ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಭಾಗವಹಿಸಲು ಹೊಸದಾಗಿ ಮತದಾನ ಪಟ್ಟಿಗೆ ಸೇರ್ಪಡೆಗೊಂಡಿರುವ ಎಂಎಲ್ಸಿಗಳ ವಿಳಾಸ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಯಾವ ಎಂಎಲ್ಸಿಯೂ ವಾಸವಾಗಿಲ್ಲ. ಹೀಗಾಗಿ ಎಂಎಲ್ಸಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳಲು ಹೊಸದಾಗಿ ಸೇರಿಸಿರುವ ಎಂಎಲ್ಸಿಗಳ ವಿಳಾಸ ಪರಿಶೀಲಿಸಬೇಕು ಎಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ಚುನಾವಣೆ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಗೆ ದೂರು ಸಲ್ಲಿಸಿದರು. ಆಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರೊಂದಿಗೆ ಸ್ಥಳ ಪರಿಶೀಲನೆಗೆ ಚುನಾವಣಾಧಿಕಾರಿ ಹರ್ಷಗುಪ್ತ ಅವರು ಪರಿಶೀಲನೆ ನಡೆಸಿದರು.
ಪರಿಶೀಲನೆ ನಂತರ ಮತನಾಡಿದ ಜಿಲ್ಲಾಧಿಕಾರಿ, ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಎಂಎಲ್ಸಿಗಳ 4 ರಿಂದ 5 ಮನೆಗಳಿಗೆ ಭೇಟಿ ನೀಡಿದಾಗ ಬಾಡಿಗೆ ಕರಾರಿನ ಪ್ರಕಾರ ಯಾರೂ ವಾಸವಿಲ್ಲ. ಪಾಲಿಕೆ ಸದಸ್ಯರ ಮನವಿಯನ್ನು ಅಪೀಲೆಂದು ಪರಿಗಣಿಸಿ ಈ ವಿಷಯವನ್ನು ಆರ್ಸಿ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದು, 24 ಗಂಟೆಯೊಳಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಎಂಎಲ್ಸಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ಹಾಗೂ ವೀಕ್ಷಕರ ಮಾರ್ಗದರ್ಶನದಂತೆ ಮತ್ತು ಕಾಯ್ದೆಯನ್ವಯ ಕ್ರಮ ಕೈಗೊಳ್ಳಲು ಬದ್ದನಾಗಿದ್ದೇನೆ ಎಂದು ತಿಳಿಸಿದರು.
ಚುನಾವಣೆ ವೀಕ್ಷಕರಾದ ಹರ್ಷಗುಪ್ತ ಅವರು ಮಾತನಾಡಿ, ಹೊಸದಾಗಿ 12 ಎಂಎಲ್ಸಿಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು,ಅವರ ವಿಳಾಸಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಆ ಸ್ಥಳಗಳಲ್ಲಿ ವಾಸವಿಲ್ಲದಿರುವುದು ಕಂಡು ಬಂದಿರುತ್ತದೆ. ಬೆಂಗಳೂರು, ಬಳ್ಳಾರಿ ಹಾಗೂ ವಿವಿಧ ಭಾಗಗಳ ಎಂಎಲ್ಸಿಗಳು ಇಲ್ಲಿ ವಾಸವಿರುವುದಾಗಿ ತಿಳಿಸಿ ಒಂದು ತಿಂಗಳ ಈಚೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.
ಫೆ.19 ರಂದು ನಡೆಯುವ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯ ಉದ್ದೇಶದಿಂದ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಈ ಕುರಿತು ದಾಖಲಾತಿಗಳನ್ನು ಪರಿಶೀಲಿಸಿ ಪ್ರಾದೇಶಿಕ ಆಯುಕ್ತರಿಗೆ ಹಾಗೂ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗುವುದು. ಹಾಗೂ ಜಿಲ್ಲಾಧಿಕಾರಿಗಳು, ಚುನಾವಣೆ ಪ್ರಾದೇಶಿಕ ಆಯುಕ್ತರೊಂದಿಗೆ ರೊಂದಿಗೆ ಚರ್ಚಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಈ ರೀತಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಚುನಾವಣಾ ಅಧಿಕಾರಿಗಳ ಸಹಿ ಕೂಡ ಇದ್ದು, ಈ ಕುರಿತು ವಿಚಾರಣೆ ನಡೆಸಲಾಗುವುದು. ಇದೊಂದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಇವತ್ತೇ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದರು.
