಮಿತೋತ್ಸಾಹದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನಮ್ಮನ್ನು ಕರೆದೊಯ್ದರು. ಸಾಂಪ್ರದಾಯಿಕವಾಗಿ ಶಾಲಾ ಮಕ್ಕಳ
ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಸ್ವಾಗತ ಭಾಷಣ ಮಾಡಲು ನಿಂತ ಊರ ಮುಖಂಡರೂಬ್ಬರು
ಹಾರ ತುರಾಯಿ ಅರ್ಪಣೆ ಮಾಡಿ ಒಂದು ಮನವಿ ಪತ್ರವನ್ನು ನಮಗೆ ಸಲ್ಲಿಸಿದರು.

sree artical1

“ನಮ್ಮೂರಿನ ಮಕ್ಕಳು ಎರಡು ಕಿಲೋಮೀಟರ್ ದೂರದಲ್ಲಿರುವ ಶಾಲೆಗೆ ಹೋಗುತ್ತಿದ್ದಾರೆ. ಉರಿಬಿಸಿಲಿನಲ್ಲಿ ಬರಿಗಾಲಲ್ಲಿ ನಡೆದು
ಕೊಂಡು ಹೋಗುವುದನ್ನು ನನ್ನಿಂದ ನೋಡಲು ಆಗುತ್ತಿಲ್ಲ, ತಾವು ದೊಡ್ಡ ಮನಸ್ಸು ಮಾಡಿ ಮುಖ್ಯ ಮಂತ್ರಿಗಳಿಗೆ ಹೇಳಿ ನಮ್ಮೂರಿಗೆ
ಒಂದು ಖಾಸಗಿ ಅನುದಾನಿತ ಪ್ರೌಢಶಾಲೆಯನ್ನು ಮುಂಜೂರು ಮಾಡಿಕೊಡಲು ಬಿನ್ನಹ ” ಎಂದು ಎಲ್ಲರೆದುರಿಗೆ ಆಗ್ರಹಪಡಿಸಿದರು.
ಸಭಿಕರೆಲ್ಲರೂ ಆವರ ಬೇಡಿಕೆಯನ್ನು ಸಮರ್ಥಿಸಿ ಚಪ್ಪಾಳೆ ತಟ್ಟಿದರು. ಆಗ ಮುಖ್ಯಮಂತ್ರಿಗಳಾಗಿದ್ದವರು ನಮ್ಮ ಮಠದ ಆತ್ಮೀಯ ಶಿಷ್ಠರಾಗಿದ್ದಎಸ್‌.ಆರ್‌. ಬೊಮ್ಮಾಯಿಯವರು. ಈಗಿನ ಗೃಹಮಂತ್ರಿಗಳಾದ. ಬಸವರಾಜ ಬೊಮ್ಮಾಯಿಯವರ ತಂದೆ. ಅವರಿಗೆ ಗುರುಗಳಿಂದ ಹೇಳಿಸಿದರೆ ಸುಲಭವಾಗಿ ಶಾಲೆ
ಮುಂಜೂರಾಗುತ್ತದೆ ಎಂಬುದು ಆ ಮುಖಂಡರ ಲೆಕ್ಕಾಚಾರ. ಹಳ್ಳಿಯಲ್ಲಿ ಒಂದು ಶಾಲೆ ಆರಂಭಿಸಬೇಕೆಂದರೆ ಲಕ್ಷಾಂತರ ರೂ. ಖರ್ಚು ಬರುತ್ತದೆ. ಅಷ್ಟೇಲ್ಲಾ ನಿರ್ವಹಿಸಲು ನಿಮ್ಮಿಂದ ಆಗುತ್ತದೆಯೇ ಎಂದು ಕೇಳಿದಾಗ ಹತ್ತು ಲಕ್ಷ ರೂ. ಗಳು ಖರ್ಚು ಬಂದರೂ ಸಿದ್ಧನಿರುವುದಾಗಿ ಆ ಊರ ಮುಖಂಡ ಹೇಳಿದರು. ಜನರೆಲ್ಲರೂ ಮತ್ತೊಮ್ಮೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಆದರೆ ಅವರ ಮುಖವನ್ನು ದಿಟ್ಟಿಸಿ ನೋಡಿದಾಗ ಏನನ್ನೋ ಮರೆಮಾಚುತ್ತಿರುತ್ತಿರುವಂತೆ ತೋರಿತು. ಹತ್ತಿರ ಕರದು ಸರಕಾರದಿಂದ ಖಾಗಿ ಶಾಲೆಯನ್ನುಮುಂಜೂರು ಮಾಡಿಸುವುದು ಬೇಗನೆ ಆಗುವುದಿಲ್ಲ, ಬೇರೊಂದು ಸುಲಭವಾದ ಉಪಾಯವಿದೆ: “ನೀವು ಮಠಕ್ಕೆ ಒಂದು ಲಕ್ಷ ರೂ.ದಾನ ಕೊಟ್ಟರೆ ಸಾಕು, ನಿಮ್ಮೂರಲ್ಲಿ ಹುಟ್ಟುವ ಎಲ್ಲ ಮಕ್ಕಳಗೂ ನಿಮ್ಮ
ಹೆಸರಿನಲ್ಲಿ ಮಠದಲ್ಲಿಯೇ ಉಚಿತವಾಗಿ, ಶಿಕ್ಷಣ ನೀಡುವ ವ್ಯವಸ್ಥೆ ಮಾಡುತ್ತೇವೆ.” ಎಂದು ಹೇಳಿದಾಗ ಆ ಊರ ಮುಖಂಡ ಕಂಗಾಲಾದ. ಏನನ್ನೋ ಹೇಳಲು ಅವನು ಅಂಜುತ್ತಿರುವಂತೆ ಕಾಣಿಸಿತು. ಏನೆಂದು ಕೇಳಿದಾಗ ಮೆಲುದನಿಯಲ್ಲಿ “ತಮಗೆ ಗೊತ್ತಿಲ್ಲದ ಸಂಗತಿ ಏನೀದೆ!” ಎಂದು ಹಲುಬಿದ
ನಿಜ ಸಂಗತಿ ಏನೆಂದು ಹೇಳಲು ಒತ್ತಾಯಿಸಿದಾಗಅವನು ಕೊಟ್ಟ ಉತ್ತರ: “ನನ್ನ ಮಗಳನ್ನು ಮದುವೆ ಮಾಡಿಕೊಟ್ಟು ಇಲ್ಲಿಗೆ ಇಲ್ಲಿಗೆ ಐದು ವರ್ಷಗಳಾದವು. ಮದುವೆ ಸಂದರ್ಭದಲ್ಲಿ ಅಳಿಯನಿಗೆ ನೌಕರಿ ಕೊಡಿಸುವುದಾಗಿಮಾತು ಕೊಟ್ಟಿದ್ದೆ ಈಗ ಎಲ್ಲಿಯೂ ನೌಕರಿ ಸಿಗುತ್ತಿಲ್ಲ ಹೀಗೊಂದು ಶಾಲೆಯನ್ನು ತಾವು ಮುಂಜೂರು ಮಾಡಿಸಿಕೊಟ್ಟರೆ ನನ್ನ ಅಳಿಯ ಮತ್ತು ಮಗಳು ಇಬ್ಬರಿಗೂ ನೌಕರಿ ಸಿಕ್ಕುತ್ತದೆ. ಆವರ ಬಾಳಿಗೆ ತಾವು ಆಶೀರ್ವಾದ ಮಾಡಿದಂತಾಗುತ್ತದೆ ?” ಕೆಲವು ದಶಕಗಳಿಂದ ಈಚೆಗೆ ಶಾಲೆಗಳನ್ನುತೆರೆಯುವ ಉದ್ದೇಶ ಹೀಗೆ ವ್ಯಾವಹಾರಿಕ ದೃಷ್ಟಿಯ ಕೂಡಿದೆ ಎಂಬುದು ಆಶ್ಚರ್ಯದ ಸಂಗತಿಯಾಗಿ ಉಳಿದಿಲ್ಲ.

