ದಾವಣಗೆರೆ: ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಟಿ.ವಿ. ಸ್ಟೇಷನ್ ಕೆರೆಯ ಕಾಮಗಾರಿಯನ್ನು ಸಂಸದ ಡಾ.ಜಿ.ಎಂ ಸಿದ್ದೇಶ್ವರ, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳೊಂದಿಗೆ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಈ ಕೆರೆಯನ್ನು ಬಹಳ ವರ್ಷಗಳಿಂದ ಸ್ವಚ್ಛ ಮಾಡಲಾಗಿಲ್ಲ. ಹಾಗಾಗಿ ಕೆರೆಯ ಪುನಶ್ಚೇತನ ಹಾಗೂ ಶುದ್ಧೀಕರಣಕ್ಕಾಗಿ ಸರ್ಕಾರ 2.75 ಕೋಟಿ ಹಣ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗಳು ಆರಂಭವಾಗುವುದು ಸ್ವಲ್ಪ ತಡವಾಗಿದೆ. ಕಾಮಗಾರಿಗಳು ಬೇಗನೆ ಮುಗಿದು ಈ ಕೆರೆಯು ನಗರಕ್ಕೆ ಕಳಶ ಪ್ರಾಯವಾಗಬೇಕೆಂದರು.ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಹಾಗೂ ಅಧಿಕಾರಿಗಳು ಸೆಪ್ಟಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ಸೆಪ್ಟಂಬರ್ ಒಳಗೆ ಕಾಮಗಾರಿಗಳು ಮುಗಿದರೆ ನವೆಂಬರ್ನಲ್ಲಿ ನಾಲೆಯಿಂದ ಕೆರೆಗೆ ನೀರು ತುಂಬಿಸಬಹುದು. ಆನಂತರ ಕೆರೆಯ ಉಳಿದ ಸೌಂದರೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದರು.
ಕೆರೆಯ ಹೊರಾಂಗಣವನ್ನು ಸೌಂದರೀಕರಣಗೊಳಿಸಲು ಆಕರ್ಷಕ ಹೂ ಗಿಡ ಮರಗಳನ್ನು ಬೆಳೆಸುವುದು,ಆಕರ್ಷಕ ಫುಟ್ಪಾತ್, ವಾಕಿಂಗ್ ಪಾಥ್, ಎಲೆಕ್ಟ್ರಾನಿಕ್ ಲೈಟ್ಸ್, ಬೆಂಚ್ ಕಲ್ಲು ಹಾಗೂ ವಾಯು ವಿಹಾರಕ್ಕೆ ಪೂರಕವಾಗುವಂತಹ ಇನ್ನಿತರೆ ಮೂಲಸೌಕರ್ಯ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಟಿವಿ ಸ್ಟೇಷನ್ ಕೆರೆ ಕೂಡ ಒಳ್ಳೆಯ ಪ್ರವಾಸಿ ಸ್ಥಳ ವಾಗಲಿದೆ ಇದಕ್ಕೆ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯವರು, ಧೂಡಾ ಅಧಿಕಾರಿಗಳು ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮಹಾನಗರ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ್, ದೂಡಾ ಅಧ್ಯಕ್ಷ ಕೆ.ಎಂ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ದೂಡಾ ಆಯುಕ್ತ ಕುಮಾರಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.