ದಾವಣಗೆರೆ: ತರಳಬಾಳು ಪೀಠದ ಬಗ್ಗೆ ಇತ್ತೀಚೆಗೆ ಕೆಲವರು ದಾವಣಗೆರೆಯ ರೆಸಾರ್ಟ್ನಲ್ಲಿ ಸಭೆ ಸೇರಿದ್ದು ನಮಗೆ ಬಹಳಷ್ಟು ನೋವು ತಂದಿದೆ. ಶಾಮನೂರು ಶಿವಶಂಕರಪ್ಪನವರು ಸಮಾಜದ ಹಿರಿಯ ರಾಜಕೀಯ ಮುಖಂಡರು ಮತ್ತು ಪೀಠದ ಭಕ್ತರು. ಸಮಾಜದಲ್ಲಿ ಗೌರವದ ಸ್ಥಾನ ಹೊಂದಿರುವವರು. ಅವರು ಕೂಡ ಇಂತಹ ಸಭೆಯಲ್ಲಿ ಭಾಗವಹಿಸುತ್ತಾರೆಂದು ನಾವು ಭಾವಿಸಿರಲಿಲ್ಲ. ಇದೊಂದು ಮೂರ್ಖತನದ ಪರಮಾವಧಿ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಭರಮಸಾಗರ ಸಮೀಪದ ಕೊಳಹಾಳ್ ಗ್ರಾಮದಲ್ಲಿ ನೂತನ ಬಸವೇಶ್ವರ ದೇವಸ್ಥಾನ ಉದ್ಘಾಟಿಸಿ ಮಾತನಾಡಿದರು. ಮಠ ಮತ್ತು ತಮ್ಮ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳನ್ನು ಬಿಟ್ಟು ಸತ್ಯದ ಮೂಲವನ್ನು ಹುಡುಕಿ ಅವುಗಳ ಬಗ್ಗೆ ಮಾತಾಡಿ. ನಿತ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಾ ಹೋದರೆ ನಿಮ್ಮನ್ನು ಯಾರೂ ನಂಬವುದಿಲ್ಲ. ಆದ್ದರಿಂದ, ಸತ್ಯದ ಮೂಲ ಅರಿತು ಮಾತನಾಡಿ ಎಂದಿದ್ದಾರೆ.
ತರಳಬಾಳು ಬೃಹನ್ಮಠದ ಚಟುವಟಿಕೆಗಳ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಇಂತಹ ಪರಿಪಾಠವನ್ನು ಕೂಡಲೇ ನಿಲ್ಲಿಸಬೇಕು. ಇಂತಹ ಕೆಟ್ಟ ನಡೆಯನ್ನು ನೋಡಿಕೊಂಡು ಮೌನವಾಗಿರಲು ಸಾಧ್ಯವಿಲ್ಲ ಎಂದಿರುವ ಸ್ವಾಮೀಜಿ ಅಂತಹ ಅಭಿರುಚಿ ಇರುವ ಜನರಿಗೆ ಮಠದಲ್ಲಿ ಪ್ರವೇಶ ನೀಡುವುದಿಲ್ಲ ಎಂದರು.
ನಮ್ಮ ಪೂರ್ವಾಶ್ರಮದ ಯಾರೇ ಸಂಬಂಧಿಗಳಿಗೆ ನಾವು ಮಠದಿಂದ ಹಣಕಾಸಿನ ನೆರವು ನೀಡಿಲ್ಲ. ವೃದ್ಧಾಪ್ಯದ ಅಂಚಿನಲ್ಲಿದ್ದ ನಮ್ಮ ಪೂರ್ವಾಶ್ರಮದ ತಾಯಿ ಒಮ್ಮೆ ಭೇಟಿಯಾಗಿ ನಮಗೆ ೨೫ ಸಹಸ್ರ ರು. ನೀಡಿದರು. ಏಕೆಂದು ಕೇಳಿದಾಗ ತಾವು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಕೈಗಡ ಪಡೆಯಲಾಗಿತ್ತು ಎಂಬ ವಿಷಯ ಹೇಳಿದರು. ಸಮಾಜದ ಹಲವು ಜನರ ಕಷ್ಟದ ಸಂದರ್ಭದಲ್ಲಿ ನೆರವಾಗಿರುವ ಮಠ, ಪೂರ್ವಾಶ್ರಮದ ತಾಯಿಯವರ ಅನಾರೋಗ್ಯದ ಸಂದರ್ಭದಲ್ಲಿಯೂ ಚಿಕಿತ್ಸೆಗೂ ನೆರವು ನೀಡಿಲ್ಲ. ಇಂತಿರುವಾಗ ಕೆಲವರು ಸುಖಾಸುಮ್ಮನೆ ದೂರುತ್ತಲೇ ಬಂದಿದ್ದಾರೆ ಎಂದರು.
