ಶಿವಮೊಗ್ಗ: ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ದಿನಾಂಕವನ್ನು ಪ್ರಕಟಿಸಲಾಗಿದೆ. ಎಡದಂಡೆ ನಾಲೆಗೆ ಜ.3ರಿಂದ ಹಾಗೂ ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿಸಲು ಇಂದು (ಜ.2) ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ತೀರ್ಮಾನಿಸಲಾಯಿತು.
ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ದಿನಾಂಕ ಘೋಷಣೆ ಮಾಡಿದರು.
ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ರವಿಕುಮಾರ್ ಮಾತನಾಡಿ,ದಾವಣಗೆರೆ ವಿಭಾಗ ಹಾಗೂ ಮಲೆಬೆನ್ನೂರು ಶಾಖಾ ಕಾಲುವೆಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 15 ದಿನಗಳ ಕಾಲಾವಕಾಶ ಬೇಕಿದೆ. ಹೀಗಾಗಿ ಬಲದಂಡೆ ಕಾಲುವೆಗೆ ತುರ್ತಾಗಿ ನೀರು ಹರಿಸಲು ಸಾಧ್ಯವಿಲ್ಲ ಎಂದರು.
ಕೊನೆಯ ಭಾಗದ ರೈತರಿಗೆ ನೀರು ಹರಿಸಲು ನೀರಿನ ನಿರ್ವಹಣೆ ಸರಿಯಾಗಿ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು.
ಅಕ್ರಮ ಪಂಪ್ ಸೆಟ್ ತೆಗೆಸಿ
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಬಲದಂಡೆ ನಾಲೆಯ ವ್ಯಾಪ್ತಿಯಲ್ಲಿ ನೀರು ಹರಿಸುವ ಅಚ್ಚುಕಟ್ಟು ವ್ಯಾಪ್ತಿಗಿಂತ ಹೆಚ್ಚು ಅಕ್ರಮ ಪಂಪ್ ಸೆಟ್ ಗಳಿಗೆ ನೀರು ಬಳಕೆಯಾಗುತ್ತಿದೆ. ಈ ಪರಿಸ್ಥಿತಿ ನಿಭಾಯಿಸುವುದು ಕಷ್ಟವಿದೆ ಎಂದು.
ನಾಲೆಗಳಿಗೆ ನೀರು ಹರಿವು ನಿಲ್ಲಿಸಿ 42 ದಿನಗಳಾಗಿವೆ. ಇದರಿಂದ ತೋಟದ ಬೆಳೆಗಳಿಗೆ ತೊಂದರೆಯಾಗಿದೆ. ತಕ್ಷಣ ನಾಲೆಗಳಿಗೆ ನೀರು ಹರಿಸಿ
-ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ
ಬಲದಂಡೆ ಕಾಲುವೆಗೆ ನೀರು ಹರಿಸಿ ದಾವಣಗೆರೆ ಭಾಗದ ರೈತರ ಹಿತ ಕಾಯುವಂತೆ ಮನವಿ ಮಾಡಿದರು
-ರೈತ ಮುಖಂಡ ತೇಜಸ್ವಿ ಪಟೇಲ್
ಎಡದಂಡೆ ನಾಲೆ ಭಾಗದಲ್ಲಿ ಭತ್ತದ ಬದಲಿಗೆ ಅಡಿಕೆ ಬೆಳೆ ಪ್ರಾಧಾನ್ಯತೆ ಪಡೆದಿದೆ. 120 ದಿನಗಳ ಕಾಲಮಿತಿ ತೆಗೆದುಹಾಕಿ ಮೇ 30ರವರೆಗೂ ನೀರು ಹರಿಸುವಂತೆ ಹಾಗೂ ತಕ್ಷಣ ನೀರು ಬಿಡುವಂತೆ ಕೋರಿದರು.
-ರೈತ ಮುಖಂಡ ರಘುನಾಥ್
ನಾಲೆ ಆಧುನೀಕರಣಗೊಳಿಸಿ ಕೊನೆಯ ಭಾಗದವರೆಗೂ ನೀರು ಹರಿಯುವಂತೆ ನೋಡಿಕೊಳ್ಳಿ
-ಮುಖಂಡ ಲಿಂಗರಾಜ್
ಸಭೆಯಲ್ಲಿ ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಎಸ್ಪಿ ಬಿ.ನಿಖಿಲ್ ಉಪಸ್ಥಿತರಿದ್ದರು.