sree artical 2

ನಮ್ಮ ದೇಶದಲ್ಲಿ ಈಗ ಶಿಕ್ಷಣವು ಲಾಭದಾಯಕ ವಾಣಿಜ್ಯೋದ್ಯಮವಾಗಿದೆ. ಈಗಿನ ಕೊರೊನಾ ಬಿಕ್ಕಟ್ಟನಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ನೀಡುವ ಕುರಿತು ದೇಶವ್ಯಾಪಿ ಚರ್ಚೆ ನಡೆಯುತ್ತಿದೆ. ಆನ್ ಲೈನ್ ಶಿಕ್ಷಣ ನಗರ ಪ್ರದೇಶಗಳಲ್ಲಿ ಯಶಸ್ಸು ಕಾಣಬಹುದೇ ಹೊರತು ಗ್ರಾಮೀಣ ಭಾಗಗಳಲ್ಲಿ ಅಲ್ಲ.
ಹಳ್ಳಿಗಳಲ್ಲಿ ಹೆಚ್ಚಿನ ಪೋಷಕರಿಗು ತಂತ್ರಜ್ಞಾನದ ವಿಷಯದಲ್ಲಿ ಸುಶಿಕ್ಷಿತರತರಲ್ಲದವರು ಮತ್ತು ಲ್ಯಾಪ್‌ ಟಾಪ್‌/ಸ್ಮಾರ್ಟ್‌ಫೋನ್‌, ಸೌಲಭ್ಯವಿಲ್ಲದವರು. ಹಳ್ಳಿಗಳು ತುಂಬಿರುವುದು ಬಹುತೇಕ ಕೃಷಿಕರು ,ಕುಶಲ ಕರ್ಮಿಗಳು, ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಂದ ಅವರಿಗೆ ತಂತ್ರಜ್ಞಾನದ ಪರಿಚಯವೂ ಇಲ್ಲ; ಸೌಲಭ್ಯಗಳು ಇಲ್ಲ, ಹೀಗಾಗಿ ಆನ್ ಲೈನ್ ಬೋಧನೆ ಹಳ್ಳಿಯ ಮಕ್ಕಳಿಗೆ ತಲುಪುವುದು ಸಾಧ್ಯವಿಲ್ಲ.

sree artical 3

ಇದಕ್ಕೆ ಭಿನ್ನವಾದ ಪರಿಸ್ಥಿತಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಎರಡು-ಮೂರು ದಶಕಗಳ ದಶಕಗಳ ಕಾಲದಲ್ಲಿತ್ತು. ಹೋಬಳಿ ಮಟ್ಟದಲ್ಲಿ ಹೆಚ್ಚೆಂದರೆ ಮಾಧ್ಯಮಿಕ ಶಾಲೆಗಳು ಇದ್ದ ಕಾಲವದು. ಪ್ರೌಢಶಾಲೆಯನ್ನು ಓದಬೇಕೆಂದರೆ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಹಳ್ಳಿಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದು ಗ್ರಾಮಾಂತರ ಪ್ರದೇಶದ ಜನರ ಶೈಕ್ಷಣಿಕ ಮಟ್ಟವನ್ನು ಎತ್ತರಿಸಿದ ಕೀರ್ತಿ ಕರ್ನಾಟಕದ ಮಠಗಳಿಗೆ ಸಲ್ಲುತ್ತದೆ. ನಮ್ಮ ಮಠದ ಹಿಂದಿನ ಗುರುಗಳು ಸೇರಿದಂತೆ ಸುತ್ತೂರು, ಸಿದ್ದಗಂಗಾ ಮತ್ತು ಆದಿಚುಂಚನಗಿರಿ ಮಠಗಳ ಹಿರಿಯ ಗುರುಗಳು ಹಳ್ಳಿಗಾಡುಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಇವರಾರು ಲಾಭದಾಸೆಗೆ ಶಾಲೆ ತೆರೆದವರಲ್ಲ. ನಮ್ಮ ಗುರು ಪಿತಾಮಹರಾದ ಶ್ರೀ ಗುರು ಶಾಂತ ರಾಜದೇಶಿಕೇಂದ್ರ ಮಹಾಸ್ವಾಮಿಗಳವರು 1917ರಲ್ಲಿ ಪಟ್ಟಕ್ಕೆ ಬಂದ ಕೂಡಲೇ ಮಠದ ಒಂದು ಭಾಗದಲ್ಲಿ ಪ್ರಾಥಮಿಕ ಶಾಲೆಯನ್ನು ತೆರೆದು ಇಬ್ಬರು ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾದಾನ ಮಾಡಿದರು. ನಂತರ ಸರಕಾರದೊಂದಿಗೆ ವ್ಯವಹರಿಸಿ ಸಿರಿಗೆರೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಸರಕಾರವು ತೆರೆಯುವಂತಾಯಿತು. ಇನ್ನೂ ಹಿಂದಕ್ಕೆ ಹೋದರೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ವಿದ್ಯೆಯನ್ನು ದಾನ ಮಾಡಬೇಕೇ ಹೊರತು ವಿಕ್ರಯ ಮಾಡಬಾರದೆಂಬ ಉದಾತ್ತ ಧ್ಯೇಯ ಅವರದಾಗಿತ್ತು. ಶಿಕ್ಷಣ ಈಗಿನಂತೆ ವ್ಯಾಪಾರದ ಸರಕಾಗಿರಲಿಲ್ಲ. ಶಿಕ್ಷಣ ಪಡೆಯುವ ವಟುಗಳು ಗುರುಕುಲದ ಎಲ್ಲಾ ಕೆಲಸಗಳನ್ನು ಮಾಡುವುದು ಶಿಕ್ಷಣದ ಒಂದು ಭಾಗವಾಗಿತ್ತು.

