ಡಿವಿಜಿ ಸುದ್ದಿ,ಹರಪನಹಳ್ಳಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಧಾರ್ಮಿಕ ಮತ್ತು ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಉಚ್ಚಂಗಿದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ108 ಅಂಬುಲೆನ್ಸ್ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಒಂದು ತಿಂಗಳಿಂದ ಕೆಟ್ಟು ನಿಂತರೂ ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತಕಡೆ ಗಮನಹರಿಸಿಲ್ಲ .
108 ಅಂಬುಲೆನ್ಸ್ ಟೈರು ಸಮಸ್ಯೆಯಿಂದ ಒಂದು ತಿಂಗಳಿನಿಂದ ದುರಸ್ತಿ ಕಾಣದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಂತಿದೆ. ಇಡೀ ರಾಜ್ಯದಾದ್ಯಂತ ಅಂಬ್ಯುಲೆನ್ಸ್ ಉಸ್ತುವಾರಿ ನೋಡಿಕೊಳ್ಳುವ ಜಿವಿಕೆ ಕಂಪನಿ ಕೂಡ ಇತ್ತಕಡೆ ಗಮನಹರಿಸುತ್ತಿಲ್ಲ. ಇನ್ನು ಜಿಲ್ಲಾವೈದ್ಯಾಧಿಕಾರಿಗಳಿಗೆ ಅಂಬುಲೆನ್ಸ್ ಸರಿಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ವಾಹನವನ್ನು ಸರಿಪಡಿಸಿಲ್ಲ. ಬಳ್ಳಾರಿಯ ಜಿವಿಕೆ ಕಂಪನಿ ಮ್ಯಾನೇಜರ್ ವಿನಯ್ ಕುಮಾರ್ ಸಂಪರ್ಕಿಸಿದರೆ, ಪ್ರತಿ ದಿನ ಸುಳ್ಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಚ್ಚoಗಿದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತ ಮುತ್ತಲಿನ 40 ಕ್ಕೂ ಹೆಚ್ಚು ಹಳ್ಳಿಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ರೋಗಿಗಳು ಹಾಗೂ ಶ್ರೀ ಕ್ಷೇತ್ರ ಉಚ್ಚoಗಿದುರ್ಗಕ್ಕೆ ವರ್ಷದ 365 ದಿನವೂ ಸಾವಿರಾರು ಭಕ್ತರೂ ಉಚ್ಚoಗೆಮ್ಮನ ದರ್ಶನಕ್ಕೆ ಬರುತ್ತಾರೆ. ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತುರ್ತುಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಇಲ್ಲದಂತಾಗಿದೆ.
ದುಬಾರಿ ಹಣ ಕೊಟ್ಟು ಖಾಸಗಿ ವಾಹನಗಳನ್ನು ಮಾಡಿಕೊಂಡು ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಜಿಲ್ಲಾ ಆರೋಗ್ಯ ಇಲಾಖೆ ಇತ್ತ ಕಡೆ ಗಮನಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.



