ಡಿವಿಜಿ ಸುದ್ದಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಭೂಗತ ಪಾತಕಿ ಜೈರಾಜ್ ಪಾತ್ರದಲ್ಲಿ ಟಗರು ಸಿನಿಮಾದ ಡಾಲಿ ಖ್ಯಾತಿಯ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.
ಟಗರು ಸಿನಿಮಾದಲ್ಲಿ ವಿಲನ್ ಪಾತ್ರದ ಅಭಿನಯದ ನಂತರ ಡಾಲಿ ಧನಂಜಯ್ ಗೆ ಆಫರ್ಗಳು ಅರಸಿಕೊಂಡು ಬರುತ್ತಿವೆ. ಇದೀಗ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಧನಂಜಯ್ ತಯಾರಾಗಿದ್ದು, ಸಿಲಿಕಾನ್ ಸಿಟಿಯ ಭೂಗತ ಪಾತಕಿ ಜೈರಾಜ್ ಪಾತ್ರದ ಮೂಲಕ ಡಾಲಿ ತೆರೆಯ ಮೇಲೆ ಬರಲು ಸಿದ್ಧತೆ ನಡೆಯುತ್ತಿದೆ. ಈ ಚಿತ್ರಕ್ಕೆ ಪರ್ತಕರ್ತ ಅಗ್ನಿಶ್ರೀಧರ್ ಕಥೆ ಬರೆದಿರುವುದು ಇನ್ನೊಂದು ವಿಶೇಷ.

ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪತ್ರಕರ್ತ ಅಗ್ನಿ ಶ್ರೀಧರ್ ಸಿನಿಮಾಗೆ ಕಥೆ ಬರೆದಿದ್ದಾರೆ. ಹೊಸ ಪ್ರತಿಭೆ ಶೂನ್ಯ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕಾಗಿ ಧನಂಜಯ್ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಡಾಲಿ ಸದ್ಯ ಎರಡು ಚಿತ್ರಗಳ ಕಮಿಟ್ಮೆಂಟ್ನಲ್ಲಿದ್ದು, ಈ ಸಿನಿಮಾಗಳು ಪೂರ್ಣಗೊಂಡ ನಂತರ ಜೈರಾಜ್ ಚಿತ್ರ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
1970-89ರ ಅವಧಿಯಲ್ಲಿ ಜಯರಾಜ್ ಇಡೀ ಬೆಂಗಳೂರಿನ್ನೇ ನಡುಗಿಸಿದ್ದ. ಅಷ್ಟೇ ಅಲ್ಲ ರಾಜ್ಯ ರಾಜಕೀಯದ ಮೇಲೂ ಹಿಡಿತ ಸಾಧಿಸಿದ್ದ. 1989ರಲ್ಲಿ ಈತನನ್ನು ಹತ್ಯೆ ಮಾಡಲಾಗಿತ್ತು. ಇದೀಗ ಜೈರಾಜ್ ಜೀವನದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದ್ದು, ಭೂಗತ ಪಾತಕಿ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ.