ಎಂಎಲ್ ಸಿ ಕೆ.ಸಿ.ಕೊಂಡಯ್ಯ ದಾವಣಗೆರೆ ವಿದ್ಯಾನಗರದ ನಾಲ್ಕನೇ ಮಹಡಿಯ ಒಂದು ಪುಟ್ಟ ಮನೆಯಲ್ಲಿ ವಾಸವಿರಲಿಕ್ಕೆ ಬಾಡಿಗೆ ಪಡೆದಿದ್ದು, ಆಗಾಗ ಬಂದು ಹೋಗುತ್ತಾರೆ. ರೂ.4000 ಬಾಡಿಗೆ ನೀಡುತ್ತಾರೆ. ಕಳೆದ ಆರು ತಿಂಗಳ ಹಿಂದೆ ಬಂದಿದ್ದರೆಂದು ಬಾಡಿಗೆದಾರರು ಮಾಹಿತಿ ನೀಡಿದರು. ಇನ್ನು ಎಂಎಲ್ಸಿ ತೇಜಸ್ವಿನಿಗೌಡ ಇವರ ಮನೆಗೆ ಭೇಟಿ ನೀಡಿದಾಗ ಆ ಮನೆಯಲ್ಲಿ ಶಿವಶಂಕರ್ ವಾಸವಿದ್ದು, ತೇಜಸ್ವಿನಿಗೌಡ ನಮ್ಮ ದೂರದ ಸಂಬಂಧಿಯಾಗಿದ್ದಾರೆ. ನಾವು ಅವರ ಪರವಾಗಿ ಈ ಮನೆಯಲ್ಲಿ ವಾಸಿಸುತ್ತಿದ್ದೇವೆ. ಹೀಗೆ ಎರಡು ವಾರಗಳ ಹಿಂದೆ ಬಂದು ಹೋಗಿದ್ದಾರೆ. ಅವರ ಮಕ್ಕಳು ಇಲ್ಲಿಯೇ ಓದುತ್ತಿದ್ದಾರೆಂದು ತಿಳಿಸಿದರು. ಎಂಎಲ್ಸಿ ವೈ.ನಾರಾಯಣಸ್ವಾಮಿ ಇವರ ಮತದಾರರ ಪಟ್ಟಿಯಲ್ಲಿನ ವಿಳಾಸ ಹುಡುಕಿ ಹೋದಾಗ ಆ ಮನೆಯ ಬಾಗಿಲು ತೆರೆದಿದ್ದರೂ ನಿವಾಸಿಗಳ್ಯಾರೂ ಕಂಡು ಬಂದಿರುವುದಿಲ್ಲ. ಎರಡನೇ ಮಹಡಿಯ ಒಂದು ಕೊಠಡಿಯಲ್ಲಿ ಯು.ಬಿ.ವೆಂಕಟೇಶ್, ಎಂಎಲ್ಸಿ ಎಂಬ ಫಲಕವಿದ್ದು, ಅವರ ಪಕ್ಕದ ಮನೆಯವರನ್ನು ವಿಚಾರಿಸಿದಾಗ ಕಳೆದ 15 ದಿನಗಳಿಂದ ಆ ಕೊಠಡಿಗೆ ಯಾರೂ ಬಂದಿರುವುದಿಲ್ಲ. ಅದಕ್ಕಿಂತ ಮುಂಚೆ ಎಂಎಲ್ಎ ಕಡೆಯವರು ಬರುತ್ತಾರೆಂದು ಕೇಳಲ್ಪಟ್ಟಿದ್ದೆ ಎಂದರು.