ದಾವಣಗೆರೆ: ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕಳೆದ ಲೋಕಸಭೆ ಚುನಾವಣೆ ವೇಳೆ ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ ಅವರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಅವರ ಮೇಲೆ ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡಿದರೂ ಸುಮ್ಮನಿರುವುದು ಏಕೆ ಕುರುಬ ಸಮಾಜದ ಯುವ ಮುಖಂಡ ಜಿ.ಬಿ. ವಿನಯಕುಮಾರ್ ಪ್ರಶ್ನಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಹೋರಾಟ, ಜನಾಂದೋಲನಗಳು ನಡೆಯುತ್ತಿದ್ದರೂ ಶಾಮನೂರು ಕುಟುಂಬದ ರಾಜಕಾರಣಿಗಳು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲುವ ಯಾವ ನಡೆಯನ್ನೂ ಈವರೆಗೆ ತೋರಿಲ್ಲ. ಬೆಂಬಲ ಸೂಚಿಸುವ ವಿಚಾರದಲ್ಲಿ ಶಾಮನೂರು ಕುಟುಂಬದವರು ಮೌನವಹಿಸಿರುವುದೇಕೆ.?
ಲೋಕಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ನಾಲ್ಕು ಬಾರಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ರ್ಯಾಲಿ ನಡೆಸಿದರು. ಇಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಮತ ಹಾಕುವಂತೆ ಮತದಾರರಲ್ಲಿ ಮನವಿಯೂ ಮಾಡಿ ಅವರನ್ನು ಗೆಲ್ಲಿಸಿದ್ದಾರೆ. ಆದರೆ, ಸಂಸದರು ಮುಖ್ಯಮಂತ್ರಿಯವರಿಗೆ ನೊಟೀಸ್ ನೀಡಿದ ರಾಜ್ಯಪಾಲರ ನಡೆ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿಲ್ಲ. ಮೈಸೂರಿನಲ್ಲಿ ನಡೆದ ಜನಾಂದೋಲನದಲ್ಲಿಯೂ ಭಾಗವಹಿಸಿಲ್ಲ. ದಾವಣಗೆರೆಯಲ್ಲಿ ಅಹಿಂದ ಒಕ್ಕೂಟದಿಂದ ನಡೆಸಿದ ಹೋರಾಟದಲ್ಲಿಯೂ ಯಾರೂ ಭಾಗವಹಿಸಿಲ್ಲ ಎಂದರು.