sree artical 4

ನಮ್ಮ ಪರಮಾರಾಧ್ಯ ಗುರುವರ್ಯರು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಲು ಬಹಳ ಶ್ರಮ ವಹಿಸಿದರು. ಆ ಕಾರಣದಿಂದಾಗಿಯೇ ಮಧ್ಯ ಕರ್ನಾಟಕದಲ್ಲಿ ಬಹು ದೊಡ್ಡ ಶೈಕ್ಷಣಿಕ ಕ್ರಾಂತಿಯೇ ಆಗಿಹೋಯಿತು. ಅವರು ಮೊದಲು ಸಿರಿಗೆರೆಯಲ್ಲಿ ಪ್ರೌಢಶಾಲೆ ಸ್ಥಾಪಿಸುವಾಗ ಪಟ್ಟ ಕಷ್ಟವನ್ನು ತಮ್ಮ ಆತ್ಮಕತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಗ್ರಾಮಾತರ ಕ್ಷೇತ್ರದಲ್ಲಿ ಹೈಸ್ಕೂಲು ಸ್ಥಾಪಿಸುವುದೆಂದರೆ ಕನಸಿಗೂ ನಿಲುಕದ ಮಾತಾಗಿತ್ತು. ಕಸ್ತೂರಿರಾಜ ಚೆಟ್ಟರು ಆಗ ವಿದ್ಯಾ ಇಲಾಖೆಯ ಮುಖ್ಯಸ್ಥರಾಗಿದ್ದರು. ನಮ್ಮ ಅನೇಕ ಮುಖಂಡರಿಂದ ಹೈಸ್ಕೂಲೊಂದನ್ನು ಸಿರಿಗೆರೆಯಲ್ಲಿ ಪ್ರಾರಂಭಿಸಲು ಬಹಳ ಒತ್ತಾಯ ತರುತ್ತಿದ್ದರು. ನಮಗೆ ಹೈಸ್ಕೂಲು ಎಂದರೆ ಬಹಳ ಭಯ. ಕಟ್ಟಡಕ್ಕೆ , ಉಪಾಧ್ಯಾಯರು, ಸಿಬ್ಬಂದಿ ವರ್ಗಕ್ಕೆ ಸಂಬಳ, ಬೇರೆ ಬೇರೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಊಟ, ವಸತಿ,ಉಪಾಧ್ಯಾಯರ ವಸತಿ, ಈ ಮುಂತಾದವಕ್ಕೆಲ್ಲಾ ಲಕ್ಷಾಂತರ ರೂಪಾಯಿ ಬೇಕು. ಮಠದಲ್ಲಿ ಬಿಡಿಗಾಸೂ ಇಲ್ಲ ಗ್ರಾಮಾಂತರ ಕ್ಷೇತ್ರದಲ್ಲಿ ಬಡವರೇ ಹೆಚ್ಚು.  ಹೇಗೆ ಹಣ ಸಂಗಹಿಸುವುದು? ಇದೊಂದು ದೊಡ್ಡ ಯೋಚನೆಯಾಗಿ ಹೈಸ್ಕೂಲು ಸ್ಥಾಪನೆಯ ಬಗೆಗೆ ನಿರ್ಣಯಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಅದರಲ್ಲೂ ವಿದ್ಯಾರ್ಥಿಗಳು ಪೇಟೆ ಪಟ್ಟಣಗಳಲ್ಲಿ ಓದಲು ಹೋಗುತ್ತಾರೆಯೇ ವಿನಃ ಹಳ್ಳಿಗಳಿಗೆ ಬರುವುದು ಕಡಿಮೆ. ಉಪಾಧ್ಯಾಯರ ಸಮಸೈಯೂ ಹಾಗೆಯೇ ಇದ್ದಿತ್ತು. ಡೈರೆಕ್ಟರ್‌ ಕಸ್ತೂರಿರಾಜ ಚೆಟ್ಟರುನಮ್ಮನ್ನು ಹುಡುಕಿಕೊಂಡು ಬಂದರು. ನಾವು ತಪ್ಪಿಸಕೊಂಡೇ ಹೋಗುತ್ತಿದ್ದೆವು. ಎರಡನೇ ವರ್ಷ ಅನಿವಾರ್ಯವಾಗಿ ಬೀರೂರಿನಲ್ಲಿ ಭೆಟ್ಟಿಯಾಗೇ ಬಿಟ್ಟರು. ಆಗ ಪ್ರಾರಂಭದಿಂದಲೇ ಗ್ರಾಂಟ್‌ ಕೊಡುತ್ತಿದ್ದರು. ವಿದ್ಯಾರ್ಥಿಗಳ ಊಟಕ್ಕೊಸ್ಕರ ತಿಂಗಳೊಂದಕ್ಕೆ ಒಬ್ಬ ವಿದ್ಯಾರ್ಥಿಗೆ ಮೂರು ರೂಪಾಯಿ ಕೊಡುತ್ತಿದ್ದರು. ಇವೆಲ್ಲವನ್ನೂ ಕೂಡಲೇ ಕೊಡಿಸುವುದಾಗಿ ಭರವಸೆಯಿತ್ತರು. ಉಪಾಧ್ಯಾಯರು ಸಿಗದಿದ್ದಲ್ಲಿ ಭರಮಸಾಗರ ರೇಂಜಿನ ವಿದ್ಯಾ ಇನ್ಸ್‌ಪೆಕ್ಟರ್‌ ಪಾಠ ಹೇಳುತ್ತಾರೆಂದು ಹೇಳಿದರು,ಒಪ್ಪಿಕೊಂಡೆವು. ಜಗಲೂರಿನಲ್ಲಿ ಸರಕಾರಿ ಶಾಲೆಯಲ್ಲಿ ಮಖ್ಯೋಪಾಧ್ಯಾಯರಾಗಿದ್ದ ಚೆನ್ನಬಸವಯ್ಯನವರು ಸಿರಿಗೆರೆಗೆ ಬರಲು ಒಪ್ಪಿದರು. ಆದರೆ ತಮ್ಮ ಹೆಸರಿನಲ್ಲಿ 25 ಸಾವಿರ ರೂಪಾಯಿ ಠೇವಣಿ ಇಡಬೇಕೆಂಬ ಕರಾರು ಹಾಕಿದರು. ನಮ್ಮ ಹತ್ತಿರ ಮೂರುಕಾಸೂ ಇರಲಿಲ್ಲ. 194ರಲ್ಲಿ ಶಾಲೆ ಮುಂಜೂರಾಯಿತು 73ವಿದ್ಯಾರ್ಥಿಗಳು ಸೇರಿದರು.

