ಡಿವಿಜಿ ಸುದ್ದಿ, ಬೆಂಗಳೂರು: ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರ ಅಂತ್ಯಸಂಸ್ಕಾರ ನಾಳೆ (ಭಾನುವಾರ) 11 ಗಂಟೆಗೆ ನಡೆಯಲಿದೆ. ಅತ್ಯಸಂಸ್ಕಾರವನ್ನು ಯಾವುದೇ ವಿಧಿವಿಧಾನವಿಲ್ಲದೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಜೊತೆ ಮಾತನಾಡಿದ ಚಿದಾನಂಮೂರ್ತಿ ಅವರ ಪುತ್ರ ವಿನಯ್ ಕುಮಾರ್, ನಮ್ಮ ತಂದೆ ನಿಧನರಾಗಿದ್ದು ಕೇವಲ ನಮ್ಮ ಕುಟುಂಬಕ್ಕೆ ಮಾತ್ರ ನಷ್ಟವಲ್ಲ, ಇಡೀ ರಾಷ್ಟ್ರಕ್ಕೆ ನಷ್ಟ. ಅವರು ದೇಶದ ಆಸ್ತಿಯಾಗಿದ್ದರು. ಕರ್ನಾಟಕ, ಕನ್ನಡ ಮಾತೃ ಭಾಷೆಯನ್ನು ಯಾರೂ ಬಿಡಬಾರದು ಎನ್ನುವುದು ಅವರ ಆಸೆಯಾಗಿತ್ತು. ಅವರ ಕಡೆ ಆಸೆಯಂತೆ ಯಾವುದೇ ವಿಧಿವಿಧಾನವಿಲ್ಲದೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದರು.
ನಾವು ವೀರಶೈವ ಸಮುದಾಯವರಾದರೂ, ತಂದೆಯಾಗಲಿ ನಾವಾಗಲಿ ವಿಭೂತಿ ಸಹ ಹಚ್ಚಿರಲಿಲ್ಲ. ಪೂಜೆ ಸಹ ಅವರು ಮಾಡುತ್ತಿರಲಿಲ್ಲ. ಲಿಂಗಾಯತರಲ್ಲಿ ಪಾರ್ಥಿವ ಶರೀರ ಹೂಳುವ ಪದ್ಧತಿ ಇದೆ. ಯಾಕೆ ಸುಡುತ್ತೀರ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ, ತಂದೆಯವರ ಆಸೆಯನ್ನು ನಾವು ನೆರವೇರಿಸಬೇಕಿದೆ. ಯಾವುದೇ ವಿಧಾನವನ್ನೂ ಅನುಸರಿಸಲ್ಲ. ಪೂಜೆಯನ್ನು ಸಹ ಮಾಡಲ್ಲ.
ಸರ್ಕಾರಿ ಗೌರವ ಹೊರತುಪಡಿಸಿ ನಾವೇನೂ ವಿಧಾನವನ್ನು ಅನುಸರಿಸಲ್ಲ. ತಂದೆಯ ಇಚ್ಛೆಯಂತೆ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಸುವ ತೀರ್ಮಾನವನ್ನು ನಾವು ಮಾಡಿದ್ದೇವೆ ಎಂದರು.ಕನ್ನಡ ನಾಡು, ನುಡಿ ಬಗ್ಗೆ ಸಂಶೋಧನೆ ಮಾಡಿದ್ದ ಚಿದಾನಂದ ಮೂರ್ತಿ ಅವರು ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು.



