ಡಿವಿಜಿ ಸುದ್ದಿ, ಹರಿಹರ: ಭಾರೀ ಮಳೆಯಿಂದ ಒಮ್ಮೆಲೇ ನದಿ ನೀರು ಏರಿಕೆಯಾದ ಪರಿಣಾಮ 45ಕ್ಕೂ ಹೆಚ್ಚು ಕೋತಿಗಳು ತುಂಗಾಭದ್ರಾ ನದಿಯ ಪ್ರವಾಹದಲ್ಲಿ ಸಿಲುಕಿವೆ. ಕೋತಿಗಳ ರಕ್ಷಣೆಗೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸತತ ಎರಡು ದಿನಗಳಿಂದ ಪ್ರಯತ್ನಿಸುತ್ತಿದ್ದು, ರಕ್ಷಣೆ ಕಾರ್ಯ ಇನ್ನು ಕೂಡ ಪೂರ್ಣವಾಗಿಲ್ಲ.
ಜಿಲ್ಲೆಯ ಹರಿಹರದ ರಾಜನಹಳ್ಳಿ ಬಳಿಯ ತುಂಗಾಭದ್ರಾ ನದಿ ದಂಡೆಯಲ್ಲಿ ಕೋತಿಗಳು ಪ್ರವಾಹದಲ್ಲಿ ಸಿಲುಕಿವೆ. ಇವುಗಳನ್ನು ಹೊರ ತರಲು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ನದಿ ನೀರು ಏಕಾಏಕಿ ಬಂದಿದ್ದರಿಂದ ಮರದಲ್ಲಿ ಕುಳಿತಿದ್ದ ಕೋತಿಗಳು ಅಲ್ಲೇ ಉಳಿದು ಬಿಟ್ಟಿವೆ.

ಇಂದು ಸಹ ಬೆಳಗ್ಗೆಯಿಂದಲೇ ಕೋತಿಗಳ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದು, ಜನರು ಜಾಸ್ತಿ ಇರುವ ಕಾರಣ ಭಯಪಟ್ಟು ಕೋತಿಗಳು ಮರದಿಂದ ಕೆಳಗೆ ಬರುತ್ತಿಲ್ಲ. ರಕ್ಷಣಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆ ಬರುವ ಸಾಧ್ಯತೆ ಇದ್ದು, ಇದಕ್ಕಾಗಿ ಕಾಯುತ್ತಿದ್ದೇವೆ. ಕೋತಿಗಳು ಕುಳಿತ ಮರದಿಂದ ದಂಡೆವರೆಗೂ ಹಗ್ಗ ಕಟ್ಟಿದ್ದು, ಅವುಗಳಿಗೆ ಅಗತ್ಯವಾದ ಆಹಾರವನ್ನು ಸಹಾ ಇಡಲಾಗಿದೆ ಎಂದು ಅರಣ್ಯಾಧಿಕಾರಿ ಹಿದಾಯತ್ ತಿಳಿಸಿದರು.
ಕೋತಿಗಳ ರಕ್ಷಣೆಗೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ, ತಕ್ಷಣವೇ ನಮ್ಮ ಮನವಿಗೆ ಸ್ಪಂದಿಸಿ ಪ್ರಾಣಿಗಳ ರಕ್ಷಿಸಲು ಶ್ರಮಿಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ ತಿಳಿಸಿದರು.



