ಡಿವಿಜಿ ಸುದ್ದಿ,ಚಾಮರಾಜನಗರ: ಕೊರೊನಾ ವೈರಸ್ ಭೀತಿ ಹಿನ್ನೆಲೆ SSLC ಪರೀಕ್ಷ ಮುಂದೂಡಲಾಗಿದ್ದು, ದೀರ್ಘ ರಜೆಯಿಂದ ವಿದ್ಯಾರ್ಥಿಗಳನ್ನು ಪುನಃ ಪರೀಕ್ಷೆಯ ಮನಸ್ಥಿತಿಗೆ ತರಲು ಪುನರ್ ಮನನದ ತರಗತಿ ನಂತರ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಸಲುವಾಗಿ ಪರೀಕ್ಷೆಗೂ ಮುನ್ನ 1 ವಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪುನರ್ ಮನನ ತರಗತಿ ನಡೆಯಲಿದೆ. ಏ. 14ರ ಬಳಿಕ ಪರೀಕ್ಷಾ ವೇಳಪಟ್ಟಿ ಪ್ರಕಟಿಸಲಾಗುವುದು. ರಾಜ್ಯದಲ್ಲಿ ಕೊರೊನಾ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದು ಏ. 14ರವರೆಗೆ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೀಪ ಬೆಳಗಲು ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಇದೊಂದು ಆಂದೋಲನ. ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಒಗ್ಗಟ್ಟು ತೋರಿಸಬೇಕಿದೆ ಎಂದರು. ಪುಣಜನೂರು ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿ ನಿರ್ಗತಿಕರ ಕ್ಷೇಮ ವಿಚಾರಿಸಿ ಲಾಕ್ಡೌನ್ ಮುಗಿಯುತ್ತಿದ್ದಂತೆ ನಿಮ್ಮ ನಿಮ್ಮ ಊರುಗಳಿಗೆ ಕಳುಹಿಸಲಾಗುವುದು ಎಂದು ಅವರಿಗೆ ಸಚಿವರು ಧೈರ್ಯ ಹೇಳಿದರು



