ದಾವಣಗೆರೆ: ಲೋಕಾಯುಕ್ತ ದಾಳಿಯಲ್ಲಿ ಪುತ್ರನ ಲಂಚ ಪ್ರಕರಣ ಮತ್ತು ಮನೆಯಲ್ಲಿ ಪತ್ತೆಯಾದ ಹಣದ ಪ್ರಕರಣದಲ್ಲಿ ಜಾಮೀನು ಸಿಕ್ಕನಂತರ ಚನ್ನಗಿರಿಗೆ ಆಗಮಿಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕೊನೆಗೂ ಚನ್ನಗಿರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡುತ್ತಿದ್ದಂತೆ ಚನ್ನಗಿರಿಗೆ ಮಾಡಾಳು ವಾಪಸ್ ಆಗಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಮಾಡಾಳ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಚನ್ನಗಿರಿಯಲ್ಲಿ ಅಭಿಮಾನಿಗಳ ಸ್ವಾಗತ ನಂತರ ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ, ಬೇರೆ ಬೇರೆ ಹಣಕಾಸಿನ ವ್ಯವಹಾರಗಳು ನಮಗೆ ಇವೆ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಾನು ದಾವಣಗೆರೆ ಬಿಟ್ಟು ಎಲ್ಲೂ ಹೋಗಿಲ್ಲ. ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜನ ಸಂಪರ್ಕದಿಂದ ದೂರ ಇದ್ದೆ. ದೋಷಮುಕ್ತನಾಗಿ ನಾನು ಹೊರಬರುತ್ತೇನೆ ಎಂದರು.
ನನ್ನದು ಅಡಿಕೆ ತೋಟ, ಅಡಿಕೆ ಮಂಡಿಯೂ ಇದೆ. ಈಗ ಸಿಕ್ಕಿರೋ ಕೋಟ್ಯಾಂತರ ರೂಪಾಯಿ ದುಡ್ಡೆಲ್ಲಾ ಅಕೌಂಟೆಟ್ ಮನಿಯಾಗಿದೆ. ಸೂಕ್ತ ದಾಖಲೆಗಳನ್ನ ಕೊಟ್ಟು ನನ್ನ ಹಣವನ್ನ ನಾವು ವಾಪಸ್ ಪಡೆಯುತ್ತೇವೆ ಎಂದಿದ್ದಾರೆ.
ಭ್ರಷ್ಟಾಚಾರದಲ್ಲಿ ಬೇಲ್ ಸಿಕ್ಕ ನಂತರ ಯುದ್ಧವೇ ಗೆದ್ದು ಬಂದಂತೆ ಮಾಡಾಳು ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ. ಕೆಎಸ್ ಡಿಎಲ್ ಟೆಂಡರ್ ಹಗರಣದಲ್ಲಿ ಲೋಕಾಯುಕ್ತ ದಾಳಿ ನಡೆದನಂತರ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಜ್ಞಾತ ಸ್ಥಳದಲ್ಲಿದ್ದರು. ಒಂದು ವಾರದಿಂದ ಮನೆಯಿಂದ ದೂರವಿದ್ದ ವಿರೂಪಾಕ್ಷಪ್ಪ ಇಂದು ಜಾಮೀನು ಸಿಗುತ್ತಿದ್ದಂತೆ ವಾಪಸ್ ಆಗಿದ್ದಾರೆ. ಚನ್ನಗಿರಿಯ ಮಾಡಾಳು ಗ್ರಾಮದ ಮನೆಗೆ ಆಗಮಿಸುತ್ತಿದ್ದಂತೆ ಶಾಸಕರನ್ನ ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.



