ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಭಗತ್ ಸಿಂಗ್ ನಗರ (ವಾರ್ಡ್ 28) ಮತ್ತು ಕೆಇಬಿ ಕಾಲೋನಿ (ವಾರ್ಡ್ 37) ವಾರ್ಡಿನಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ಆಯೋಗ ನಾಳೆ(ಮೇ 2) ಚುನಾವಣೆ ಅಧಿಸೂಚನೆ ಹೊರಡಿಸಲಿದೆ. ಇವತ್ತು ಈ ಎರಡು ವಾರ್ಡ್ ಗಳಿಗೆ 11.40 ಕೋಟಿ ರೂ ಮೊತ್ತದ ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಶಂಕುಸ್ಥಾಪನೆ ನೆರವೇರಿಸಿದರು.
ಇತ್ತೀಚೆಗೆ ಭಗತ್ ಸಿಂಗ್ ನಗರದ ಜೆ.ಎನ್ ಶ್ರೀನಿವಾಸ್ ಮತ್ತು ಕೆಇಬಿ ಕಾಲೋನಿಯ ಶ್ವೇತಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಚುನಾವಣೆ ಅಧಿಸೂಚನೆಗೆ ಒಂದು ದಿನ ಬಾಕಿ ಇರುವಾಗಲೇ ಎರಡು ವಾರ್ಡ್ ಗಳಿಗೆ ಭರ್ಜರಿ ಅನುದಾನ ನೀಡಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಮೇಯರ್ ಜಯಮ್ಮ ಗೋಪಿನಾಯ್ಕ್, ಧೂಡಾ ಅಧ್ಯಕ್ಷ ಕೆ.ಎಂ.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಉಪ ಮೇಯರ್ ಶ ಗಾಯತ್ರಿ ಖಂಡೋಜಿರಾವ್, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಸ್ಥಾಯಿ ಸಮಿತಿಯ ಅಧ್ಯಕ್ಷರು, ಸ್ಥಳೀಯ ಪಾಲಿಕೆ ಮಾಜಿ ಸದಸ್ಯೆ ಶ್ವೇತಾ ಶ್ರೀನಿವಾಸ್, ಜೆ.ಎನ್.ಶ್ರೀನಿವಾಸ್ ಉಪಸ್ಥಿತರಿದ್ದರು.
ಚುನಾವಣಾ ವೇಳಾಪಟ್ಟಿ :ರಾಜ್ಯ ಚುನಾವಣಾ ಆಯೋಗದ ಏಪ್ರಿಲ್ 28ರ ಆದೇಶದಂತೆ ಮೇ.02 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವುದು. ಮೇ.09 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಮೇ.10 ರಂದು ನಾಮಪತ್ರಗಳನ್ನು ಪರಿಶೀಲಿಸಲು ಕೊನೆಯ ದಿನ. ಮೇ.12 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯದಿನ. ಮೇ.20 ರಂದು ಮತದಾನ ಅಗತ್ಯವಿದ್ದರೆ, ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಮೇ.21 ರಂದು ಮರು ಮತದಾನ ಇದ್ದಲ್ಲಿ ಮತದಾನ ನಡೆಸಲಾಗುವುದು. ಮೇ.22 ರಂದು ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಮಾಡಲಾಗುವುದು.ವಾರ್ಡ್ ಸಂಖ್ಯೆ-28 ಭಗತ್ ಸಿಂಗ್ ನಗರ -ಸಾಮಾನ್ಯ, ವಾರ್ಡ್ ಸಂಖ್ಯೆ-37 ಕೆ.ಇ.ಬಿ ಕಾಲೋನಿ-ಸಾಮಾನ್ಯ ಮಹಿಳೆ ಮೀಸಲಾತಿ ನಿಗಧಿಯಾಗಿದೆ.



