ಚಾಮರಾಜನಗರ: ನಾಡಿದ್ದು ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಭೆ ನಡೆಸಿ 8,9 ನೇ ತರಗತಿ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8, 9 ನೇ ತರಗತಿಗಳನ್ನು ಆರಂಭಿಸುವಂತೆ ಎಲ್ಲಾ ಕಡೆಯಿಂದ ಬೇಡಿಕೆ ಬರುತ್ತಿದೆ. ಕೆಲವು ಕಡೆ ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆ ಒತ್ತಾಯ ಬರುತ್ತಿದೆ. ಈ ಬಗ್ಗೆ ನಾಡಿದ್ದು ಆರೋಗ್ಯ ಸಚಿವ ಸುಧಾಕರ್ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷಾ ದಿನಾಂಕ ಘೋಷಣೆ ಮಾಡಿರುವ ಸಂಬಂಧ ಮಾತನಾಡಿ,ವಿದ್ಯಾರ್ಥಿಗಳಿಂದ ಒಳ್ಳೆಯ ಸ್ಪಂದನೆ ಬರುತ್ತಿದೆ. ಮಧ್ಯಾಹ್ನದವರೆಗೆ ನಡೆಯುತ್ತಿರುವ ತರಗತಿಗಳನ್ನು ಸಂಜೆ 5ರವರೆಗೂ ವಿಸ್ತರಿಸಬೇಕು ಎಂದು ಕೇಳುತ್ತಿದ್ದಾರೆ ಎಂದಿದ್ದಾರೆ.



