ಹಾವೇರಿ: ಪ್ರಕೃತಿಯ ವಿಕೋಪಕ್ಕೆ, ಪ್ರವಾಹದ ಆರ್ಭಟಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಜನ, ಜಾನುವಾರು, ಮುಂದಿನ ಬದುಕು ಚಿಂತಿಸುತ್ತಾ ಇಲ್ಲಿನ ಮಂದಿ ಅಕ್ಷರಶಃ ಚಿಂತಾಕ್ರಾಂತರಾಗಿ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಇವರ ಬದುಕಿಗೆ ಸಾಂತ್ವನ ಮತ್ತು ಧೈರ್ಯ ತುಂಬುವ ಕಾರ್ಯವನ್ನು ಸದ್ದಿಲ್ಲದೆ ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮಾಡುತ್ತಿರುವುದು ಶ್ಲಾಘನೀಯ. ಇವತ್ತು ಶ್ರೀಗಳು ಮೂರನೇ ಹಂತವಾಗಿ ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಸಾಂತ್ವಾನ ಹೇಳುವ ಕೆಲಸ ಮಾಡಿದರು.
ನಾಡು,ನುಡಿ,ನೆಲ,ಜಲ,ರೈತರ ವಿಚಾರದಲ್ಲಿ ಸದಾ ಸ್ಪಂದಿಸುವ ,ಮಾತೃ ಹೃದಯದ ಕಾರುಣ್ಯ ಮೂರ್ತಿಗಳು, ನಾಡಿನ ಬರಿದಾದ ಕೆರೆಗಳಿಗೆ ನೀರು ತುಂಬಿಸುವ ಹತ್ತಾರು ಯೋಜನೆಗಳ ಜಲಋಷಿ, ಪ್ರವಾಹ ಸಂತ್ರಸ್ಥರಿಗೆ ಆಸರೆ ನೀಡುವ ಕಾರ್ಯಕ್ರಮಗಳನ್ನು ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ನಿರಂತರವಾಗಿ ಕೈಂಕರ್ಯ ನಡೆಸುತ್ತಾ ಬಂದಿದ್ದಾರೆ. ಅಂತರರಾಷ್ಟ್ರೀಯ ವಿದ್ವತ್ಪೂರ್ಣ ಲೋಕದಲ್ಲಿ ಗಣಕ ಋಷಿ ಎಂದು ಬಿರುದಾಂಕಿತ ತರಳಬಾಳು ಜಗದ್ಗುರುವರ್ಯರ ಅಂತರಾಳದಲ್ಲಿ ಸಂತ್ರಸ್ತರ ನೆನೆದು ಸಹಕಾರಕ್ಕೆ ಶ್ರಮಿಸುತ್ತಿರುವ ಅವರ ಮಾತೃ ಹೃದಯಿ ಕೈಂಕರ್ಯಕ್ಕೆ ಭಕ್ತಿ ಪೂರ್ವಕವಾಗಿ ಹಣೆ ಮಣೆಯುತ್ತೇವೆ.
ಕಳೆದ ತಿಂಗಳು ಗದಗ ಮತ್ತು ಬೆಳಗಾವಿ ಜಿಲ್ಲೆಯ ಹಳ್ಳಿಗಳಿಗೆ 70 ಲಕ್ಷ ರೂ ಮೌಲ್ಯದ ಸಾವಿರಾರು ಕುಟುಂಬಗಳಿಗೆ ಸೀರೆ, ಅಂಗಿ,ಲುಂಗಿ, ಟವಲ್,ಮಕ್ಕಳ ಬಟ್ಟೆ, ಸ್ವೆಟರ್ ಸೇರಿದಂತೆ ಅಗತ್ಯ ವಸ್ತುಗಳನ್ನು, 15 ಸಾವಿರಕ್ಕೂ ಹೆಚ್ಚು ರೊಟ್ಟಿ 10 ಸಾವಿರ ನೀರಿನ ಬಾಟಲ್,ಅಗತ್ಯ ಪರಿಕರಗಳ ಪರಿಹಾರದ ಸಾವಿರಾರು ಕಿಟ್ ಗಳನ್ನು ತಾವೇ ಖುದ್ದಾಗಿ ವಿತರಿಸಿದ್ದ ಶ್ರೀ ಗಳು, ಇಂದು ಮೂರನೇ ಹಂತದ ಪರಿಹಾರ ವಿತರಣೆ ಕಾರ್ಯದಲ್ಲಿ ಹಾವೇರಿ ಜಿಲ್ಲೆಯ ಕೂಡಲ ಮತ್ತು ನಾಗನೂರು ಗ್ರಾಮಗಳಲ್ಲಿ ಪರಿಹಾರ ವಿತರಿಸಿದರು.
