ಡಿವಿಜಿ ಸುದ್ದಿ, ದಾವಣಗೆರೆ: ಅನಾಥ ಶವ ಮತ್ತು ಅಂಗಾಂಗಗಳನ್ನು ಅನಧಿಕೃತವಾಗಿ ಮಾರಾಟ ಮಾಡುವ ಜಾಲ ನಗರದಲ್ಲಿ ಕಾರ್ಯಗತವಾಗಿದೆ ಎಂದು ಜನ ಸ್ಪಂದನ ಸಭೆಯಲ್ಲಿ ದೂರ ಕೇಳಿ ಬಂತು. ಈ ಬಗ್ಗೆ ತನಿಖೆ ನಡೆಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಬಾತಿ ಗ್ರಾಮದಲ್ಲಿ ಹೈನುಗಾರಿಕೆ ಮತ್ತು ಮಹಿಳಾ ತರಬೇತಿ ಕೇಂದ್ರಕ್ಕೆ ಮೀಸಲಿಟ್ಟಿದ್ದ 3 ಎಕೆರೆ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಜಾಗ ಪಡೆದು ಮಲ್ಟಿ ಸ್ಪೆಷಲ್ ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜು ನಡೆಸಲಾಗುತ್ತಿದೆ. ಈ ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಗಾಗಿ ಅನಾಥ ಶವ ಮತ್ತು ಅಂಗಾಂಗಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ. ಈ ಜಾಗ 20 ವರ್ಷದ ಅವಧಿ ಮುಗಿದಿದ್ದರೂ ಆಸ್ಪತ್ರೆ ನಡೆಯುತ್ತಿದೆ. ಇಂತಹ ಜಮೀನನ್ನು ವಾಪಸ್ ಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ ಹರೀಶ್ ಎಂಬುವರು ದೂರು ನೀಡಿದರು.
ಉಪ ವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಅನಾಥ ಶವ ಬಗ್ಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.



