ದಾವಣಗೆರೆ: ದಿವ್ಯಾಂಗ ಹೊಂದಿದ ಎಲ್ಲಾ ಮಕ್ಕಳು ದೇವರ ಮಕ್ಕಳಿದ್ದ ಹಾಗೆ ಅವರನ್ನು ಪ್ರೀತಿ ವಿಶ್ವಾಸದಿಂದ ನೋಡುವ ಮೂಲಕ ಆತ್ಮಸ್ಥೈರ್ಯ ನೀಡುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದೆ ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿ ಮತ್ತು ಸಬಲೀಕರಣ ಪ್ರಾದೇಶಿಕ ಕೇಂದ್ರ ಕಟ್ಟಡ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ “ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ವಿವಿಧ ರೀತಿಯ ಸಾಧನ ಸಲಕರಣ ವಿತರಣಾ ಕಾರ್ಯಕ್ರಮವನ್ನು” ಉದ್ಘಾಟಿಸಿ ಮಾತನಾಡಿದರು.
ವಿಶೇಷ ಚೇತನರು ಆರ್ಥಿಕ, ಶೈಕ್ಷಣಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದಾರೆ ಹಾಗೂ ಇತ್ತೀಚಿಗೆ ನಡೆದ ಅಂಗವಿಕಲರ ಕ್ರೀಡೆಯಲ್ಲಿ 19 ಪದಕಗಳನ್ನು ಪಡೆದು ಅಮೋಘ ಸಾಧನೆ ಮಾಡಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿಲಾಷೆಯಂತೆ ಸಮಾಜದಲ್ಲಿನ ವಿಶೇಷ ಚೇತನರೆಲ್ಲರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮುಖ್ಯ ಉದ್ದೇಶದಿಂದ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.
ದಾವಣಗೆರೆಯಲ್ಲಿರುವ ಸಿಆರ್ಸಿ ಕೇಂದ್ರವನ್ನು ಉತ್ತಮ ಮಟ್ಟದಲ್ಲಿ ಅಭಿವೃದ್ಧಿ ಪಡೆಸಲು 53 ಕೋಟಿಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಒಡ್ಡೆನಹಳ್ಳಿ ಗ್ರಾಮದಲ್ಲಿ ಸುಮಾರು 12 ಎಕರೆ ಜಮೀನು ಮಂಜೂರಾಗಿದ್ದು, ರಾಜ್ಯ ಸಚಿವರಾದ ಎ ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಇದೀಗ 25 ಕೋಟಿ ಬಿಡುಗಡೆಯಾಗಿದ್ದು ಸಧ್ಯದಲ್ಲೆ ಕಾಮಗಾರಿ ಶುರುವಾಗಲಿದೆ. ಇದರಿಂದ ದಿವ್ಯಾಂಗ ಮಕ್ಕಳಿಗೆ ಹಾಸ್ಟೆಲ್ ಹಾಗೂ ವಿವಿಧ ಕೌಶಲ್ಯಗಳ ತರಭೇತಿಯನ್ನು ಕೊಡುವ ಮೂಲಕ ಅವರಿಗೆ ಉದ್ಯೋಗ ನೀಡುವ ಕೆಲಸವನ್ನು ಸಿ.ಆರ್.ಸಿ ಸೆಂಟರ್ ಕಾರ್ಯನಿರ್ವಹಿಸಲಿದೆ ಇದಕ್ಕೆ ಎಲ್ಲರೂ ಕೂಡ ಕೈಜೋಡಿಸಬೇಕು ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ಅಡಿಪ್ ಯೋಜನೆ ಅಡಿ ವಿವಿಧ ರೀತಿಯ ಸಾಧನ ಸಲಕರಣೆಗಳಾದ 180 ಟಿಎಲ್ಎಂ ಕಿಟ್ಗಳು, 72 ಜೋಡಿ ಶ್ರವಣ ಯಂತ್ರಗಳು, 5 ದ್ವಿಚಕ್ರ ಬೈಸಿಕಲ್ಗಳು ಒಟ್ಟು 257 ಸಹಾಯಕ ಸಾಧನಗಳನ್ನು ವಿತರಿಸಿದರು.
ವೇದಿಕೆಯಲ್ಲಿ ದೂಡಾ ಅಧ್ಯಕ್ಷ ಕೆ.ಎಂ ಸುರೇಶ್, ಮಾಜಿ ಅಧ್ಯಕ್ಷರಾದ ಯಶವಂತ್ ಜಾದವ್, ರಾಜನಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಆರೋಗ್ಯ ಇಲಾಖೆಯ ಅಧಿಕಾರಿ ನಟರಾಜನ್, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೆ.ಕೆ ಪ್ರಕಾಶ್, ಸಿ.ಆರ್.ಸಿ ನಿರ್ದೇಶಕರಾದ ಡಾ.ಉಮಾಶಂಕರ್ ಮೋಹಂತಿ, ವೀರೇಶ್ ಹನಗವಾಡಿ ಸೇರಿದಂತೆ ದಿವ್ಯಾಂಗ ಫಲಾನುಭವಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