sree artical 6 1

ಈಗಿನಂತೆ ಹಿಂದೆ ಹಳ್ಳಿಗಳಲ್ಲಿ ಶಾಲೆಗಳ ಬಾಹುಳ್ಯ ಇರಲಿಲ್ಲ. ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯಲು ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಚಿತ್ರದುರ್ಗದಲ್ಲಿ ಒಂದು, ದಾವಣಗೆರೆಯಲ್ಲಿ ಒಂದು ಮತ್ತು ಶಿವಮೊಗ್ಗದಲ್ಲಿ ಒಂದು ಸರಕಾರಿ ಹೈಸ್ಕೂಲು ಮಾತ್ರ ಇದ್ದವು. ತಾಲ್ಲೂಕು ಕೇಂದ್ರಗಳಲ್ಲಿ ಮಾಧ್ಯಮಿಕ ಶಾಲೆಗಳು ಮಾತ್ರ. ಆಗ ಹತ್ತುಸಾವಿರ ಜನಸಂಖ್ಯೆಗೆ ಒಬ್ಬ ವಿದ್ಯಾವಂತ ಮಾತ್ರ ಸಿಗುತ್ತಿದ್ದ. ಹಳ್ಳಿಗಳಲ್ಲಿ ಯಾವ ಕೆಲಸ ಮಾಡಲೂ ವಿದ್ಯಾರ್ಹತೆಯ ಆಗತ್ಯ ಇರಲಿಲ್ಲ. ಕೃಷಿಕನ ಮಗ ಕೃಷಿಯಲ್ಲಿ ತಂದೆಯಿಂದ ಪರಿಣತಿ ಪಡೆಯುತ್ತಿದ್ದ. ಕುಶಲ ಕರ್ಮಿಗಳು, ಕಸಬುದಾರರೂ ಅಷ್ಟೆ ತಂತಮ್ಮ ಕುಲ ಕಸುಬುಗಳನ್ನು ಮುಂದಿನ ಪೀಳಿಗೆಗೆ ಸುಲಭವಾಗಿ. ಸಹಜವಾಗಿ ವರ್ಗಾಯಿಸುತ್ತಿದ್ದರು. ಆಗ ವೃತ್ತಿ ಶಿಕ್ಷಣ ಕೌಟುಂಬಿಕ ಶಿಕ್ಷಣವೇ ಆಗಿತ್ತು; ಅದಕ್ಕೆ ವಿದ್ಯಾರ್ಹತೆಯ ಅಗತ್ಯವಿರಲಿಲ್ಲ. ಈಗ ಪ್ರತಿಯೊಂದು ಕಸುಬಿಗೂ ವೃತ್ತಿಶಿಕ್ಷಣದ ಸ್ಪರ್ಶ ಬಂದುಬಿಟ್ಟಿದೆ. ಹಳೆಯ ವೃತ್ತಿಗಳೇ ಆಧುನಿಕತೆಯ ಮೆರುಗು ಪಡೆದಿವೆ. ಹಿಂದೆ ಮನುಷ್ಯನ ಬದುಕಿಗೆ ಏನೇನು ಬೇಕೊ ಅದೆಲ್ಲಾ ಹಳಿಗಳಲ್ಲೇ ಸಿಗುತ್ತಿತ್ತು.

sree artical 5

ಅಗಸರು,ಕಮ್ಮಾರರು, ಚಮ್ಮಾರರು,ಬಡಗಿಗಳು, ಕ್ಷೌರಿಕರು ಹೀಗೆ ವಿವಿಧ ಕಸುಬುಗಳ ಜನರು ಕೃಷಿಕರಿಗೆ ಸೇವೆಯನ್ನು  ಒದಗಿಸುತ್ತಿದ್ದರು. ಅವರನ್ನು ಆಯಗಾರರು ಎಂದು ಕರೆಯಲಾಗುತ್ತಿತ್ತು. ಆಯಗಾರರು ತಮ್ಮ ಸೇವೆಗೆ ಅಂದಂದೇ ನಗದಾಗಿ ಯಾವ ಪ್ರತಿಫಲವನ್ನೂ ಪಡೆಯುತ್ತಿರಲಿಲ್ಲ. ವರ್ಷವಿಡೀ ಪಡೆದ ಸೇವೆಗಾಗಿ ಸುಗ್ಗಿ ಕಾಲದಲ್ಲಿ ಇಂತಿಷ್ಟು ಎಂಬ ನಿಗದಿಯಾದ ಪ್ರಮಾಣದ ಕಾಳನ್ನು ಕೃಷಿಕರು ಆಯಗಾರರಿಗೆ ನೀಡುತ್ತಿದ್ದರು. ಹೀಗೆ ಆಯ ಪಡೆಯುತ್ತಿದ್ದವರಲ್ಲಿ ಕೂಲಿಮಠದ ಅಯ್ಯನವರುಸಹ ಇರುತ್ತಿದ್ದರು. ಮಕ್ಕಳನ್ನು ಓದಿಸುವ ಆ ಅಯ್ಯನವರು ಪ್ರತಿಫಲವನ್ನು ವಾರ್ಷಿಕವಾಗಿ ಸುಗ್ಗಿಯಲ್ಲಿ ಪಡೆಯುತ್ತಿದ್ದರು.

