ಬೆಂಗಳೂರು: ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಮರಾಠ ಅಭಿವೃದ್ಧಿ ನಿಗಮ ರಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದಲ್ಲದೆ ನಿಗಮಕ್ಕೆ 50 ಕೋಟಿ ಅನುದಾನ ನೀಡಿದೆ.
ವಿರೋಧನ ನಡುವೆಯೂ ತನ್ನ ತೀರ್ಮಾನದಿಂದ ಹಿಂದೆ ಸರಿಯದ ಸರ್ಕಾರ, ಇದೀಗ ಅಧಿಕೃತ ಆದೇಶವನ್ನೂ ಹೊರಡಿಸಿದೆ. ಮರಾಠ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲು ಹೊರಟಿದ್ದ ಸರ್ಕಾರ ಆರಂಭದಲ್ಲಿ ತೀವ್ರ ಆಕ್ರೋಶ ಎದುರಿಸಿತ್ತು. ಬಳಿಕ ಜನರ ಗೊಂದಲ ನಿವಾರಿಸಲು ಮರಾಠ ಸಮುದಾಯ ನಿಗಮದ ರಚಿಸುವುದಾಗಿ ಹೇಳಿತ್ತಲ್ಲದೇ ಸಂಪುಟದಲ್ಲೂ ನಿರ್ಧಾರ ಕೈಗೊಂಡಿತ್ತು.
ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ನಿಗಮ ಎಂದು ಹೆಸರು ಬದಲಿಸಿ, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ರಾಜ್ಯದಲ್ಲಿ ಮರಾಠ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದದ್ಧಿಗಾಗಿ ಈ ನಿಗಮ ಸ್ಥಾಪಿಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ.



