Connect with us

Dvgsuddi Kannada | online news portal | Kannada news online

ದಾವಣಗೆರೆ: ಬಿದರಕೆರೆಯಲ್ಲಿ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ನೂತನ ಗೋದಾಮು ಉದ್ಘಾಟನೆ

ದಾವಣಗೆರೆ

ದಾವಣಗೆರೆ: ಬಿದರಕೆರೆಯಲ್ಲಿ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ನೂತನ ಗೋದಾಮು ಉದ್ಘಾಟನೆ

ಜಗಳೂರು: ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ (ಎಫ್‍ಪಿಒ)ಗೆ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ, ಜಲಾನಯನ ಅಭಿವೃದ್ಧಿ ಯೋಜನೆ (ಡಬ್ಯೂಡಿಸಿ-2.0) ಅಡಿಯಲ್ಲಿ 10.30 ಲಕ್ಷ ರೂ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಗೋದಾಮು ಗುರುವಾರ ಉದ್ಘಾಟನೆಯಾಗಲಿದೆ.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಕೃಷಿ ವಲಯದಲ್ಲಿ ಹಗಲಿರುಳೂ ನಿರತವಾಗಿರುವ ಉಳುವ ಯೋಗಿಯ ಯೋಗಕ್ಷೇಮಕ್ಕಾಗಿ ಅವರ ಕೆಲಸಕ್ಕೆ ತಕ್ಕ ದುಡಿಮೆಯನ್ನು ತಂದುಕೊಡಲಿಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಉನ್ನತ ವಿಷಯಪೂರ್ಣ ಸಂಪನ್ಮೂಲ ತಂಡದ ನೇತೃತ್ವದಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ 18 ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಸಂಕಲ್ಪಿಸಿ ಕಾರ್ಯ ಪರ್ವೃತ್ತರಾಗಿದ್ದಾರೆ.

ನೂತನ ಶಾಸಕ ಬಿ.ದೇವೇಂದ್ರಪ್ಪ ಅವರು ಗೋದಾಮು ಮತ್ತು ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಚ್.ಪಿ.ರಾಜೇಶ್ ಮತ್ತು ಎಸ್.ವಿ.ರಾಮಚಂದ್ರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಉಪಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಎಡಿಎ ಸಿ.ಮಿಥುನ್ ಕಿಮಾವತ್, ಯೋಜನಾ ಆಯೋಗದ ಮಾಜಿ ಸದಸ್ಯ ಡಾ.ಕೆ.ಪಿ.ಬಸವರಾಜಪ್ಪ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ, ಕೃಷಿ ವಿಜ್ಞಾನಿಗಳಾದ ಬಿ.ಓ. ಮಲ್ಲಿಕಾರ್ಜುನ, ತಾಪಂ ಇಓ ವೈ.ಎಚ್.ಚಂದ್ರಶೇಖರ್, ಎಫ್‍ಪಿಒ ಅಧ್ಯಕ್ಷ ಎಂ.ಎಚ್.ಮಂಜುನಾಥ್ ಕಂಪನಿಯ ನಿರ್ದೇಶಕರು ಸೇರಿದಂತೆ ಸಾವಿರ ರೈತ ಷೇರುದಾರರು ಭಾಗವಹಿಸಲಿದ್ದಾರೆ.

ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗಳು ಹೆಸರಿನೊಂದಿಗೆ ಆರಂಭವಾಗಲಿರುವ ಎಫ್‌.ಪಿ.ಒಗಳು ಸಣ್ಣ, ಅತಿಸಣ್ಣ ಮತ್ತು ಭೂಹೀನ ರೈತರನ್ನು ಒಟ್ಟುಗೂಡಿಸಿ,ರೈತರಿಗೆ ಸುಧಾರಿತ ತಂತ್ರಜ್ಞಾನ ಲಭ್ಯತೆ,ಸಾಲ, ಹೆಚ್ಚಿನ ಮಾರುಕಟ್ಟೆಯ ಸಂಪರ್ಕವನ್ನು ಕಲ್ಪಿಸಿ, ಉತ್ಪಾದಕತೆಯನ್ನು ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿವೆ. ಈ ಉತ್ಪಾದಕ ಕಂಪನಿಗೆ ಹಲವಾರು ಮಾನದಂಡಗೊಳೊಂದಿಗೆ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಗಿದೆ. ಸ್ಥಳೀಯರಾಗಿದ್ದು , ಪದವಿ ವಿದ್ಯಾಭ್ಯಾಸ ಹೊಂದಿದ ಪ್ರಗತಿಪರ ಕೃಷಿಕರನ್ನು, ಪ್ರಾಮಾಣಿಕರಾಗಿ ಆಸಕ್ತಿಯಿಂದ ಕಾರ್ಯನಿರ್ವಹಿಸುವವರನ್ನು ಪರಿಶೀಲಿಸಿ ಕಂಪನಿಯ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯು ನಡೆದಿದೆ. ಈ ನಿರ್ದೇಶಕರುಗಳು ಉತ್ಪಾದಕ ಕಂಪನಿಯ ಸದಸ್ಯರುಗಳಾದ ರೈತರಿಗೆ ಮತ್ತು ಕಂಪನಿಗೆ ಕೊಂಡಿಯಾಗಿ ಕೆಲಸ ನಿರ್ವಹಿಸುವರು. ಈಗಾಗಲೇ ಉತ್ಪಾದಕ ಕಂಪನಿಯ ನಿರ್ದೇಶಕರುಗಳಿಗೆ ಎಫ್‌ಪಿಒ ಗುರಿ ಮತ್ತು ಉದ್ದೇಶಗಳ ಕುರಿತು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಮತ್ತು ಮಾಹಿತಿಯನ್ನು ಪ್ರಾತ್ಯಕ್ಷತೆಯ ಮುಖೇನಾ ಪಡೆಯುತ್ತಿದ್ದಾರೆ. ಉತ್ಪಾದಕ ಕಂಪನಿಯ ನೊಂದಾಣಿ ಸೇರಿದಂತೆ ಇನ್ನಿತರ ಸರ್ಕಾರಿ ಒಡಂಬಡಿಕೆಗಳು ಪೂರ್ಣಗೊಳ್ಳುತ್ತಿವೆ. ರೈತರ ಮನೆಗಳಿಗೆ ನಿರ್ದೇಶಕರುಗಳು,ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ನೀಡುವುದರ ಜೊತೆಗೆ ಆನ್‌ಲೈನ್ ಮೂಲಕ ಸದಸ್ಯರುಗಳನ್ನು ಸ್ಥಳದಲ್ಲಿಯೇ ನೊಂದಾಯಿಸುತ್ತಿದ್ದಾರೆ.

ಈ ಮೂಲಕ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿಸಿ, ಯುವ ಪೀಳಿಗೆಯನ್ನು ಕೃಷಿ, ಕೃಷಿ ಸಂಬಂಧಿ ಉದ್ಯಮಗಳತ್ತ ಸೆಳೆಯಲೂ ಕ್ರಮ ಕೈಗೊಂಡಿವೆ. ಇದರ ಜೊತೆಗೆ, ರೈತರು ಯಾವ ಹವಾಮಾನದಲ್ಲಿ ಯಾವ ಬೆಳೆ ಬೆಳೆದರೆ ಅನುಕೂಲ, ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಉತ್ತಮ ಬೆಲೆ ಬರುತ್ತದೆ, ಯಾವ ರೀತಿಯ ಬೆಳೆ ಬೆಳೆದರೆ ಉತ್ತಮ ಲಾಭ ಗಳಿಸಬಹುದು ಅಥವಾ ಈಗ ಬೆಳೆದಿರುವ ಬೆಳೆಯ ಗುಣಮಟ್ಟವನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಂಡರೆ ಅವು ಉತ್ತಮ ಬೆಲೆಗೆ ಮಾರಾಟವಾಗುತ್ತವೆ ಎಂಬಿತ್ಯಾದಿ ಮಾಹಿತಿಗಳು ರೈತನಿಗೆ ಮೊದಲೇ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿವೆ. ಕೃಷಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾದ ಸಂಸ್ಕರಣಾ ಕೇಂದ್ರಗಳು, ಕೊಯ್ಲಿನ ನಂತರ ಬೆಳೆಗಳನ್ನು ಸರಿಯಾಗಿ ಸಂಗ್ರಹಿಸುವ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸುವಲ್ಲಿ ಶ್ರಮಿಸಲಿವೆ.

ಎಫ್‌ಪಿಒ ಮೂಲಕ ಕೃಷಿಯನ್ನು ಸುಸ್ಥಿರ ಉದ್ಯಮವನ್ನಾಗಿ ಪರಿವರ್ತಿಸುವುದು ಶ್ರೀ ಜಗದ್ಗುರುಗಳವರ ಕೃಷಿ ಝೇಂಕಾರವಾಗಿದೆ. ವಿಶೇಷವಾಗಿ ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲಿದೆ ಮತ್ತು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಲು ಶ್ರೀಗಳ ಮಹತ್ವದ ಹೆಜ್ಜೆಯು ಅನ್ನದಾತರ ಬಾಳು ಬೆಳಗಲಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top