sree artical 5 1

ಹೀಗೆ ಇಡೀ ಹಳ್ಳಿ ಆತ್ಮನಿರ್ಭರವಾಗಿತ್ತು. ಹೊರಗಿನಿಂದ ಏನನ್ನೂ ತರಿಸದೆ ಹಳ್ಳಿಗೆ ಬೇಕಾದ್ದು ಹಳ್ಳಿಯಲ್ಲೇ ದೊರೆಯುತ್ತಿತ್ತು. ಯಾವುದಾದರೂ ಮನೆಯಲ್ಲಿ ಮುದುವೆ ನಡೆದರೆ ಅದು ಕೇವಲ ಆ ಮನೆಯದ್ದಾಗಿರುತ್ತಿರಲಿಲ್ಲ. ಇಡೀ ಊರೇ ಅದರಲ್ಲಿ ಪಾಲುಗೊಳ್ಳುತ್ತಿತ್ತು. ಮನೆಯ ಮುಂದೆ ಚಪ್ಪರ ಹಾಕಿ ತೋರಣ ಕಟ್ಟಲು ಊರ ಜನರು ಮುಂದಾಗುತ್ತಿದ್ದರು. ಅಡುಗೆ ಕೆಲಸದಲ್ಲಿ ಊರಿನ ಮಹಿಳೆಯರು ಕೈಜೋಡಿಸುತ್ತಿದ್ದರು. ಮದುವೆ ಮನೆಯವರು ಯಾರಿಗೂ ಯಾವುದೇ ಸಂಭಾವನೆ ಕೊಡುವ ಅಗತ್ಯವಿರಲಿಲ್ಲ. ಮದುವೆಗೆ ಬರುವ ಬೀಗರು ಬಿಜ್ಜರಿಗೆ ಜನ ತಮ್ಮ ಮನೆಗಳನ್ನು ಬಿಡದಿ ಮನೆಗಳಾಗಿ ಬಿಟ್ಟುಕೊಡುತ್ತಿದ್ದರು. ಈಗ ಕಾಲ ಬದಲಾಗಿದೆ, ಕಲ್ಯಾಣ ಮಂಟಪದ ಸಂಸ್ಕೃತಿ ಕಾಲಿಟ್ಟಿದೆ. ಹಣ ಕೊಟ್ಟರೆ ಸಾಕು ಎಲ್ಲ ಕೆಲಸಗಳೂ ಯಾಂತ್ರಿಕವಾಗಿ ತಂತಾನೆ ನಡೆದು ಹೋಗುತ್ತದೆ. ನೆಂಟರಿಗೆ ಪನ್ನೀರು ಚಿಮುಕಿಸಲೂ ಯಂತ್ರಗಳು ಬಂದು ಬಿಟ್ಟಿವೆ! ಈಗಲೂ ಹಳ್ಳಿಗಳಿವೆ. ಆದರೆ ಹಳ್ಳಿಗಳ ಸಾಂಫಿಕ ಬದುಕು ಜೀವಂತವಾಗಿಲ್ಲ..

sree artical 6

ಹಳ್ಳಿಗಳು ಹಿಂದೆ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದವು. ದೇವಸ್ಥಾನದಲ್ಲಿ ಹಳ್ಳಿಯ ಜನರು ತನ್ಮಯತೆಯಿಂದ ಭಜನೆ ಮಾಡುತ್ತಿದ್ದರು. ಯುವಕರು ಕೋಲಾಟದಲ್ಲಿ ತೊಡಗುತ್ತಿದ್ದರು. ನಾಟಕದ ಮೇಸ್ಟರನ್ನು ನೇಮಿಸಿಕೊಂಡು ನಾಟಕವನ್ನು ಕಲಿತು ಇಡೀ ರಾತ್ರಿ ಆಡುತ್ತಿದ್ದರು. ಈಗ ನಾಟಕ ಕಲಿಯುವವರೂ ಇಲ್ಲ ಕಲಿಸುವವರೂ ಇಲ್ಲ, ನೋಡುವವರು ಮೊದಲೇ ಇಲ್ಲ! ಕಾಲಮಾನದಲ್ಲಿ ಆದ ಪಲ್ಪಟಗಳಿಂದ ಜನರ ಸ್ವಭಾವದಲ್ಲಿ ಬದಲಾವಣೆಗಳಾಗಿ ಹಳ್ಳಿಗಳ ಸಾಂಫಿಕ ಮತ್ತು ಸಾಂಸ್ಕೃತಿಕ ಬದುಕು ನಾಶವಾಗಿದೆ!

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

To Top