ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ರೈತರು ಹೆಚ್ಚು ನೀರು ಬೇಡುವ ಬೆಳೆಗಳ ಬದಲಾಗಿ ಕಡಿಮೆ ಅವಧಿಯ ಹಾಗೂ ಕಡಿಮೆ ನೀರು ಬಳಸುವ ಅರೆ ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಹಾಗೂ ಡಿಎಪಿ ರಸಗೊಬ್ಬರ ಬದಲು ಕಾಂಪ್ಲೆಕ್ಸ್ ರಸಗೊಬ್ಬರ ಬಳಸುವಂತೆ ರೈತರಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಮನವಿ ಮಾಡಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವು ಲಭ್ಯತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೇ.56ರಷ್ಟು ಮಳೆ ಕೊರತೆ
ಜೂನ್ ತಿಂಗಳಲ್ಲಿ ವಾಡಿಕೆಯಂತೆ ಆಗಬೇಕಾಗಿದ್ದ ಮಳೆಯಲ್ಲಿ ತೀವ್ರ ಕೊರತೆ ಕಂಡುಬಂದಿದ್ದು, ಬಿತ್ತನೆ ಪ್ರಮಾಣ ಕೇವಲ ಶೇ. 5.67 ರಷ್ಟಾಗಿದೆ. ಬೇಸಿಗೆ, ಪೂರ್ವ ಮುಂಗಾರು ಮತ್ತು ಮುಂಗಾರುಗಳಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಜೂನ್ ಅಂತ್ಯಕ್ಕೆ ಶೇ.56 ರಷ್ಟು ಕೊರತೆ ಇದೆ, ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತದಂತಹ ಅಧಿಕ ನೀರು ಬೇಡುವ ಬೆಳೆಗಳ ಬದಲಾಗಿ ರೈತರು ಈ ಕೆಳಗಿನ ಪರ್ಯಾಯವಾಗಿ ರಾಗಿ, ಹುರುಳಿ, ಸಜ್ಜೆ, ನವಣೆ , ಶೇಂಗಾ ಬೆಳೆಗಳನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳು ರೈತರ ಮನವೊಲಿಸಬೇಕೆಂದರು.
ಎಲ್ ನಿನೋ ಪರಿಣಾಮ ಮಳೆ ಕೊರತೆ
ಎಲ್ ನಿನೋ ಪರಿಣಾಮ ಮಳೆ ಕೊರತೆ ಸಾಧ್ಯತೆ ಇರುವುದರಿಂದ ಅರೆ ನೀರಾವರಿ ಬೆಳೆಗಳಿಗೆ ಆದ್ಯತೆ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತ್ತು ಪ್ರಚಾರ ವಾಹನಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ವಿಸ್ತರಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಡಿ.ಎ.ಪಿ, ಯೂರಿಯಾ, ಕಾಂಪ್ಲೆಕ್ಸ್, ಎಂ.ಒ.ಪಿ ರಸಗೊಬ್ಬರುಗಳು, ಮೇವುಗಳು ಮತ್ತು ಬಿತ್ತನೆ ಬೀಜಗಳು ಲಭ್ಯವಿದ್ದು, ಯಾವುದೇ ಕೊರತೆಯಿಲ್ಲ ಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ರಸಗೊಬ್ಬರವನ್ನು ಪ್ರಸ್ತುತ ಫ್ರೂಟ್ಸ್ ಐಡಿ ಆಧಾರದ ಮೇಲೆ ವಿತರಿಸಲಾಗುತ್ತಿದ್ದು, ಐಡಿ ಇಲ್ಲದ ಅರಣ್ಯ ಹಕ್ಕು ಸಮಿತಿ ಫಲಾನುಭವಿಗಳು ಅಥವಾ ಬಗರ್ ಹುಕುಂ ಸಾಗುವಳಿದಾರರಿಗೆ ‘ಕೇಸ್ ಟು ಕೇಸ್’ ಪರಿಶೀಲಿಸಿ ವಿತರಿಸಲು ತಹಶೀಲ್ದಾರರಿಗೆ ಸೂಚನೆ ನೀಡಿದರು.
