ದಾವಣಗೆರೆ: ಭದ್ರ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ರೈತರ ಭತ್ತ ಬೆಳೆ ಒಣಗುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿದ ಹರಿಹರ ಶಾಸಕ ರಾಮಪ್ಪ ನೀರಾವರಿ ಇಲಾಖೆ ಇಂಜಿನಿಯರ್ ನ್ನು ತರಾಟೆ ತಗೆದುಕೊಂಡರು.
ಜಿಲ್ಲೆಯ ಹರಿಹರ ತಾಲ್ಲೂಕಿನ ಮಲಾಪುರ, ಸಿರಿಗೆರೆ ಹಾಗೂ ಭಾನುವಳ್ಳಿ ಗ್ರಾಮಗಳಲ್ಲಿ ಗ್ರಾಮಗಳು ಭದ್ರ ಅಚ್ಚುಕಟ್ಟಿನ ಕೊನೆಯ ಭಾಗದ ನೀರಾವರಿ ಪ್ರದೇಶಗಳಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ಭತ್ತ ನೆಳೆ ನಾಟಿ ಮಾಡಿದ್ದಾರೆ. ನಾಟಿ ಮಾಡಿದ್ದಾಗಿನಿಂದ ಇಲ್ಲಿವರೆಗೂ ನೀರು ಸಿಗದೇ ಭತ್ತದ ಸಸಿ ಒಣಗುತ್ತಿವೆ. ಈ ಬಗ್ಗೆ ರೈತರು ಶಾಸಕರಿಗೆ ತಮ್ಮ ಅಳಲು ತೋಡಿಕೊಂಡಿದ್ದು, ಇಂದು ಸ್ಥಳಕ್ಕೆ ಆಗಮಿಸಿದ ಶಾಸಕ ರಾಮಪ್ಪ, ನೀರು ಸಮರ್ಪಕವಾಗಿ ಹರಿಸದ ನೀರಾವರಿ ಇಲಾಖೆಯ ಇಂಜಿನಿಯರ್ ನ್ನು ಕ್ಲಾಸ್ ತೆಗೆದುಕೊಂಡರು.
10 ದಿನಕ್ಕೆ ಒಮ್ಮೆಯಾದರೂ ಈ ಭಾಗಕ್ಕೆ ನೀರು ಬರಬೇಕಲ್ಲ. ನಾಟಿ ಮಾಡಿದ ಮೇಲೆ ಒಮ್ಮೆಯೂ ನೀರು ಬಂದಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ನೀವು ಏನು ಕೆಲಸ ಮಾಡುತ್ತೀರಿ..? ನನಗೆ ಕಾರಣ ಹೇಳಬೇಡಿ, ಇವತ್ತು ಎಷ್ಟೋತ್ತು ಇದ್ರೂ ಈ ಭಾಗಕ್ಕೆ ನೀರು ಕೊಟ್ಟು ಹೋಗಬೇಕು ಎಂದು ಇಂಜಿನಿಯರ್ ಗೆ ಖಡಕ್ ಎಚ್ಚರಿಕೆ ನೀಡಿದರು.



