ದಾವಣಗೆರೆ: ಮಸೀದಿಯಲ್ಲಿನ ಆಜಾನ್ಗೆ ಪ್ರತಿಯಾಗಿ ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ದೇವಸ್ಥಾನಗಳಲ್ಲಿ ಸುಪ್ರಭಾತ, ಶಿವಸ್ತುತಿ, ಹನುಮಾನ್ ಚಾಲೀಸ್ ಪಠಣೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ವಿನೋಬನಗರದ ಎರಡನೇ ಮುಖ್ಯ ರಸ್ತೆಯ ಶ್ರೀ ವಿನಾಯಕ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಸುಪ್ರಭಾತ, ಹನುಮಾನ್ ಚಾಲೀಸ್ ಪಠಣೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಅನ್ಯ ಧರ್ಮಿಯರೊಬ್ಬರು ಹನುಮಾನ್ ಚಾಲೀಸ್ ವಿರೋಧಿಸಿ ಘೋಷಣೆ ಕೂಗಿದರು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರ್ ಮಾತನಾಡಿ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅಜಾನ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸತತವಾಗಿ ಮೂರು ತಿಂಗಳಿನಿಂದ ಹೋರಾಟ ಹಮ್ಮಿಕೊಂಡಿದ್ದೇವೆ. ಸಾಕಷ್ಟು ಸಲ ಮುಖ್ಯಮಂತ್ರಿಗಳು, ಗೃಹ ಸಚಿವರು, ಜಿಲ್ಲಾಧಿಕಾರಿ, ಎಸ್ ಪಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ ಎಂದರು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನೋಟಿಸ್ ನೀಡಿ ಅನಧಿಕೃತವಾದ ಮೈಕ್ಗಳನ್ನು ಕೆಳಗೆ ಇಳಿಸಬೇಕೆಂದು ಮನವಿ ಕೊಟ್ಟರೂ ಸಹಾ ಯಾವುದೇ ರೀತಿಯಾಗಿ ಸ್ಪಂದಿಸಿಲ್ಲ. ಪ್ರತಿಭಟನೆ ಸಹ ನಡೆಸಲಾಗಿದೆ. ಪ್ರಮೋದ್ ಮುತಾಲಿಕ್ ಅವರು ರಾಜ್ಯ ಸರ್ಕಾರಕ್ಕೆ ಮೇ. 9ರ ವರೆಗೆ ಗಡುವು ನೀಡಿದ್ದರೂ ತೆಗೆದಿಲ್ಲ. ಹೀಗಾಗಿ ಇಂದು ಬೆಳಗ್ಗೆಯಿಂದ ರಾತ್ರಿವರೆಗೆ ಎಲ್ಲ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ್, ಸುಪ್ರಭಾತ, ಶಿವಸ್ತುತಿ ಪಠಣ ಹಮ್ಮಿಕೊಳ್ಳಲಾಗಿದೆ. 10 ದಿನ ಗಡುವು ಕೊಡುತ್ತೇವೆ. ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.



