ಡಿವಿಜಿಸುದ್ದಿ.ಕಾಂ, ದಾವಣಗೆರೆ: ಜನಸಾಮಾನ್ಯರ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಮುಗಿಸುವ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನದಲ್ಲಿ ಜನರ ಅವಹಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮದಿಂದ ಬಹಳಷ್ಟು ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥವಾಗುತ್ತವೆ. ಹಾಗೂ ಜಿಲ್ಲೆಯಲ್ಲಿನ ಅಧಿಕಾರಿಗಳ ಕಾರ್ಯವೈಖರಿಯೂ ತಿಳಿಯುತ್ತದೆ ಎಂದರು.
ಜನಸ್ಪಂದನ ಸಭೆಯಲ್ಲಿ ವೃದ್ದ ಮಹಿಳೆಯೋರ್ವರು ಈ ಹಿಂದಿನ ಸಭೆಯಲ್ಲಿ ಮಾಸಾಶನಕ್ಕೆ ಅರ್ಜಿ ನೀಡಿದ್ದು, ತ್ವರಿತಗತಿಯಲ್ಲಿ ಆ ಮಹಿಳೆಗೆ ಮಾಸಾಶನ ಮಂಜೂರು ಮಾಡಲು ಸಹಕರಿಸಿದ ಜಿಲ್ಲಾಧಿಕಾರಿಗಳಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.
ಚನ್ನಗಿರಿ ತಾಲ್ಲೂಕು ನವೀಲೆಹಾಳ್ ಗ್ರಾಮಸ್ಥರ ಪರವಾಗಿ ಟಿ.ಬಿ ಹರೀಶ್, ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿಯ ಮೀಯಾಪುರದಿಂದ ನಲ್ಕುದುರೆ, ನವೀಲೆಹಾಳ್ ಹಾಗೂ ಸೋಮ್ಲಾಪುರ ಗ್ರಾಮದವರೆಗಿನ ಐಟಿ ರಸ್ತೆ ಮಧ್ಯಭಾಗದಲ್ಲಿರುವ ನವೀಲೆಹಾಳ್ ಕರೇಕಟ್ಟೆ ರಸ್ತೆಯೂ ಕಳೆದ 25 ವರ್ಷಗಳಿಂದ ಅಭಿವೃದ್ಧಿಯಾಗದೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿ ಕ್ರಮ ಕೈಗೊಂಡು ರಸ್ತೆ ದುರಸ್ಥಿ ಕಾರ್ಯ ನಡೆಸುವಂತೆ ಜಿ.ಪಂ ಕಾರ್ಯ ನಿರ್ವಹಕಾಧಿಕಾರಿಗಳಿಗೆ ಸೂಚಿಸಿದರು.
ಶ್ರೀಘ್ರ ಚನ್ನಗಿರಿಯಲ್ಲಿ ಕೆಎಸ್ ಆರ್ ಸಿಟಿ ಡಿಪೋ
ಚನ್ನಗಿರಿ ತಾಲ್ಲೂಕು ದೊಡ್ಡಘಟ್ಟ ಗ್ರಾಮದ ಮರಿಸ್ವಾಮಿ ಎಸ್.ಟಿ ಮಾತನಾಡಿ, ಚನ್ನಗಿರಿ ಪಟ್ಟಣದಲ್ಲಿ ಕೆ.ಎಸ್.ಆರ್. ಟಿ.ಸಿ ಬಸ್ ಡಿಪೊ ಸ್ಥಾಪಿಸುವಂತೆ ಮಾನವಿ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊ ಸ್ಥಾಪಿಸಲು ಚನ್ನಗಿರಿ ಪಟ್ಟಣದಲ್ಲಿ ಚಿಕ್ಕೋಲಿ ಕೆರೆ ಗ್ರಾಮದ ಸರ್ವೆ ನಂ. 103 ರಲ್ಲಿ ಸುಮಾರು 4 ಎಕರೆ 34 ಗುಂಟೆ ಜಮೀನನ್ನು ಮಾಡಲು ಅನುಮತಿ ನೀಡಿದ್ದು, ಅತಿ ಶೀಘ್ರವಾಗಿ ಕಾರ್ಯ ಪ್ರಾರಂಭವಾಗಲಿದೆ. ಇದಲ್ಲದೆ, ಸರ್ಕಾರಕ್ಕೆ 99 ಹೆಚ್ಚುವರಿ ಬಸ್ಗಳನ್ನು ಕಲ್ಪಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಪರಿಸರ ಸಂರಕ್ಷಣಾ ವೇದಿಕೆ ಗಿರಿಶ್ ದೇವರಮನಿ ಮಾತನಾಡಿ, ನಗರದಲ್ಲಿ ರಸ್ತೆಗಳು ಹಾಗೂ ಫುಟ್ಪಾತ್ಗಳನ್ನು ನಿರ್ಮಿಸುತ್ತಿದ್ದು, ಗಿಡಗಳನ್ನು ಹಾಕಲು ಯಾವುದೇ ಸ್ಥಳವಕಾಶ ಕಲ್ಪಿಸಿಲ್ಲ. ಹಾಗೂ ನಗರದಲ್ಲಿ ಭಿಕ್ಷಾಟನೆ ಮಾಡುವವರನ್ನು ಹಿಡಿದು ನಿರಾಶ್ರಿತರ ಕೇಂದ್ರಗಳಿಗೆ ಬೀಡಬೇಕು ಎಂದು ಮನವಿ ಮಾಡಿದರು.