ಅಗತ್ಯ ವಸ್ತುಗಳ ಕಿಟ್ ವಿತರಣೆ
200 ಕಾರ್ಯಕರ್ತರು 14 ತಂಡಗಳನ್ನೊಳಗೊಂಡ ಲಾರಿ ಮತ್ತು ಬಸ್ಸುಗಳ ಮೂಲಕ ಅಗತ್ಯ ಪರಿಕರಗಳ ಪರಿಹಾರದ ಸಾವಿರಾರು ಕಿಟ್ ಗಳನ್ನು ಇಂದು ತಾವೇ ಖುದ್ದಾಗಿ ವಿತರಿಸಿದರು. ಒಂದು ಕಿಟ್ ನಲ್ಲಿ ನಾಲ್ಕು ಸಾವಿರ ಬೆಲೆಯ ಪರಿಹಾರ ಸಾಮಗ್ರಿಗಳನ್ನು ಇರಿಸಲಾಗಿದ್ದು, ಅಕ್ಕಿ, ಬೇಳೆ, ದವಸ, ಧಾನ್ಯ, ಮಕ್ಕಳು, ಪುರುಷರು, ಮಹಿಳೆಯರ ಬಟ್ಟೆಗಳು ರಕ್ಷಣಾ ಉಡುಪು ಸೇರಿದಂತೆ ಎಲ್ಲಾ ಅಗತ್ಯ ಪರಿಕರಗಳನ್ನು ವಿತರಿಸಿದರು. ಹಾವೇರಿ ಜಿಲ್ಲಾ ನೆರೆ ಸಂತ್ರಸ್ಥರ ಪರಿಹಾರ ಕಾರ್ಯಕ್ಕೆ 50 ಲಕ್ಷ ರೂಪಾಯಿಗಳನ್ನು ತರಳಬಾಳು ಬೃಹನ್ಮಠದಿಂದ ಮೀಸಲಿಡಲಾಗಿತ್ತು.
ಹಸಿದ ಹೊಟ್ಟೆಗೆ ಜಾತಿ ಇರುವುದಿಲ್ಲ
ಸಂತ್ರಸ್ತರ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು, ಹಸಿದ ಹೊಟ್ಟೆಗೆ ಜಾತಿ ಇರುವುದಿಲ್ಲ. ಹಸಿವು ಎಲ್ಲರಿಗೂ ಒಂದೇ ಎಂದು ನೆರೆ ಸಂತ್ರಸ್ತರಲ್ಲಿ ಆತ್ಮ ವಿಶ್ವಾಸ ತುಂಬಿದರು. ಸಂತ್ರಸ್ತರ 1 ಸಾವಿರ ಮಕ್ಕಳಿಗೆ ಶ್ರೀ ಮಠದಿಂದ ತರಳಬಾಳು ವಿದ್ಯಾ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುವುದಾಗಿ ತಿಳಿಸಿದರು. ಇಲ್ಲಿನ ಪ್ರದೇಶಗಳ ಗೋವು, ದನ, ಕರುಗಳಿಗೆ ಸಿರಿಗೆರೆಯ ತರಳಬಾಳು ಗೋಶಾಲೆಯಲ್ಲಿ ಮೇವು ನೀರಿನ ವ್ಯವಸ್ಥೆ ಕಲ್ಪಿಸಲು ಎಲ್ಲಾ ನೆರವು ನೀಡಲಾಗುವುದಾಗಿ ತಿಳಿಸಿದರು. ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಹಾಜರಿದ್ದರು.
-ಬಸವರಾಜ ಸಿರಿಗೆರೆ