ಬೆಂಗಳೂರು:ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ. ಅಕ್ಕ ಗೀತಾ ಶಿವಕುಮಾರ್ ಕೂಡ ಕಾಂಗ್ರೆಸ್ಗೆ ಬರ್ತಾರೆ. ಮಾತುಕತೆ ಈಗಾಗಲೇ ಆಗಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ವಿರೋಧ ಪಕ್ಷದಲ್ಲಿದ್ದಾಗ ಕೂಡ ಬೇಧ-ಭಾವ ಮಾಡಿಲ್ಲ. ಡಿ.ಕೆ. ಶಿವಕುಮಾರ್ ನನಗೆ ಅಣ್ಣನ ರೀತಿ ಸಹಕಾರ ಕೊಟ್ಟಿದ್ದಾರೆ. ಡಿಕೆಶಿ ಅವರು ಬಂಗಾರಪ್ಪ ಅನುಯಾಯಿ. ಹೀಗಾಗಿ ನಾನು ಕಾಂಗ್ರೆಸ್ ಸೇರ್ತಿದ್ದೇನೆ ಎಂದು ಪಕ್ಷ ಸೇರ್ಪಡೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಈಗಿನಿಂದ ನಾನು ಕಾಂಗ್ರೆಸ್ಸಿಗ, ಅಧಿಕೃತ ಆಮೇಲೆ ಆಗುತ್ತೇನೆ. ಇವತ್ತು ಕಾಂಗ್ರೆಸ್ ದೇಶ, ರಾಜ್ಯಕ್ಕೆ ಅವಶ್ಯಕವಾಗಿದೆ. ಹೀಗಾಗಿ ಕಾಂಗ್ರೆಸ್ ಸೇರುವುದಕ್ಕೆ ಬಂದಿದ್ದೇನೆ. ಹಿಂದೆ ನಡೆದ ಘಟನೆ ಬಗ್ಗೆ ಈಗ ಮಾತನಾಡಲ್ಲ. ಜೆಡಿಎಸ್ ಬಿಟ್ಟ ಬಗ್ಗೆ ಕೂಡ ಮಾತನಾಡಲ್ಲ, ಕುಮಾರಸ್ವಾಮಿ ಏನೇ ಅಂದ್ರು, ಅವರ ಬಗ್ಗೆ ಗೌರವಿದೆ ಎಂದರು.