ನಗರದಲ್ಲಿ ಬೆಂಗಳೂರು ಮಾದರಿಯಲ್ಲಿ ರಸ್ತೆಗಳ ಪಕ್ಕದಲ್ಲಿರುವ ಮರಗಳನ್ನು ಆದಷ್ಟು ಉಳಿಸಿ ಹಾಗೂ ಫುಟ್ಪಾತ್ನಲ್ಲಿ ಗಿಡಗಳನ್ನು ನೆಡಲು ಅವಕಾಶ ಕಲ್ಪಿಸಿ ರಸ್ತೆ ನಿರ್ಮಾಣ ಮಾಡಬೇಕು. ನಗರದಲ್ಲಿ ಭಿಕ್ಷಾಟನೆ ಮಾಡುವವರನ್ನು ಕಾರ್ಯಾಚರಣೆ ನಡೆಸಿ ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಬಿಡುವಂತೆ ಅಧಿಕಾರಿಗಳಿಗೆ ತಸೂಚಿಸಿದರು
ತಾಲ್ಲೂಕಿನ ಆಲೂರು ಗ್ರಾಮದ ವ್ಯಕ್ತಿಯೊಬ್ಬರು ಆಸ್ಪತ್ರೆ ನಿರ್ಮಿಸಲು 2 ಎಕರೆ ಜಮೀನನ್ನು ದಾನವಾಗಿ ನೀಡಿದ್ದು, ಆಸ್ಪತ್ರೆಗೆ ತಮ್ಮ ಹೆಸರು ಇಡಲಾಗಿತ್ತು. ಆದರೆ ಈಗ ಆ ಹೆಸರನ್ನು ತೆಗೆದು ಹಾಕಲಾಗಿದೆ. ಆದ್ದರಿಂದ ತಮ್ಮ ಹೆಸರನ್ನು ಆಸ್ಪತ್ರೆಗೆ ಇಡಬೇಕೆಂದು ಮನವಿ ಮಾಡಿದರು ಹಾಗೂ ಗ್ರಾಮ ಪಂಚಾಯಿತಿಯವರು ಅದರ ಹಿಂಭಾಗದಲ್ಲಿರುವ ನಮ್ಮ ಜಮೀನಿಗೆ ಚರಂಡಿ ಮೂಲಕ ನೀರು ಹರಿಸಿದ್ದು, 5 ಎಕರೆ ಜಮೀನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಆ ನೀರನ್ನು ಬೇರೆಡೆ ಹರಿಸುವಂತೆ ಮನವಿ ಮಾಡಿದರೂ ಗ್ರಾಂ.ಪಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ದಾನವಾಗಿ ನೀಡಿದ ಭೂಮಿಯ ಮಾಲೀಕರ ಹೆಸರನ್ನು ಕಟ್ಟಡಕ್ಕೆ ಇಡಬೇಕಾಗುತ್ತದೆ. ಆದ್ದರಿಂದ ಈ ಕೂಡಲೇ ಆಸ್ಪತ್ರೆ ಕಟ್ಟಡಕ್ಕೆ ದಾನಿಗಳ ಹೆಸರನ್ನು ಇಡಲು ಸೂಚಿಸಿದ ಅವರು ಆಲೂರು ಗ್ರಾಮಕ್ಕೆ ಶೀಘ್ರವಾಗಿ ಭೇಟಿ ನೀಡಿ ಜಮೀನನ್ನು ಪರಿಶೀಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಪದ್ಮ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್ ವಿಜಯ್ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.