ಡಿವಿಜಿ ಸುದ್ದಿ, ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಮಹೋತ್ಸಕ್ಕೆ ರಾಜ್ಯದ ವಿವಿಧ ಪ್ರದೇಶದಿಂದ ಭಕ್ತರು ಹರಿದು ಬಂದಿದ್ದು, ಎಲ್ಲಡೆ ಸಂಭ್ರಮ ಮನೆ ಮಾಡಿದೆ. ದಾಸೋಹ ಮಹೋಪಕರಣ ಸಮಾರಂಭೋತ್ಸವ ನಂತರ ರಾತ್ರಿ ಅಮ್ಮನಿಗೆ ಭಕ್ತಿ ಸಮರ್ಪಣೆ ನಡೆಯಿತು. ಬುಧವಾರ ಬೆಳಗಿನಜಾವ ದೇವಿಗೆ ಬಿಟ್ಟಿದ್ದ ಕೋಣವನ್ನು ವಿಶೇಷ ಪೂಜೆ ಸಲ್ಲಿಸಿ ಸಿರಿಂಜ್ ಮೂಲಕ ರಕ್ತ ತೆಗೆದು ಬೇಯಿಸಿದ ಬಿಳಿ ಜೋಳದ ಚರಗಕ್ಕೆ ಬೆರಸಿ ಭಕ್ತಿ ಸಮರ್ಪಿಸಿದರು.

ಚರಗವನ್ನು ಐದು ಮನೆಗಳ ಮುತ್ತೈದೆಯರು ಉಪವಾಸದಿಂದ ಚರಗ ಬೇಯಿಸಿ ತಂದಿದ್ದರು. ಪ್ರಾಣಿ ಬಲಿಗೆ ಜಿಲ್ಲಾಡಳಿತ ನಿಷೇಧ ಹೇರಿದ್ದರಿಂದ ಸಿರಿಂಜ್ ಮೂಲಕ ರಕ್ತ ತೆಗೆದು ಚರಗದೊಂದಿಗೆ ದೇವಿಗೆ ಭಕ್ತಿ ಅರ್ಪಿಸಲಾಗುತ್ತದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್, ಪಾಲಿಕೆ ಆಯುಕ್ತರು ಸಹಿತ ವಿವಿಧ ಅಧಿಕಾರಿಗಳು ರಾತ್ರಿ ದೇವಸ್ಥಾನದ ಬಳಿಯೇ ಇದ್ದು, ಕೋಣ ಬಲಿ ಆಗದಂತೆ ನೋಡಿಕೊಂಡರು.

ದೇವಿಗೆ ಚರಗ ಸಮರ್ಪಿಸಿದ ನಂತರ ದುರ್ಗಾ ದೇವಿ ಮಹಾ ಪೂಜೆ ಪ್ರಾರಂಭವಾಗಿದ್ದು, ಭಕ್ತರು ಸಾಗರೋಪಾದಯಲ್ಲಿ ದೇವ ಸ್ಥಾನಕ್ಕೆ ಹರಿದು ಬಂದು ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ. ಮಂಗಳವಾರದ ಸಿಹಿ ಊಟದ ನಂತರ ಇಂದು ಪ್ರತಿ ಮನೆಮನೆಗಳಲ್ಲಿ ಮಾಂಸದೂಟ ನಡೆಯುತ್ತಿದೆ. ಪ್ರತಿ ಮೆನೆಯಲ್ಲಿಯೂ ಈಗಾಗಲೇ ಸಂಬಂಧಿಕರು ಬೀಡು ಬಿಟ್ಟಿದ್ದಾರೆ.

ನಗರದೇವತೆ ದುರ್ಗಾಂಬಿಕಾ ದೇವಿಗೆ ದೀಡು ನಮಸ್ಕಾರ, ಉರುಳು ಸೇವೆ ಮಂಗಳವಾರದಿಂದ ನಿರಂತರ ನಡೆಯುತ್ತಿದೆ. ಭಕ್ತರು ಬೇವಿನುಡುಗೆ ತೊಟ್ಟು ಹರಕೆ ತೀರಿಸುತ್ತಿದ್ದಾರೆ. ಇನ್ನು ಕೆಲವರು ಕೈಯಲ್ಲಿ ಒಂದಿಷ್ಟು ಬೇವು ಹಿಡಿದುಕೊಂಡು ಭಕ್ತಿ ಸಮರ್ಪಿಸುತ್ತಿದ್ದಾರೆ. ಹರಕೆ ನಂತರ ಸ್ನಾನ ಮಾಡಿ, ಹಳೆಬಟ್ಟೆಯನ್ನು ಅಲ್ಲೇ ಬಿಟ್ಟು ಹೊಸಬಟ್ಟೆ ತೊಡುತ್ತಿದ್ದಾರೆ.

ಇನ್ನು ದೇವೆಗೆ ಅರಿಶಿಣ ಕುಂಕುಮಗಳೊಂದಿಗೆ ಮಹಿಳೆಯರು ಉಡಿ ತುಂಬಿಸುತ್ತಿದ್ದಾರೆ. ದೇವಸ್ಥಾನ ಸುತ್ತಲೂ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು, ಎಲ್ಲಡೆ ಸಂಭ್ರಮದಿಂದ ದೇವಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ.




