ಬೆಂಗಳೂರು: ಶಾಸಕ ರೇಣುಕಾಚಾರ್ಯ ಅವರ ಮಗಳ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರ ನಡುವೆ ವಾಕ್ಸಮರ ನಡೆಯಿತು. ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿದರು.
ಆಗ ವಿವರಣೆ ನೀಡಿದ ಶಾಸಕ ರೇಣುಕಾಚಾರ್ಯ, ಸಂವಿಧಾನದ ವಿರುದ್ದವಾಗಿ ಜಾತಿ ಪ್ರಮಾಣ ಪತ್ರ ಪಡೆದಿಲ್ಲ.ನನ್ನ ಸಹೋದರ ನನ್ನ ಪುತ್ರಿಗೆ ಪ್ರಮಾಣ ಪತ್ರ ಕೊಡಿಸಿದ್ದರು. ಅದನ್ನು ವಾಪಸ್ ಮಾಡಲಾಗಿದೆ. ನಾನು ಜಾತ್ಯತೀತ ವ್ಯಕ್ತಿ. ಯಾವುದೇ ಸೌಲಭ್ಯ ಪಡೆದಿಲ್ಲ. ನಕಲಿ ಪ್ರಮಾಣಪತ್ರವಿದ್ದರೆ ದಾಖಲೆ ನೀಡಲಿ, ಸರ್ಕಾರಿ ಸೌಲಭ್ಯ ಪಡೆದಿದ್ದರೆ ಗಲ್ಲಿಗೇರಲು ಸಿದ್ದ ಎಂದು ಹೇಳಿದರು.
ಕಾಂಗ್ರೆಸ್ನ ಶಾಸಕ ಪ್ರಿಯಾಂಕ ಖರ್ಗೆ, ಭೀಮಾನಾಯಕ್, ಪರಮೇಶ್ವರ್ ನಾಯಕ್ ಮತ್ತಿತರರು ಮಾತನಾಡಲು ಮುಂದಾದರು. ಸಭಾಧ್ಯಕ್ಷರು ಅದಕ್ಕೆ ಅವಕಾಶ ನೀಡದಿದ್ದಾಗ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮಾಡಿದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ,ಧರಣಿ ನಿರತ ತಮ್ಮ ಶಾಸಕರನ್ನು ಸಮಾಧಾನಪಡಿಸಿ ಸ್ವಸ್ಥಾನಗಳಿಗೆ ಮರಳುವಂತೆ ಮಾಡಿದರು. ಸಿದ್ದರಾಮಯ್ಯ ಮಾತನಾಡಿ, ರೇಣುಕಾಚಾರ್ಯ ಅವರ ಮಗಳಿಗೆ ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಹೋದರರು ಕೊಡಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರಮಾಣ ಪತ್ರ ಪಡೆದಿರುವುದು ತಪ್ಪೇ. ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಬೇರೆ ರೂಪದಲ್ಲಿ ಶಾಸಕರು ಈ ಬಗ್ಗೆ ಚರ್ಚಿಸಲು ಅವಕಾಶವಿದೆ ಎಂದರು.
ಕಕಾನೂನು ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ನಕಲಿ ಜಾತಿಪ್ರಮಾಣ ಪತ್ರದ ಬಗ್ಗೆ ಚರ್ಚೆಯಾಗಿದೆ. ಖಾದರ್ ಅವರು ಬಳಸಿದ ಶಬ್ದ ಕಡತಕ್ಕೆ ಹೋಗುವುದು ಬೇಡ ಎಂದಷ್ಟೇ ಹೇಳಲಾಗಿತ್ತು. ಸರ್ಕಾರ ಯಾರನ್ನೂ ವಹಿಸಿಕೊಂಡಿಲ್ಲ. ತಹಸೀಲ್ದಾರ್, ಉಪವಿಭಾಗಾಕಾರಿ ಸೇರಿದಂತೆ ಸಂಬಂಧಪಟ್ಟ ಪ್ರಾಕಾರದ ಮುಂದೆ ಅವರು ಹೋಗಬಹುದು. ಇಲ್ಲಿ ಮತ್ತೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಸದಸ್ಯರು ಸುಮ್ಮನಾಗದಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಯಾರಿಗೆ ಅನ್ಯಾಯವಾಗಿದೆ ಅವರು ದೂರು ಕೊಡಲಿ. ಸತ್ಯಾಸತ್ಯತೆ ಹೊರಬರಲಿ. ದಾಖಲೆ ಪ್ರಕಾರ ಕಾನೂನು ವಿಚಾರಣೆಯಾಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಹೆಚ್ಚಿನ ವಿಚಾರಣೆ ಬೇಡ ಎಂದಾಗ ಕಾಂಗ್ರೆಸ್ ಸದಸ್ಯರು ಸುಮ್ಮನಾದರು.