ಈ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಾಗ ಆಸ್ಪತ್ರೆಯ ವೆಚ್ಚ ೨೫ ಲಕ್ಷ ರು.ಗಳನ್ನು ಪಡೆಯಲು ಆಸ್ಪತ್ರೆಯ ಡಾ. ಶರಣ್ ಪಾಟೀಲ್ ನಿರಾಕರಿಸಿದ್ದರು. ಬಡ ರೋಗಿಗಳ ಚಿಕಿತ್ಸೆಗೆ ಈ ಹಣವನ್ನು ಬಳಸಿಕೊಳ್ಳುವಂತೆ ಸೂಚಿಸಿ ನಮಗೆ ಬಂದಿದ್ದ ಪಾದ ಕಾಣಿಕೆಯಲ್ಲಿ ಹಣವನ್ನು ಅವರಿಗೆ ನೀಡಿದ್ದೇವೆ. ಆ ಹಣ ಬಡವರ ಚಿಕಿತ್ಸೆಗೆ ಬಳಕೆಯಾಗುತ್ತಿದೆ ಎಂದರು.
ದೇವಸ್ಥಾನಗಳನ್ನು ಕಟ್ಟುವುದು ಮತ್ತು ದೇವರ ಪೂಜೆ ಮಾಡುವುದು ತಪ್ಪಲ್ಲ. ಈ ಕ್ರಮವನ್ನು ಬಸವಣ್ಣನವರು ಎಲ್ಲಿಯೂ ವಿರೋಧಿಸಿಲ್ಲ. ಬಸವಣ್ಣ ದೇಹವೇ ದೇವಾಲಯ ಎಂದು ಹೇಳಿದ್ದಾರೆಯೇ ವಿನಾ ದೇವಾಲಯ ನಿರ್ಮಾಣ ಮತ್ತು ಪೂಜೆಯ ಬಗ್ಗೆ ವಿರೋಧ ಮಾಡಿಲ್ಲ ಎಂದು ಸ್ವಾಮೀಜಿ ಹೇಳಿದರು.
ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ತರಳಬಾಳು ಜಗದ್ಗುರು ಮಠ ಮತ್ತು ಶಿಷ್ಯ ಸಮುದಾಯ ಜೇನುಗೂಡು ಇದ್ದಂತೆ. ಅದಕ್ಕೆ ಕಲ್ಲು ಹೊಡೆಯುವ ಪ್ರಯತ್ನವನ್ನು ಯಾರೂ ಮಾಡಬೇಡಿ. ತರಳಬಾಳು ಶ್ರೀಗಳು ನಾಡಿನ ಅಪ್ರತಿಮ ಧರ್ಮಗುರು, ಸಾಮಾಜಿಕ ಚಿಂತಕರು, ನ್ಯಾಯಪರ ಹೋರಾಟಗಾರರು, ರೈತರ ನೆರವಿಗೆ ಸದಾ ಕಾಲ ಮುಂದೆ ನಿಲ್ಲುವವರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಹಾಲುವರ್ತಿ ಸಿದ್ದಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಜಗದೀಶ್, ಗ್ರಾಪಂ ಅಧ್ಯಕ್ಷೆ ಉಚ್ಚಂಗಮ್ಮ ರಂಗಪ್ಪ, ಸಮಿತಿ ಅಧ್ಯಕ್ಷ ಕೆ.ಈ. ರಾಜಣ್ಣ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು