Connect with us

Dvgsuddi Kannada | online news portal | Kannada news online

ಮಹಿಳೆಯರು ಸಾಧಿಸದೇ ಇರುವ ಕ್ಷೇತ್ರವಿಲ್ಲ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ

ಮಹಿಳೆಯರು ಸಾಧಿಸದೇ ಇರುವ ಕ್ಷೇತ್ರವಿಲ್ಲ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಪ್ರಸ್ತುತ ಯುಗದಲ್ಲಿ ಮಹಿಳೆಯರು ಸಾಧಿಸದೇ ಇರುವ ಕ್ಷೇತ್ರವಿಲ್ಲ, ಎಲ್ಲಾ ರಂಗದಲ್ಲೂ ಕೂಡ ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ. ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಮಂಗಳವಾರ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಅಭಿಯಾನ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಮಾವೇಶ-2022 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಭೂಮಿ, ನದಿಯನ್ನು ಹೆಣ್ಣು ಎಂದು ಕರೆದಿದ್ದೇವೆ ಏಕೆಂದರೆ ಸಹನೆ, ತಾಳ್ಮೆ, ಶಾಂತಿ ಎಲ್ಲಾ ಗುಣ ಹೊಂದಿದವರು ಮಹಿಳೆಯರು ಮಾತ್ರ, ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಮಹಿಳೆ ಇಲ್ಲದೆ ಜಗತ್ತಿನಲ್ಲಿ ಎಲ್ಲವೂ ಶೂನ್ಯ. ಕಾಳಜಿ, ಕಳಕಳಿ, ಮಿಡಿಯುವ ಮನಸ್ಸನ್ನು ಅಪಾರವಾಗಿ ಮಹಿಳೆಯರಿಗೆ ಇರುತ್ತದೆ ಎಂದು ಹೇಳಿದರು.

ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಒಂದು ದೇಶವನ್ನು ಬದಲಾವಣೆ ಮಾಡುವ ಶಕ್ತಿ ಅವರಿಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅನೇಕ ದೌರ್ಜನ್ಯಗಳು, ಅವಮಾನವೀಯ ಕೃತ್ಯಗಳು ನಡೆಯುತ್ತಿರುವುದನ್ನು ನಾವು ಕಾಣಬಹುದು. ಸಮಾಜದಲ್ಲಿರುವ ಸಾಮಾಜಿಕ ಪಿಡುಗುಗಳನ್ನು ತೊಲಗಿಸುವ ಕಾರ್ಯ ಮಾಡಬೇಕು. ಮಹಿಳೆಯರು ಸಾಧಿಸದೆ ಉಳಿದಿರುವ ಯಾವುದೇ ರಂಗಗಳು ಪ್ರಸ್ತುತ ದಿನಮಾನಗಳಲ್ಲಿ ಇಲ್ಲ. ಎಲ್ಲಾ ಕ್ಷೇತ್ರದಲ್ಲೂ ಕೂಡ ಮಹಿಳೆಯರು ತೊಡಗಿಸಿಕೊಂಡಿದ್ದಾರೆ ಮತ್ತು ಸಾಧನೆಯನ್ನು ಮಾಡಿದ್ದಾರೆ. ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಹೇಳುವುದು ಮಾತ್ರವಲ್ಲ ಅದನ್ನು ಗ್ರಂಥಕೋಶದಿಂದ ತೆಗೆಯುವಂತಹ ಕಾಲಮಾನ ಸೃಷ್ಟಿಯಾಗಬೇಕು. ನಮ್ಮ ವೈಯಕ್ತಿಕ ಬದುಕು ಸಂತಸದಿಂದ ಕೂಡಿದೆ ಎಂದರೆ ಆ ಎಲ್ಲಾ ಶ್ರೇಯಸ್ಸು ಕೂಡ ಮಳೆಯರಿಗೆ ಸಲ್ಲಬೇಕು ಇದರಲ್ಲಿ ಅವರ ಪಾತ್ರ ಮಹತ್ವದಾಗಿರುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗಾಗಿ ಈ ದಿನ ವಿಶೇಷವಾಗಿದೆ. ಆದರೆ ಪ್ರತಿದಿನವೂ ಕೂಡ ಮಹಿಳೆಯರನ್ನು ನೆನೆಯುವ ದಿನವಾಗಿರಬೇಕು. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಮಹಿಳೆಯೊಬ್ಬರು ಇರುತ್ತಾರೆ. ಅವರು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸಹೋದರಿಯಾಗಿ ಬಹುದೊಡ್ಡ ಪಾತ್ರ ವಹಿಸುತ್ತಾರೆ. ಒಂದು ಮಗುವಿನ ಬೆಳವಣಿಗೆ ಹಿಂದೆ ತಾಯಿಯ ಅಪಾರ ಶ್ರಮ ಇರುತ್ತದೆ. ತಾಯಿಗೆ ಮಕ್ಕಳು ತಪ್ಪು ಮಾಡಿದಾಗ ತಿದ್ದುವ ಗುಣವಿರುತ್ತದೆ. ಎಲ್ಲವನ್ನೂ ನಿಭಾಯಿಸುವವಳು ತಾಯಿಯಾಗಿದ್ದಾಳೆ. ಯಾವುದೇ ಮನೆಯಲ್ಲಿ ಹಿರಿಯರನ್ನು ನೋಡಿಕೊಳ್ಳುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಗುಣ ಮತ್ತು ಸರಳ ವ್ಯಕ್ತಿತ್ವ ಹೊಂದಿರುತ್ತಾಳೆ. ಪ್ರತಿಯೊಬ್ಬರೂ ಕೂಡ ಮಹಿಳೆಯರಿಗೆ ಗೌರವ ನೀಡಬೇಕು ಅವರ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಮೇಯರ್ ಜಯಮ್ಮ ಗೋಪಿ ನಾಯ್ಕ್, ಉಪಮೇಯರ್ ಗಾಯತ್ರಿ ಬಾಯಿ, ಭೂದಾಖಲೆಗಳ ಇಲಾಖೆಯ ನಿರ್ದೇಶಕರಾದ ಭಾವನ ಬಸವರಾಜ್, ಡಿಯುಡಿಸಿ ಸಂಯೋಜನಾಧಿಕಾರಿ ನಜ್ಮಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿಜಯ್ ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ನಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ದಾವಣಗೆರೆ ನೂತನ ತಹಶೀಲ್ದಾರ್ ಬಸವನಗೌಡ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಸಖಿ ಒನ್ ಸ್ಟಾಪ್ ಸೆಂಟರ್ ನ ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.

ಇದೇ ವೇಳೆ ಘನತೆಯ ಬದುಕು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸನ್ಮಾನಿಸಲಾಯಿತು. ಜಿಲ್ಲೆಯ ವಸತಿ ನಿಲಯದ ಮಹಿಳೆಗೆ ಪ್ರಪ್ರಥಮವಾಗಿ ಅಂಗನವಾಡಿ ಸಹಾಯಕಿ ಹುದ್ದೆಯ ಆದೇಶದ ಪ್ರತಿಯನ್ನು ನೀಡಲಾಯಿತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top