ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿ ರಂಗಾಯಣಕ್ಕೆ 10 ಎಕರೆ ಭೂಮಿ ಮೀಸಲಿದ್ದು, ರಂಗಾಯಣ ಜೊತೆ ವೃತ್ತಿ ರಂಗಭೂಮಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ ಸಹ ನಿರ್ಮಿಸಲಾಗುವುದು ಎಂದು ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ನಾಟಕ ಕಂಪನಿಗಳ ಮಾಲೀಕರ ಸಭೆಯಲ್ಲಿ ಮಾಹಿತಿ ನೀಡಿದರು. ಸಕ್ಕರಿ ಬಾಳಾಚಾರ್ಯ ಅವರ ಶ್ರೀ ವೀರ ನಾರಾಯಣ ಪ್ರಸಾತ ಕೃತಪುರ ಕರ್ನಾಟಕ ನಾಟಕ ಮಂಡಳಿ ಆರಂಭವಾದ ದಿನವಾದ ನ.14ನ್ನು ವೃತ್ತಿ ರಂಗಭೂಮಿ ದಿನವನ್ನಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಸಹ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿದರು. ವೃತ್ತಿ ರಂಗಭೂಮಿ ರಂಗಾಯಣವನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ವಿವರವಾದ ಚರ್ಚೆ ನಡೆಯುತ್ತಿದೆ. ರಂಗಮಂದಿರ ನಿರ್ಮಾಣದ ಬಳಿಕ ಕಲಾವಿದರಿಗೆ ತರಬೇತಿ ನೀಡಿ ನಾಟಕ ಕಂಪನಿಗಳಿಗೆ ಕಳುಹಿಸಿಕೊಡಲಾಗುವುದು
ಎಂದು ತಿಳಿಸಿದರು.
ಅಳಿವಿನ ಅಂಚಿಗೆ ಸಾಗಿರುವ ವೃತ್ತಿ ರಂಗಭೂಮಿಯನ್ನು ಉಳಿಸಲು ರಂಗಾಯಣದ ವತಿಯಿಂದ ಕಲಾವಿದರಿಗೆ ತರಬೇತಿ ನೀಡಿನಾಟಕ ಕಂಪನಿಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ನಾಟಕ ಕಂಪನಿಗಳ ಮಾಲೀಕರು ಕೋರಿಕೊಂಡರು.
ವೃತ್ತಿ ರಂಗಭೂಮಿ ಕಲಾವಿದರ ಕೊರತೆ ಎದುರಿಸುತ್ತಿದೆ. ವೃತ್ತಿ ರಂಗಭೂಮಿಗೆ ಪ್ರತ್ಯೇಕವಾಗಿ ಆರಂಭವಾಗಿರುವ ರಂಗಾಯಣ ನೆರವಿಗೆ ಧಾವಿಸುವ ನಿರೀಕ್ಷೆಯಲ್ಲಿದ್ದೇವೆ. ಯುವ ಸಮೂಹಕ್ಕೆ ನಾಟಕ ತರಬೇತಿ ನೀಡಿ ಸಜ್ಜುಗೊಳಿಸಬೇಕಿದೆ. ನಾಟಕ ಕಂಪನಿಗಳ ಪೋಷಣೆಯ ಜವಾಬ್ದಾರಿಯನ್ನು ರಂಗಾಯಣ ಹೊರಬೇಕಿದೆ ಎಂದು ಮನವಿ ಮಾಡುದರು.
ವೃತ್ತಿ ರಂಗಭೂಮಿ ರಂಗಾಯಣ ಕಲಾವಿದರಿಗೆ ಕನಿಷ್ಠ ಮೂರು ವರ್ಷ ತರಬೇತಿ ನೀಡಬೇಕು. ಮೊದಲ ವರ್ಷದ ತರಬೇತಿ ಮುಗಿದ ಬಳಿಕ ನಾಟಕ ಕಂಪನಿಗಳಿಗೆ ಕಳುಹಿಸಬೇಕು. ರಂಗ ಪ್ರಯೋಗಗಳ ಮೂಲಕ ಅವರು ಇನ್ನಷ್ಟು ಪರಿಪಕ್ವತೆ ಸಾಧಿಸುವ ಅವಕಾಶ ಕಲ್ಪಿಸಬೇಕು ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ ಸೂಚನೆ ನೀಡಿದರು.
ಕೊಂಡಜ್ಜಿಯಲ್ಲಿ ಲಭ್ಯವಾಗಿರುವ ಭೂಮಿಯಲ್ಲಿ ರೆಪರ್ಟರಿ ಪ್ರಾರಂಭಿಸ ಬೇಕು. ಕಂಪನಿ ನಾಟಕಗಳ ಪರಂಪರೆ ಬಿಂಬಿಸುವ ವಸ್ತುಸಂಗ್ರಹಾಲಯನಿರ್ಮಿಸಬೇಕು ಎಂದು ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್ ಮಾಸ್ತರ್ ಮನವಿ ಮಾಡುದರು. ನಾಟಕ ಕಂಪನಿಗಳ ಮಾಲೀಕರಾದ ಭಾಗವಹಿಸಿದ್ದರು.



