ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಪರಿಷ್ಕರಣೆಯನ್ನು ಕೈಬಿಟ್ಟು ಹಿಂದಿನ ಕಂದಾಯವನ್ನೆ ಪರಿಗಣಿಸಬೇಕೆಂದು ಒತ್ತಾಯಿಸಿ ದಾವಣಗೆರೆ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆಯ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ಪಾಲಿಕೆ ಸದಸ್ಯರುಗಳು ಮೌನ ಪ್ರತಿಭಟನೆ ನಡೆಸಿದರು. ಕೋವಿಡ್-19 ಸಂಕಷ್ಟದಿಂದ ಕಳೆದ 2 ತಿಂಗಳು ಆರ್ಥಿಕತೆ ಚಟುವಟಿಕೆ ಕುಂಠಿತವಾಗಿದೆ. ಯಾವುದೇ ವ್ಯಾಪಾರ ವಹಿವಾಟು ನಡೆದಿರುವುದಿಲ್ಲ. ಬಡವರಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ಧಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಕಂದಾಯ ಹೆಚ್ಚಳದಿಂದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕಂದಾಯ ಪರಿಷ್ಕರಣೆಯನ್ನು ಪಾಲಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ, ಚರ್ಚೆಯ ನಂತರ ಜನ ಸಾಮಾನ್ಯರಿಗೆ ಹೊರೆ ಆಗದಂತೆ ಹಾಗೂ ಸರ್ಕಾರಕ್ಕೂ ಸೂಕ್ತ ಕಂದಾಯ ಬರುವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು.
ಪಾಲಿಕೆ ಸದಸ್ಯರಾಗಿ ನಾವೆಲ್ಲರೂ 12-11-2019ಕ್ಕೆ ಚುನಾಯಿತರಾಗಿದ್ದು ಸರ್ಕಾರದ ವಿಳಂಬ ನೀತಿಯಿಂದ 19-02-2020ರಂದು ಪಾಲಿಕೆ ಅಸ್ಥಿತ್ವಕ್ಕೆಬಂತು. ಈ ಮಧ್ಯೆ ಚುನಾಯಿತ ಸದಸ್ಯರಿದ್ದ ನಮ್ಮನ್ನು ಕಡೆಗಣಿಸಿ ಪಾಲಿಕೆ ಆಡಳಿತಾಧಿಕಾರಿಗಳಾಗಿದ್ದ ಜಿಲ್ಲಾಧಿಕಾರಿಗಳು ಅವೈಜ್ಞಾನಿಕವಾಗಿ ಕಂದಾಯ ಪರಿಷ್ಕರಿಸಿ 19-01-2020ರಂದು ಸರ್ಕಾರಕ್ಕೆ ಕಳುಹಿಸಿರುತ್ತಾರೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮೋದನೆಯು ಸಹ ದೊರೆತಿದೆ. ಏಕಾಏಕಿ ಕಂದಾಯ ಶೇ. 18%ರಷ್ಟು ವಸತಿಗೆ ಹಾಗೂ ಶೇ. 24%ರಷ್ಟು ವಾಣಿಜ್ಯ ಮಳಿಗೆಗಳಿಗೆ ದರ ಏರಿಕೆ ಮಾಡಿರುವುದನ್ನು ಖಂಡಿಸಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ರಿಸರ್ವ ಬ್ಯಾಂಕುಗಳಿಂದ ಸಹಕಾರ ಸಂಘಗಳಿಂದ ಸಾಲದ ಬಾಕಿ ಕಟ್ಟಲು 6 ತಿಂಗಳ ಕಾಲಾವಕಾಶ ಘೋಷಿಸಿದೆ. ಇಂತಹ ಸಂಧರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ತೆಗೆದುಕೊಂಡಿರುವ ತೀರ್ಮಾನ ನಗರದ ಜನತೆಗೆ ಶಾಪವಾಗಿ ಪರಿಣಮಿಸಿದ್ದು, ಈ ಕೂಡಲೇ ಕಂದಾಯ ಪರಿಷ್ಕರಣೆಯನ್ನು ಕೈ ಬಿಟ್ಟು ಹಳೆ ಕಂದಾಯವನ್ನು ಪಾವತಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ.ಬಸವರಾಜ್, ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಜಿ.ಎಸ್.ಮಂಜುನಾಥ್, ಜೆ.ಎನ್.ಶ್ರೀನಿವಾಸ್, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್, ಜಿ.ಡಿ.ಪ್ರಕಾಶ್, ಜಾಕೀರ್ ಅಲಿ, ಮೊಹ್ಮದ್ ಕಬೀರ್ ಅಲಿ, ಸೈಯದ್ ಚಾರ್ಲಿ, ಕಲ್ಲಳ್ಳಿ ನಾಗರಾಜ್, ಉದಯ್ ಕುಮಾರ್, ಶ್ರೀಮತಿ ಆಶಾ ಉಮೇಶ್, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಶ್ರೀಮತಿ ಶಿವಲೀಲ ಕೊಟ್ರಯ್ಯ, ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ, ಶ್ರೀಮತಿ ಶ್ವೇತ ಶ್ರೀನಿವಾಸ್, ಶ್ರೀಮತಿ ನಾಗರತ್ನಮ್ಮ ಕೃಷ್ಣಪ್ಪ, ಎ.ಬಿ.ರಹೀಂ, ಚಮನ್ ಸಾಬ್, ಮುಖಂಡರುಗಳಾದ ಎಸ್.ಮಲ್ಲಿಕಾರ್ಜುನ್, ಸೋಮ್ಲಾಪುರದ ಹನುಮಂತಪ್ಪ, ಕೆ.ಎಲ್.ಹರೀಶ್ ಮತ್ತಿತರರಿದ್ದರು.