Connect with us

Dvgsuddi Kannada | online news portal | Kannada news online

ಏಡ್ಸ್ ಖಾಯಿಲೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ದಾವಣಗೆರೆ

ಏಡ್ಸ್ ಖಾಯಿಲೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಡಿವಿಜಿ ಸುದ್ದಿ, ದಾವಣಗೆರೆ : ಏಡ್ಸ್ ಖಾಯಿಲೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ದೇಶವು  3ನೇ ಸ್ಥಾನದಲ್ಲಿದೆ. ಈ ಸ್ಥಾನ ಹೀಗೆ ಮುಂದುವರಿದರೆ ಅಪಾಯವಿದೆ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ನಾಗರಾಜ್ ಎಲ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾವಣಗೆರೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ದಾವಣಗೆರೆ, ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ, ಅಭಯ ಸ್ಪಂದನ ಸ್ವಯಂ ಸೇವಾ ಸಂಸ್ಥೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಆಯೋಜಿಸಲಾಗಿದ್ದ `ವಿಶ್ವ ಏಡ್ಸ್ ದಿನಾಚರಣೆ’ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಏಡ್ಸ್ ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸಿ, ಜೀವನದ ಗುಣಾತ್ಮಕ ಮಟ್ಟ ಕಡಿಮೆ ಮಾಡುತ್ತದೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಏಡ್ಸ್ ಸೋಂಕು ಕಂಡು ಬಂದರೆ ಆ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಅತ್ಯಂತ ಕೆಳ ಮಟ್ಟಕ್ಕೆ ಕುಸಿಯುತ್ತದೆ. ಆದ್ದರಿಂದ ಸಾರ್ವಜನಿಕರು ಮತ್ತು ಎನ್‍ಜಿಒ ಗಳು ಒಟ್ಟಾಗಿ ಜನರಲ್ಲಿ ಏಡ್ಸ್‍ನ ಕುರಿತು ತಿಳುವಳಿಕೆಯನ್ನು ಮೂಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಸ್.ರಾಘವೇಂದ್ರ ಮಾತನಾಡಿ, ಮಾರಣಾಂತಿಕ ಖಾಯಿಲೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಮುದಾಯಗಳ ಸಹಭಾಗಿತ್ವ ಪ್ರಮುಖವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಯಾವುದೇ ಸಂಕೋಚವಿಲ್ಲದೇ ಸಾರ್ವಜನಿಕರು ಪಡೆಯಬೇಕು. ಏಡ್ಸ್ ಖಾಯಿಲೆಯು ಯಾವ ರೀತಿ ಬರುತ್ತದೆ ಎಂಬುದನ್ನು ಸಾರ್ವಜನಿಕರು ತಿಳಿಯಬೇಕು. ಒಂದು ವೇಳೆ ಇಂತಹ ಖಾಯಿಲೆಗಳು ಬಂದರೆ ಮಾನಸಿಕವಾಗಿ ಎದುರಿಸಲು ಸಿದ್ಧರಾಗಬೇಕು ಎಂದರು.

ಕಾನುನೂ ಸೇವ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್.ಬಡಿಗೇರ್, ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಖರೀದಿಸಲು ಮತ್ತು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಯೌವನಾವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಏಡ್ಸ್ ಎಂಬ ಮಾರಕ ಖಾಯಿಲೆ ಯಿಂದ ದೂರವಿರಬೇಕು. ರೋಗಬಂದ ನಂತರ ಪರಿತಪಿಸುವ ಬದಲು ರೋಗಗಳು ಬಾರದಂತೆ ಮುನ್ನೆಚರಿಕೆಯನ್ನು ವಹಿಸಬೇಕು. ಎಚ್.ಐ.ವಿ ಬಂದಿದೆ ಎಂದು ತಿಳಿದಾಕ್ಷಣ ಕುಗ್ಗಿ ಹೋಗದೇ ಅದಕ್ಕೆ ಪರಿಹಾರವನ್ನು ಕಂಡುಕೊಂಡು ಬದುಕುಬೇಕು ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಏಡ್ಸ್ ದಿನವನ್ನು ನಾವು ಸಂಭ್ರಮದಿಂದ ಆಚರಿಸುತ್ತಿಲ್ಲ. ಬದಲಾಗಿ ಏಡ್ಸ್ ಎಂಬ ಮಾರಣಾಂತಿಕ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಸಮುದಾಯಗಳು ಮಾಡಬೇಕು ಎಂದು ತಿಳಿಸಿದರು.

ಏಡ್ಸ್ ದಿನಾಚರಣೆ ಜಾಗೃತಿ ಜಾಥಾ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಏಡ್ಸ್ ದಿನಚಾರಣೆಯ ಅಂಗವಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಿಂದ ಆಯೋಜಿಸಲಾಗಿದ್ದ “ ವಿಶ್ವ ಏಡ್ಸ್ ದಿನ-2019” ಜಾಥಾಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚಾಲನೆ ನೀಡಿದರು. ವಿವಿಧ ಸಂಘ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಜಾಥಾದಲ್ಲಿ ಪರೀಕ್ಷಿಸಿದ ರಕ್ತ ಏಡ್ಸ್‍ನಿಂದ ಮುಕ್ತ, ಏಡ್ಸ್ ರೋಗಕ್ಕೆ ಮದ್ದಿಲ್ಲ ಎಚ್ಚರ ವಹಿಸಿದರೆ ಭಯವಿಲ್ಲ ಎಂಬ ಘೋಷವಾಕ್ಯಗಳನ್ನು ನಗರದ ಮುಖ್ಯಭಾಗಗಳಲ್ಲಿ ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ವೀರಗಾಸೆ ತಂಡದವರು ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕಲಾ ಪ್ರ್ರದರ್ಶನ ನಡೆಸಿಕೊಟ್ಟರು. ಐಸಿಟಿಸಿ ಕೇಂದ್ರ ಮತ್ತು ಸಿ.ಬಿ.ಒ(ಕಮ್ಯುನಿಟಿ ಬೇಸ್ಡ್ ಆರ್ಗನೈಸೇಷನ್)ದ ಸಹಭಾಗಿತ್ವದಲ್ಲಿ ಮಲ್ಲಿಕಾರ್ಜುನ, ರವಿಕುಮಾರ್ ಮತ್ತು ಸಂಗಡಿಗರು ‘ಸಮುದಾಯವೇ ಶಕ್ತಿ’ ಎಂಬ ಶೀರ್ಷಿಕೆಯಡಿ ಏಡ್ಸ್ ಜಾಗೃತಿ ನಾಟಕವನ್ನು ಪ್ರದರ್ಶಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top