ಡಿವಿಜಿ ಸುದ್ದಿ, ದಾವಣಗೆರೆ: ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಪ್ರೇಮಾ(44 ವರ್ಷ) ಎಂಬ ಮಹಿಳೆಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಬಸವಾಪಟ್ಟಣ ನಾಡ ಕಚೇರಿಯ ಉಪ ತಹಶೀಲ್ದಾರ್ ಎನ್.ಎಸ್.ಚಂದ್ರಪ್ಪ ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.
ಮೇ 30 ರಂದು ತ್ಯಾವಣಿಗಿ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಗಳೂರು ತಾಲ್ಲೂಕಿನ ಹಳದಂಡೆ ಗ್ರಾಮದ ಪ್ರೇಮಾ ದಾವಣಗೆರೆಯಿಂದ ಮೋಟಾರ್ ಬೈಕಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತು ಬರುತ್ತಿರುವಾಗ ಮತ್ತಿ ಸಮೀಪ ಆಕಸ್ಮಿಕವಾಗಿ ಅಡ್ಡ ಬಂದ ಎಮ್ಮೆಗೆ ಬೈಕ್ ಡಿಕ್ಕಿ ಹೊಡೆದು ಹಿಂಬಿದಿಯಲ್ಲಿ ಕುಳಿತಿದ್ದ ಹೇಮಾ ಕೆಳಗೆ ಬಿದು ಒದ್ದಾಡುತ್ತಿದ್ದರು. ಅಲ್ಲಿ ಹಲವರು ಅವರನ್ನು ನೋಡಿದರೂ ಸಹಾಯಕ್ಕೆ ಮುಂದಾಗದೇ ಇರುವುದನ್ನು ಕಂಡ ಚಂದ್ರಪ್ಪ ತಮ್ಮ ಕಾರಿನಲ್ಲಿ ದಾವಣಗೆರೆಯ ಎಸ್ಎಸ್ ಆಸ್ಪತ್ರೆಗೆ ತಂದು ಸೇರಿಸಿ, ಆಸ್ಪತ್ರೆ ಖರ್ಚಿಗೆಂದು ರೂ.10 ಸಾವಿರ ನೀಡಿದ್ದರು. ನಂತರ ಅವರ ತಂದೆ ತಾಯಿಗೆ ವಿಷಯ ತಿಳಿಸಿದ್ದರು. ಬೈಕ್ ಸವಾರ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಮಾನವೀಯತೆ ಮೆರೆದ ಉಪ ತಹಶೀಲ್ದಾರನ್ನು ಇಂದು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಚಂದ್ರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲರೂ ಹೀಗೇಯೇ ತಮ್ಮ ಸುತ್ತಮುತ್ತಲು ಏನಾದರೂ ಅವಘಡಗಳು ಸಂಭವಿಸಿದರೆ ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಪಘಾತಕ್ಕೀಡಾದ ಮಹಿಳೆಯ ತಂದೆ ಪಂಚಾಕ್ಷರಪ್ಪನವರಿಗೆ ಧೈರ್ಯ ಹೇಳಿದರು. ಈ ಚಂದ್ರಪ್ಪನವರ ಧರ್ಮಪತ್ನಿ ಬಿ.ಎಸ್.ರೇಣುಕಮ್ಮ, ಹೆಚ್.ಬಿ.ಅಣ್ಣಪ್ಪ, ಆಂಜನೇಯ, ಆಶಾ ಕಾರ್ಯಕರ್ತೆಯರು, ರೈತರಮುಖಂಡರು ಮತ್ತಿತರರು ಉಪಸ್ಥಿತರಿದ್ದರು.



