ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್ ಲಾಕ್ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಸರ್ಕಾರದ ಮತ್ತು ವಕ್ಫ್ ಮಂಡಳಿಯ ಆದೇಶದಂತೆ ಮಸೀದಿ, ದರ್ಗಾ ಮತ್ತು ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ. ಮನೆಗಳಲ್ಲೇ ಹಬ್ಬವನ್ನು ಆಚರಿಸುವ ಮೂಲಕ ಮುಸ್ಲಿಂ ಬಾಂಧವರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮನವಿ ಮಾಡಿದರು.
ಇಂದು ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ರಂಜಾನ್ ಹಬ್ಬದ ಪ್ರಯುಕ್ತ ನಾಗರೀಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಜಾನ್ ಹಬ್ಬ ಭಾನುವಾರವೋ ಅಥವಾ ಸೋಮವಾರದಂದು ಆಚರಿಸಲಾಗುವುದೋ ಎಂಬ ಬಗ್ಗೆ ಮುಸ್ಲಿಂ ಮುಖಂಡರು ನಿರ್ಧಾರ ಕೈಗೊಳ್ಳಲಿದ್ದಾರೆ. ಭಾನುವಾರ ಹಬ್ಬ ಆಚರಿಸುವುದಾದರೆ ಹಬ್ಬಕ್ಕೆ ಅವಶ್ಯಕವಾದ ಅಂಗಡಿಗಳನ್ನು ತೆರೆಯುವ ಕುರಿತು ಜಿಲ್ಲಾಧಿಕಾರಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
ಮೇ 31 ರವರೆಗೆ ದೇಶದಲ್ಲಿ ಲಾಕ್ಡೌನ್ ಮುಂದುವರೆಸಿರುವ ಕುರಿತು ಕೇಂದ್ರ ಗೃಹ ಇಲಾಖೆಯು ಹೊರಡಿಸಿರುವ ಆದೇಶದನ್ವಯ ರಾಜ್ಯದ ಎಲ್ಲಾ ಮಸೀದಿ/ದರ್ಗಾ/ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಅವಕಾಶ ನೀಡಿಲ್ಲ ಎಂದರು.
ಇಂದು ರಾತ್ರಿ 7 ಗಂಟೆಯಿಂದಲೇ ಕರ್ಫ್ಯೂ ಜಾರಿ
ಪ್ರತಿದಿನ ರಾತ್ರಿ 7 ರಿಂದ ಬೆಳಿಗ್ಗೆ 7 ರವರೆಗೆ ಕಫ್ರ್ಯೂ ಇರುತ್ತದೆ. ಭಾನುವಾರದಂದು ಅವಶ್ಯಕವಾಗಿ ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಸಂಪೂರ್ಣ ಲಾಕ್ಡೌನ್ ಇರುತ್ತದೆ. ಆದ್ದರಿಂದ ಇಂದು ರಾತ್ರಿ 7 ರಿಂದ ಸೋಮವಾರ ಬೆಳಿಗ್ಗೆ 7 ರವರೆಗೆ ಕಫ್ರ್ಯೂ ಜಾರಿಯಲ್ಲಿರುತ್ತದೆ.
ಜೂನ್ 31 ರ ಹೊತ್ತಿಗೆ ಜಿಲ್ಲೆಯಲ್ಲಿ ವರದಿಯಾದ ಕೊರೊನಾ ಪ್ರಕರಣಗಳು ಗುಣಮುಖರಾಗಿ ಜಿಲ್ಲೆ ಮತ್ತೆ ಗ್ರೀನ್ ಝೋನ್ಗೆ ಮರಳುವ ವಿಶ್ವಾಸವಿದೆ. ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದ್ದರಿಂದ ಎಲ್ಲರೂ ಜಿಲ್ಲೆ ಗ್ರೀನ್ಝೋನ್ಗೆ ಮರಳಲು ಸಹಕರಿಸಬೇಕೆಂದರು.
ಕಂಟೈನ್ಮೆಂಟ್ ಜೋನ್ಗಳಲ್ಲಿ ಬಹಳ ಶಿಸ್ತಿನಿಂದ ನಿಯಂತ್ರಣ ಕಾರ್ಯಗಳು ಜರುಗಿತ್ತಿವೆ. ಎಲ್ಲರ ಪರೀಕ್ಷೆ ನಡೆಯುತ್ತಿದೆ. ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಕಂಟೈನ್ಮೆಂಟ್ ಝೋನ್ಗಳು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿವೆ. ಭಾನುವಾರ ಕೂಡ ನಗರದಲ್ಲಿ ಪೊಲೀಸ್ ಗಸ್ತು ಇರುತ್ತದೆ. ರಂಜಾನ್ ಹಬ್ಬದ ಹಿನ್ನೆಲೆ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಮಾತನಾಡಿ, ಕೊರೊನಾ ಹಿನ್ನೆಲೆ ಎಲ್ಲೆಡೆ ಸಂಕಷ್ಟ ಎದುರಾಗಿದೆ. ಎಲ್ಲರಿಗೂ ತೊಂದರೆಯಾಗಿದೆ. ಇತರೆ ಸಮುದಾಯವರು ತಮ್ಮ ಹಬ್ಬಗಳನ್ನು ಸರಳವಾಗಿ ಆಚರಿಸಿದ್ದಾರೆ. ಅದೇ ರೀತಿ ನಾವು ಕೂಡ ಸರಳವಾಗಿ ರಂಜಾನ್ ಹಬ್ಬವನ್ನು ಸರ್ಕಾರದ ಆದೇಶದಂತೆ ಆಚರಿಸುತ್ತೇವೆ. ಒಂದು ವೇಳೆ ಭಾನುವಾರ ಹಬ್ಬ ಆಚರಿಸುವಂತಾದರೆ ಕರ್ಫ್ಯೂ ಇರುವ ಹಿನ್ನೆಲೆ ಅವಶ್ಯಕ ಅಂಗಡಿಗಳನ್ನು (ಮೀನು, ಮಟನ್, ಇತರೆ) ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಕೋರಿದರು.
ಸಭೆಯಲ್ಲಿ ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಸಿರಾಜ್, ಸೈಯದ್ ಚಾರ್ಲಿ, ಅಮಾನುಲ್ಲಾ ಖಾನ್ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು, ಅಧಿಕಾರಿಗಳು ಹಾಜರಿದ್ದರು.