ಡಿವಿಜಿ ಸುದ್ದಿ, ಹೊನ್ನಾಳಿ : ಪ್ರತಿಯೊಬ್ಬ ಶಾಸಕನಿಗೂ ಸಚಿವನಾಗಬೇಕು ಅನ್ನೋ ಆಸೆ ಇರುತ್ತೆ.. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೊಂಡು ಗೊಂದಲವುಂಟು ಮಾಡಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ತಾಲ್ಲೂಕಿನ ಸೂರಕೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಶಾಸಕರಾದ ನಾವೆಲ್ಲಾ ಯಡಿಯೂರಪ್ಪನವರ ಮಕ್ಕಳಿದ್ದಂತೆ. ಯಡಿಯೂರಪ್ಪ ನಮಗೆ ತಂದೆಗೆ ಸಮಾನ. ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ಕೇಳಿ ಗೊಂದಲವುಂಟು ಮಾಡಲ್ಲ. ಸಚಿವರಾಗಬೇಕು ಎಂಬ ಮಹತ್ವಾಕಾಂಕ್ಷಿ ಇದೆ. ಅದನ್ನು ಮಾಧ್ಯಮ ಗಳ ಮುಂದೆ ಹೇಳಿಕೊಂಡರೆ ಈಡೇರಲ್ಲ.
ದಾವಣಗೆರೆ ಮಧ್ಯಕರ್ನಾಟಕದ ಜಿಲ್ಲೆ. ಒಂದು ರೀತಿಯ ಸಂಪರ್ಕ ಸೇತುವೆ. ಸಚಿವ ಸ್ಥಾನ ಬೇಕಿತ್ತು. ಆದರೆ ಸಿಕ್ಕಿಲ್ಲ. ನಾನು ರಾಜಕೀಯ ವಾಗಿ ಇನ್ನು ಸಣ್ಣವನು. ಸಾಧಿಸುವುದು ಇನ್ನು ತುಂಬಾ ಇದೆ. ಮಾತನಾಡುವುದೇ ಸಾಧನೆ ಯಾಗಬಾರದು. ನಾನು ಮಾಧ್ಯಮಗಳ ಮುಂದೆ ಮುಖ್ಯಮಂತ್ರಿ ಆಗಬೇಕು ಅಂತಾ ಹೇಳಿದ್ರೆ ಆಗುತ್ತಾ..? ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಿದರೆ, ನಮ್ಮ ಘನತೆ ಕಡಿಮೆಯಾಗುತ್ತದೆ ಎಂದರು.