ಪ್ರತಿಯೊಂದು ಗೊಬ್ಬರದ ಮಾರಾಟವೂ ಪಾಯಿಂಟ್ ಆಫ್ ಸೇಲ್ (POS) ಯಂತ್ರದ ಮೂಲಕವೇ ದಾಖಲಾಗಬೇಕು. ಗೊಬ್ಬರ ಮಾರಾಟಗಾರರು ಪ್ರತಿದಿನ ತಮ್ಮಲ್ಲಿರುವ ದಾಸ್ತಾನು ವಿವರಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ, ಇದನ್ನು ಕೃಷಿ ಅಧಿಕಾರಿಗಳು ತಪಾಸಣೆ ಮಾಡುವಂತೆ ನಿರ್ದೇಶನ ನೀಡಿದರು. ಕಾಳಸಂತೆ ಮಾರಾಟ ತಡೆಯಲು ಅಧಿಕಾರಿಗಳು ವಾರಕ್ಕೊಮ್ಮೆ ಗೊಬ್ಬರದ ಗೋದಾಮುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಭದ್ರಾ ಜಲಾಶಯ ಒಳಹರಿವು ಗಣನೀಯ ಕುಸಿತ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 14,000 ಕ್ಯೂಸೆಕ್ ಒಳಹರಿವು ಹಾಗೂ 148 ಅಡಿ ನೀರಿನ ಮಟ್ಟ ಇತ್ತು. ಆದರೆ ಈ ವರ್ಷ ಸುಮಾರು 10 ಟಿ.ಎಂ.ಸಿ ಯಷ್ಟು ನೀರಿನ ಕೊರತೆ ಕಂಡುಬಂದಿದೆ. ಜಿಲ್ಲೆಯಲ್ಲಿ ಒಂದು ಬೆಳೆಗೆ ಅಂದಾಜು 30 ಟಿಎಂಸಿ ಮತ್ತು ಎರಡು ಬೆಳೆಗೆ 70 ಟಿಎಂಸಿ ನೀರಿನ ಅವಶ್ಯಕತೆ ಇದೆ ಎಂದು ತಿಳಿಸಿದರು.
“ಜಿಲ್ಲೆಯ ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳಿಗೆ ನೀರಿನ ಲಭ್ಯತೆ ಕಠಿಣವಾಗಿರುವುದರಿಂದ, ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಹಾಗೂ ರೈತರು ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು.” ಎಂದು ತಿಳಿಸಿದರು.
ಮಳೆ ಹಾನಿಯಿಂದಾಗಿ ಶಾಲಾ ಕಟ್ಟಡಗಳು ಅಥವಾ ಸರ್ಕಾರಿ ಆಸ್ಪತ್ರೆಗಳು ಹಾನಿಗೊಳಗಾಗಿದ್ದರೆ, ಅವುಗಳ ದುರಸ್ತಿಗಾಗಿ ಎನ್.ಡಿ.ಆರ್.ಎಫ್ ಮತ್ತು ಎಸ್ಡಿಆರ್ಎಫ್ ನಿಧಿಯಿಂದ ರೂ. 2 ಲಕ್ಷದವರೆಗೆ ಅನುದಾನ ಬಳಸಲು ಅವಕಾಶವಿದೆ. ಎಲ್ಲಾ ಶಾಲೆ ಮತ್ತು ಕಾಲೇಜು ಕಟ್ಟಡಗಳ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಸಿಬ್ಬಂದಿ, ವೈದ್ಯರು ಅಥವಾ ಇಲಾಖೆಯ ಯಾವುದೇ ಸಿಬ್ಬಂದಿಯ ಮೇಲೆ ಸಾರ್ವಜನಿಕರು ದೈಹಿಕ ಹಲ್ಲೆ ನಡೆಸಿದರೆ ತಹಶೀಲ್ದಾರರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿಗೆ ಮಾನಸಿಕ ಧೈರ್ಯ ತುಂಬಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿದ್ದರೆ ತಹಶೀಲ್ದಾರ್ ಅವರು ತಮ್ಮ ಮ್ಯಾಜಿಸ್ಟ್ರೇಟ್ ಅಧಿಕಾರ ಬಳಸಿ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರುಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೇ ಮಾಧವ ವಿಠ್ಠಲರಾವ್, ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಹೊನ್ನಾಳಿ ಉಪವಿಭಾಗಾಧಿಕಾರಿ ಹೆಚ್.ಬಿ.ಚನ್ನಪ್ಪ, ಡಿವೈಎಸ್ಪಿ ಶರಣಪ್ಪ,ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರೈತ ಮುಖಂಡ ಬಲ್ಲೂರು ರವಿಕುಮಾರ್, ರೈತ ಮುಖಂಡರುಗಳು, ತಹಶೀಲ್ದಾರುಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


